ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಹಿಂದೆ ಶಾಲಾ- ಕಾಲೇಜು ಮಕ್ಕಳು ಸೇರಿದಂತೆ ತಕ್ಕ ಮಟ್ಟಿಗೆ ಪ್ರಯಾಣಿಕರನ್ನು ಹೊಂದಿರುವ ಅಳ್ನಾವರ ಬಸ್‌ ನಿಲ್ದಾಣ ಇದೀಗ ಮಹಿಳಾ ಬಸ್‌ ನಿಲ್ದಾಣವಾಗಿ ಬದಲಾದಂತೆ ಬಾಸವಾಗುತ್ತಿದೆ. ಇಷ್ಟುಜನದಟ್ಟಣೆಯಾದರೂ ಇಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿದೆ.

ಶಶಿಕುಮಾರ ಪತಂಗೆ

ಅಳ್ನಾವರ (ಜೂ.29) :  ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಹಿಂದೆ ಶಾಲಾ- ಕಾಲೇಜು ಮಕ್ಕಳು ಸೇರಿದಂತೆ ತಕ್ಕ ಮಟ್ಟಿಗೆ ಪ್ರಯಾಣಿಕರನ್ನು ಹೊಂದಿರುವ ಅಳ್ನಾವರ ಬಸ್‌ ನಿಲ್ದಾಣ ಇದೀಗ ಮಹಿಳಾ ಬಸ್‌ ನಿಲ್ದಾಣವಾಗಿ ಬದಲಾದಂತೆ ಬಾಸವಾಗುತ್ತಿದೆ. ಇಷ್ಟುಜನದಟ್ಟಣೆಯಾದರೂ ಇಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿದೆ.

ಕುಡಿಯುವ ನೀರು:

ಸರ್ಕಾರ ಜನರ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಸಿಗಬೇಕು ಎನ್ನುತ್ತದೆ. ಆದರೆ, ಅಳ್ನಾವರ ಬಸ್‌ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರಿಗೆ ಕುಡಿಯಲು ಗಡಸು ನೀರೆ ಗತಿಯಾಗಿದೆ. ಅಲ್ಲದೇ ಇಲ್ಲಿ ಪ್ರಯಾಣಿಕರು ಸಹ ಸ್ವಚ್ಛತೆ ಕಾಪಾಡದೇ ಗುಟಕಾ, ಎಲೆ-ಅಡಕೆ ತಿಂದು ನೀರು ಕುಡಿಯುವ ಜಾಗದಲ್ಲಿಯೇ ಉಗಳುವುದರಿಂದ ನಲ್ಲಿ ಇರುವ ತೊಟ್ಟಿಗಬ್ಬೆದ್ದು ನಾರುತ್ತಿದೆ.

ಧಾರವಾಡ- ಬೆಂಗಳೂರು ವಂದೇ ಭಾರತ್‌ ರೈಲು ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ

ಕಸದ ರಾಶಿ

ಪ್ರಯಾಣಿಕರು ತಿಂಡಿ ಹಾಗೂ ತಿನಿಸಿನ ಪೊಟ್ಟಣಗಳನ್ನು ಕಸದ ತೊಟ್ಟಿಗೆ ಹಾಕದೆ ಬಸ್‌ ನಿಲ್ದಾಣದಲ್ಲಿಯೇ ಎಸೆಯುತ್ತಿದ್ದು, ಮಹಿಳಾ ಕೊಠಡಿ ಮತ್ತು ನಿಲ್ದಾಣ ಕಸದ ತೊಟ್ಟಿಯಂತೆ ಕಾಣುತ್ತಿದೆ. ಜೊತೆಗೆ ಬಸ್‌ ನಿಲ್ದಾಣದ ಹೊರಗಿನ ಕೆಲ ಮನೆಯವರು, ಎಗ್‌ ರೈಸ್‌ ಅಂಗಡಿ, ಹೋಟೆಲ್‌ಗಳು, ಬೇಕರಿಗಳಲ್ಲಿ ಉಳಿದ ತ್ಯಾಜ್ಯಗಳನ್ನು ಬಸ್‌ ನಿಲ್ದಾಣದ ಒಳಗೆ ತಂದು ಬಿಸಾಡುತ್ತಾರೆ. ಇದರ ಬಗ್ಗೆ ಸಾರ್ವಜನಿಕರು ಪಪಂ ಗಮನಕ್ಕೆ ತಂದರೆ ಅಲ್ಲಿನ ಅಧಿಕಾರಿಗಳು ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ.

