ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್, ವಿವಾಹಿತ ಮಹಿಳೆ ಸುಚಿತ್ರಾ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ. ಈ ವಿಚಾರವಾಗಿ ನಡೆದ ಜಗಳದಲ್ಲಿ, ಮಕ್ಕಳನ್ನು ರಕ್ಷಿಸಲು ಹೋದ ಮಹಿಳೆಯ ಗಂಡನ ಅಣ್ಣ ವಸಂತ್ ನಾಯ್ಕ್ ಕೊಲೆಯಾಗಿದ್ದಾರೆ. ಜ್ಯೋತಿಷಿ, ಮಹಿಳೆ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ (ಫೆ.03): ಜಿಲ್ಲೆಯ ಸಿದ್ದಾಪುರದ ವಾಸವಾಗಿದ್ದ ಸುಂದರ ಕುಟುಂಬವನ್ನು ಸಾಕುವುದಕ್ಕೆ ಗಂಡ ಬೆಂಗಳೂರಿಗೆ ಹೋದರೆ, ಸಮಾಜ ಸೇವೆ ಮಾಡುವುದಾಗಿ ಹಾಗೂ ಜ್ಯೋತಿಷ್ಯ ಹೇಳಿ ಉದ್ಧಾರ ಮಾಡುವುದಾಗಿ ನಂಬಿಸಿದ ಗುರೂಜಿ ಕಮಲಾಕರ್ ಭಟ್ ಇಡೀ ಸುಸಂಸ್ಕೃತ ಕುಟುಂಬದ ಸುಂದರ ಮಹಿಳೆಯನ್ನು ಬುಟ್ಟಿಗೆ ಬೀಳಿಸಿಕೊಂಡು ಸಂಸಾರ ಆರಂಭಿಸಿದ್ದಾನೆ. ಜೊತೆಗೆ, ಆಕೆಯ ಇಬ್ಬರು ಮಕ್ಕಳಿಗೆ ಕಿರುಕುಳ ಕೊಟ್ಟಾಗ ರಕ್ಷಣೆಗೆ ಬಂದ ಅಪ್ಪ, ದೊಡ್ಡಪ್ಪನ ಮೇಲೆ ಹಲ್ಲೆ ಮಾಡಿದ್ದು, ಚಾಕು ಇರಿತಕ್ಕೆ ಮಹಿಳೆಯ ಗಂಡನ ಅಣ್ಣ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಇದೀಗ ಗುರೂಜಿ ಕಮಲಾಕರ್ ಭಟ್, ಮಹಿಲೆ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಸೇರಿ ಹಲ್ಲೆ ಘಟನೆಯಲ್ಲಿ ಭಾಗಿಯಾಗಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ ಜ್ಯೋತಿಷಿ!
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ನಾಯ್ಕ್ (37) ಅವರ ಹೆಂಡತಿ ಮಕ್ಕಳು ಊರಿನಲ್ಲಿದ್ದರು. ಆಗ ಕುಟುಂಬದ ಸಮಸ್ಯೆಗಳ ನಿವಾರಣೆಗೆಂದು ಸಲಹೆ ಕೇಳಿದ ಮಹಿಳೆ ಸುಚಿತ್ರಾ ಗಂಡನಿಲ್ಲದೇ ಒಬ್ಬಂಟಿಯಾಗಿರುವುದನ್ನು ಗಮನಿಸಿದ ಜ್ಯೋತಿಷಿ ಕಮಲಾಕರ್ ಭಟ್ ಜ್ಯೋತಿಷ್ಯ ಸಲಹೆ ಜೊತೆಗೆ ಆಗಾಗ ಕರೆಸಿಕೊಂಡು ತನ್ನ ಬುಟ್ಟಿಗೆ ಬಿಳಿಸಿಕೊಂಡಿದ್ದಾನೆ. ನಂತರ, ಸಲುಗೆ ಹೆಚ್ಚು ಬೆಳೆಸಿಕೊಂಡು ಮಹಿಳೆಯೊಮದಿಗೆ ಅನೈತಿಕವಾಗಿ ಸಂಬಂಧ ಬೆಳೆಸಿದ್ದಾನೆ. ಈ ವಿಚಾರ ಮಹೇಶ್ ಅವರ ಮನೆಯಲ್ಲಿ ಗೊತ್ತಾಗಿದ್ದು, ಹೆಂಡತಿಯನ್ನು ಹದ್ದುಬಸ್ತಿನಲ್ಲಿಡಲು ಮಹೇಶ್ಗೆ ತಿಳಿಸಿದ್ದಾರೆ. ಆಗ ಮನೆಗೆ ಬಂದು ಹೆಂಡತಿಗೆ ಬೈದು ಬುದ್ಧಿ ಹೇಳಿದ್ದಾನೆ. ಆದರೆ, ಜೀವನಾಧಾರಕ್ಕೆ ಬೆಂಗಳೂರಿಗೆ ವಾಪಸ್ ಹೋಗಿ ಕೆಲಸ ಮಾಡಲು ಹೋದಾಗ ಪುನಃ ಹೆಂಡತಿ ಗುರೂಜಿ ಸಹವಾಸ ಮಾಡಿದ್ದಾಳೆ. ಇದನ್ನು ಪ್ರಶ್ನೆ ಮಾಡಿದ ಗಂಡನನ್ನು ತೊರೆದು, ಕಳೆದ 6 ತಿಂಗಳ ಹಿಂದೆಯೇ ಮಕ್ಕಳನ್ನು ಕರೆದುಕೊಂಡು ಸ್ವಾಮಿಜಿ ಮನೆಗೆ ಹೋಗಿ ಆಶ್ರಯ ಪಡೆದುಕೊಂಡಿದ್ದಾಳೆ. ಇಲ್ಲಿ ಮಹಿಳೆ ಮತ್ತು ಸ್ವಾಮೀಜಿ ಒಂದೇ ಕೋಣೆಯಲ್ಲಿ ಮಲಗಿದರೆ, ಮಕ್ಕಳನ್ನು ಬೇರೆ ಕೋಣೆಯಲ್ಲಿ ಮಲಗಿಸಲಾಗುತ್ತಿತ್ತು.
ಜ್ಯೋತಿಷಿ ಕಮಲಾಕರ್ ಭಟ್ ಮನೆಯಲ್ಲಿ ಆಶ್ರಯ
ದಿನ ಕಳೆದಂತೆ ಸಿದ್ದಾಪುರದ ಜ್ಯೋತಿಷಿ ಕಮಲಾಕರ್ ಭಟ್ ಮನೆಯಲ್ಲಿ ಸುಚಿತ್ರಾ ಆಶ್ರಯ ಪಡೆದು ಸುಖವಾಗಿದ್ದರೂ ಹೆಣ್ಣುಮಕ್ಕಳಾದ ಸುಮಶ್ರೀ ಮತ್ತು ಅಮೃತಾಗೆ ಕಿರುಕುಳ ಆರಂಭವಾಗಿತ್ತು. ತಾಯಿ ಮಾಡುತ್ತಿರುವುದು ತಪ್ಪು ಎಂಬ ಅರಿವು ಮಕ್ಕಳಿಗಿದ್ದು, ಪ್ರಶ್ನೆ ಮಾಡಿದ್ದಾರೆ. ಆಗ ಜ್ಯೋತಿಷಿಯ ಮನೆಯಲ್ಲಿ ತಾಯಿ ಮತ್ತು ಜ್ಯೋತಿಷಿ ಸೇರಿ ಮಗಳು ಸುಮಶ್ರೀಗೆ 'ನೀನು ಇಲ್ಲಿರಬೇಡ, ತಂದೆಯ ಬಳಿ ಹೋಗು, ಇಲ್ಲದಿದ್ದರೆ ವಿಷ ಹಾಕುತ್ತೇವೆ' ಎಂದು ಬೆದರಿಕೆ ಹಾಕುತ್ತಿದ್ದರು. ಇದರಿಂದಾಗಿ 'ಅಪ್ಪಾ ಸೇವ್ ಮೀ' ಇಲ್ಲವಾದರೆ ಸತ್ತು ಹೋಗುತ್ತೇನೆ ಎಂದು ಮೆಸೇಜ್ ಮಾಡಿದ್ದಾಳೆ. ಆಗ ಮನೆಗೆ ಶಿವಮೊಗ್ಗಕ್ಕೆ ಮಗಳಿಗೆ ಬರುವಂತೆ ಹೇಳಿ ಅಲ್ಲಿಂದ ಮಹೇಶ್ ತನ್ನ ಮಗಳನ್ನು ಕರೆದಿಕೊಂಡು ಮನೆಗೆ ಬಂದಿದ್ದಾನೆ.
