ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಹುಳು ಮಿಶ್ರಿತ ಬಿಸಿಯೂಟ ಸೇವಿಸಿದ 58 ಮಕ್ಕಳು ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಮಕ್ಕಳನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೀದರ್ (ಫೆ.03): ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 58 ಶಾಲಾ ಮಕ್ಕಳು ಏಕಾಏಕಿ ಅಸ್ವಸ್ಥಗೊಂಡಿರುವ ಆಘಾತಕಾರಿ ಘಟನೆ ಜಮಲಪೂರ್ ಗ್ರಾಮದಲ್ಲಿ ನಡೆದಿದೆ. ಶಾಲಾ ಆಡಳಿತ ಮಂಡಳಿಯ ಬೇಜವಾಬ್ದಾರಿತನದಿಂದಾಗಿ ಪುಟ್ಟ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಲಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಡೆದದ್ದೇನು?

ಜಮಲಪೂರ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟ ಬಡಿಸಲಾಗಿತ್ತು. ಊಟ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಮಕ್ಕಳಲ್ಲಿ ವಾಂತಿ ಮತ್ತು ಬೇಧಿ ಕಾಣಿಸಿಕೊಂಡಿದೆ. ಒಂದಾದ ಮೇಲೆ ಒಂದರಂತೆ ಸುಮಾರು 58 ಮಕ್ಕಳು ಹೊಟ್ಟೆನೋವಿನಿಂದ ಬಳಲಲಾರಂಭಿಸಿದಾಗ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣ ಎಚ್ಚೆತ್ತುಕೊಂಡ ಶಿಕ್ಷಕರು ಹಾಗೂ ಪೋಷಕರು ಅಸ್ವಸ್ಥ ಮಕ್ಕಳನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಕ್ಕಿಯಲ್ಲಿ ಹುಳು

ಅಡುಗೆಯವರ ನಿರ್ಲಕ್ಷ್ಯವೇ ಕಾರಣ? ಪ್ರಾಥಮಿಕ ತನಿಖೆಯ ಪ್ರಕಾರ, ಬಿಸಿಯೂಟಕ್ಕೆ ಬಳಸಲಾದ ಅಕ್ಕಿಯಲ್ಲಿ ಅತಿಯಾಗಿ ಹುಳುಗಳು ಇದ್ದವು ಎನ್ನಲಾಗಿದೆ. ಅಡುಗೆ ಮಾಡುವ ಸಮಯದಲ್ಲಿ ಪದಾರ್ಥಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ, ಹುಳು ಮಿಶ್ರಿತ ಅಕ್ಕಿಯನ್ನೇ ಬೇಯಿಸಿ ಮಕ್ಕಳಿಗೆ ಬಡಿಸಿದ್ದೇ ಈ ಅವಾಂತರಕ್ಕೆ ಮೂಲ ಕಾರಣ. 'ಹೊಟ್ಟೆ ತುಂಬಿಸಬೇಕಾದ ಶಾಲಾ ಅನ್ನ ಇಂದು ಮಕ್ಕಳನ್ನು ಆಸ್ಪತ್ರೆ ಪಾಲು ಮಾಡಿದೆ' ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.

ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆ

ಸದ್ಯ ಅಸ್ವಸ್ಥಗೊಂಡ ಎಲ್ಲಾ 58 ಮಕ್ಕಳಿಗೂ ಔರಾದ್ ತಾಲೂಕು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ವೈದ್ಯರ ಕಣ್ಗಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.