ಶೌಚಾಲಯಗಳು:

ಇದೀಗ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾದರೂ ಇಲ್ಲಿನ ಶೌಚಾಲಯಗಳು ಮಾತ್ರ ತುಸು ನಿರ್ವಹಣೆಯಲ್ಲಿವೆ. ಆದರೆ ಈ ಶೌಚಾಲಯದ ಸುತ್ತುವರಿದು ಕೊಳಚೆ ಮಾತ್ರ ಗಬ್ಬೆದ್ದು ನಾರುತ್ತಿದೆ. ಮಹಿಳೆಯರು ಬಳಸುವ ಶೌಚಾಲಯದ ಬಾಗಿಲಲ್ಲಿಯೇ ಶೌಚಾಲಯಕ್ಕೆ ಬಳಸಿದ ನೀರು ಹರಿದು ಹೊಗುತ್ತಿರುವುದರಿಂದ ಇದೊಂದು ರೋಗಾಣುಗಳ ಉತ್ಪಾದನಾ ತಾಣದಂತೆ ಗೋಚರಿಸುತ್ತಿದೆ.

ಟಿಕೆಟ್‌ ದುರುಪಯೋಗ

ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್‌ ನೀಡುವುದರಿಂದ ಮಹಿಳೆಯರು ಒಂದು ಬಸ್ಸಿನಲ್ಲಿ ಕುಳಿತು ಟಿಕೆಟ್‌ ಪಡೆದು ಬಸ್ಸನ್ನು ಬೇಗ ಬಿಡದಿದ್ದರೆ ಬೇರೆ ಬಸ್ಸಿಗೆ ಹತ್ತಿ ಹೋಗುತ್ತಿದ್ದಾರೆ. ಆದರೆ, ಇದರಿಂದ ಬಸ್‌ ನಿರ್ವಾಹಕರು ಸಂಕಷ್ಟಕ್ಕೆ ಎದುರಾಗುತ್ತಿದ್ದಾರೆ. ಮೇಲಧಿಕಾರಿಗಳು ತಪಾಸಣೆಗೆ ಬಂದರೆ ನಮಗೆ ದಂಡ ವಿಧಿಸುತ್ತಾರೆ ಎಂದು ಹೇಳುತ್ತಾರೆ ನಿರ್ವಾಹಕ ಸಂತೋಷ ಎಚ್‌.

ಬಸ್‌ಗಳು ಸ್ಥಗಿತ:

ಹುಬ್ಬಳಿಯಿಂದ ಪಣಜಿ ಮತ್ತು ಹಿರೆಕೇರೂರದಿಂದ ಪಣಜಿಗೆ ಬೆಳಗೆ ಮತ್ತು ಸಂಜೆ ಸಮಯದಲ್ಲಿ ಹೊಗುವ 5 ಹೊರ ರಾಜ್ಯ ಸಾರಿಗೆ ಬಸ್‌ಗಳು ಬಂದ್‌ ಆಗಿದ್ದು ಅಳ್ನಾವರದಿಂದ ಗೋವಾಕ್ಕೆ ದುಡಿಯಲು ಹೋಗುವ ಜನರಿಗೆ ತೊಂದರೆಯಾಗಿದೆ. ಹುಬ್ಬಳ್ಳಿಯಿಂದ ಹೊರಡುವ ಹೊರ ರಾಜ್ಯ ಸಾರಿಗೆಗಳಿಗೆ ಶಕ್ತಿ ಯೋಜನೆಯ ಟಿಕೆಟ್‌ಗಳು ನಡೆಯುವುದಿಲ್ಲ ಎಂಬ ಕಾರಣಕ್ಕೆ ಹುಬ್ಬಳ್ಳಿ ವಿಭಾಗದ 3 ಸಾರಿಗೆಗಳನ್ನು ರದ್ದು ಮಾಡಿ ಕರ್ನಾಟಕದ ಗಡಿಯಾದ ಅನಮೋಡದ ವರೆಗೆ ಮಾತ್ರ ಬಸ್‌ ಓಡಿಸುತ್ತಿದ್ದಾರೆ.

ಬೆಂಗಳೂರು-ಧಾರವಾಡ ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ ಚಾಲನೆ, ಕರ್ನಾಟಕದ 2ನೇ ಎಕ್ಸ್‌ಪ್ರೆಸ್ ರೈಲು ಹೆಗ್ಗಳಿಕೆ!

ಈ ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ಪ್ರಯಾಣಿಕರು ತಾವು ತಿಂದಿರುವ ತಿಂಡಿಗಳ ಹಾಳೆಗಳನ್ನು ಡಸ್ಟ್‌ ಬಿನ್‌ಗೆ ಹಾಕದೆ ಎಲ್ಲೆಂದರಲ್ಲಿ ಎಸೆಯುತ್ತಾರೆ. ನಿಲ್ದಾಣವನ್ನು ಸ್ವಚ್ಛವಾಗಿಡುವುದು ನಮ್ಮ ಸಾರ್ವಜನಿಕರು ಜವಾಬ್ದಾರಿ.

ಸಹನಾ, ಕಾಲೇಜು ವಿದ್ಯಾರ್ಥಿ.