ಮಗಳ ರಕ್ಷಣೆಗೆ ನಿಂತ ದೊಡ್ಡಪ್ಪನ ಮನೆಗೆ ನುಗ್ಗಿದ ‘ಡೆತ್ ಸ್ಕ್ವಾಡ್’
ಮಗಳನ್ನು ಜ್ಯೋತಿಷಿಯ ಮನೆಯಿಂದ ಬಿಡಿಸಿ ತಂದು ತನ್ನ ಅಣ್ಣ ವಸಂತ್ ನಾಯ್ಕ್ ಅವರ ಮನೆಯಲ್ಲಿ ಇರಿಸಿದ್ದರು. ಈ ವಿಚಾರ ತಿಳಿದ ಸುಚಿತ್ರಾ, ತನ್ನ ತಂದೆ ಲೋಕನಾಥ್ ಚೌಳಪ್ಪ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಐವರು ಅಪರಿಚಿತ ಗೂಂಡಾಗಳನ್ನು ಕರೆದುಕೊಂಡು ಕಾರಿನಲ್ಲಿ ವಸಂತ್ ಅವರ ಮನೆಗೆ ದಾಳಿ ಇಟ್ಟಿದ್ದಾರೆ. 'ಮಗಳನ್ನು ಈಗಲೇ ಕಳಿಸಿಕೊಡಿ' ಎಂದು ಶುರುವಾದ ವಾಗ್ವಾದ ಕ್ಷಣಾರ್ಧದಲ್ಲಿ ರಣರಂಗವಾಗಿ ಮಾರ್ಪಟ್ಟಿದೆ. ಆರೋಪಿಗಳು ತಂದಿದ್ದ ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ತನ್ನ ತಮ್ಮನ ಪರವಾಗಿ ನಿಂತಿದ್ದ ವಸಂತ್ ನಾಯ್ಕ್ (43) ಅವರಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಲಾಟೆ ತಡೆಯಲು ಬಂದ ಮಹೇಶ್ ನಾಯ್ಕ್ ಹಾಗೂ ಪಕ್ಕದ ಮನೆಯ ಕುಮಾರ್ (35) ಎಂಬುವವರಿಗೂ ಚಾಕು ಇರಿಯಲಾಗಿದೆ ಎಂದು ವಸಂತ್ ಅವರ ಪತ್ನಿ ಸಂಧ್ಯಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಖಾಕಿ ಬಲೆಗೆ ಬಿದ್ದ ಆರೋಪಿಗಳು
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಗುಣೇ ನಂಬರ್ 23/26 ಅಡಿಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ, ಆರೋಪಿಗಳಾದ ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ ಮತ್ತು ಲೋಕನಾಥ್ ಚೌಳಪ್ಪ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಿದ್ದಾರೆ. ಇದೊಂದು ಪೂರ್ವಯೋಜಿತ ಕೃತ್ಯವಾಗಿದ್ದು, ಕಾರಿನಲ್ಲಿ ಬಂದಿದ್ದ ಇತರೆ ವ್ಯಕ್ತಿಗಳ ಹಿನ್ನೆಲೆಯನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಕೌಟುಂಬಿಕ ಕಲಹಕ್ಕೆ ಜ್ಯೋತಿಷಿಯ ಪ್ರಚೋದನೆ ಮತ್ತು ಪತ್ನಿಯ ಹಠಮಾರಿತನವೇ ಈ ರಕ್ತಪಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.


