Asianet Suvarna News Asianet Suvarna News

Council Election Karnataka: ಬಿಜೆಪಿಗೆ ಯಾವ ಪಕ್ಷದ ಮೈತ್ರಿ ಅನಿವಾರ್ಯವಲ್ಲ

  • ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ವವಲ್ಲ. ಬಿಜೆಪಿಗೆ ಯಾರ ಮೈತ್ರಿಯೂ ಬೇಕಾಗಿಲ್ಲ
  • ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ದೊಡ್ಡ ಪಕ್ಷ ಬಿಜೆಪಿ 
alliance with any party is not necessary for the BJP says Srinivas Prasad snr
Author
Bengaluru, First Published Dec 8, 2021, 10:56 AM IST

 ಮೈಸೂರು(ಡಿ.08):  ಬಿಜೆಪಿಗೆ (BJP) ಯಾವ ಪಕ್ಷದ ಮೈತ್ರಿಯೂ ಅನಿವಾರ್ವವಲ್ಲ. ಬಿಜೆಪಿಗೆ ಯಾರ ಮೈತ್ರಿಯೂ ಬೇಕಾಗಿಲ್ಲ ಎಂದು ಚಾಮರಾಜನಗರದ (Chamarajanagar) ಸಂಸದ ವಿ. ಶ್ರೀನಿವಾಸ ಪ್ರಸಾದ್‌ (Shrinivas Prasad) ತಿಳಿಸಿದರು. ಮೈಸೂರಿನ ಜಯಲಕ್ಷ್ಮಿ ಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ (Election) ಕಾಂಗ್ರೆಸ್‌ - ಜೆಡಿಎಸ್‌ (Congress -JDS) ಮೈತ್ರಿಯಿಂದ ಗೆದ್ದಿದ್ದು ಎಷ್ಟು ಸ್ಥಾನ ಅಂತಾ ಗೊತ್ತಿದೆ. ಯಾರ ಮೈತ್ರಿಯೂ ಬಿಜೆಪಿಗೆ ಅಗತ್ಯವಿಲ್ಲ. ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ದೊಡ್ಡ ಪಕ್ಷ ಬಿಜೆಪಿ ಎಂದು ಹೇಳಿದರು.

ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಬಿಜೆಪಿ ಬಗ್ಗೆ ಟೀಕೆ ಮಾಡುವುದು ಸರಿ. ತಮ್ಮ ಟೀಕೆಗೆ ಆರ್‌ಎಸ್‌ಎಸ್‌ (RSS) ಬಳಸಿಕೊಳ್ಳುವುದು ಸರಿಯಲ್ಲ. ಆರ್‌ಎಸ್‌ಎಸ್‌ ಒಂದು ರಾಜಕೀಯ ಪಕ್ಷವಲ್ಲ (Political Party). ಹೀಗಾಗಿ ಅದರ ಮೇಲೆ ರಾಜಕೀಯವಾಗಿ ಟೀಕೆ ಸಲ್ಲದು. ಆರ್‌ಎಸ್‌ಎಸ್‌ ಒಂದು ಸಾಂಸ್ಕೃತಿಕ ಸಂಘಟನೆ ಆಗಿದೆ. ಆರ್‌ಎಸ್‌ಎಸ್‌ ಬಗ್ಗೆ ಯಾಕೆ ಟೀಕೆ ಮಾಡ್ತಾರೋ ಗೊತ್ತಿಲ್ಲ ಎಂದರು.

ವಿಪ ಚುನಾವಣೆಯಲ್ಲಿ (MLC Election) ಬಿಜೆಪಿಗೆ ಜೆಡಿಎಸ್‌ ಬೆಂಬಲದ ಅಗತ್ಯವಿಲ್ಲ. ಕೇವಲ 4- 5 ಕ್ಷೇತ್ರಗಳಲ್ಲಿ ಜೆಡಿಸ್‌ ಬೆಂಬಲ ನೀಡಿದರೆ ಬಿಜೆಪಿಗೆ ಅನುಕೂಲ ಆಗಲಿದೆಯಷ್ಟೇ. ಹೈ ಕಮಾಂಡ್‌ ಮಟ್ಟದಲ್ಲಿ ಬೆಂಬಲ ಪಡೆಯುವ ವಿಚಾರ ನಿರ್ಧಾರವಾಗಲಿದೆ ಎಂದು ಅವರು ತಿಳಿಸಿದರು.

ಆರ್‌. ರಘುಗೆ ಗೆಲುವು- ವಿಶ್ವಾಸ :  ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಜೆಪಿ (BJP) ಅಭ್ಯರ್ಥಿ ಆರ್‌. ರಘು ಪರವಾಗಿ ಪ್ರಚಾರಕ್ಕೆ ತೆರಳಲು ನನಗೆ ಸಾಧ್ಯವಾಗಿಲ್ಲ. ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ (Yediyurappa),  ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ವ್ಯಾಪಕ ಪ್ರಚಾರ ಮಾಡಿದ್ದಾರೆ. ಆರೋಗ್ಯ ಸರಿಯಿಲ್ಲದ ಕಾರಣ ನಾನು ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದರು.

ಮೊದಲೆಲ್ಲಾ ಕಾಂಗ್ರೆಸ್‌- ಜೆಡಿಎಸ್‌ ನಡುವೆ ಮಾತ್ರ ನೇರ ಸ್ಪರ್ಧೆ ಏರ್ಪಡುತ್ತಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಪ್ರಬಲವಾಗಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಬಾರಿಯ ಚುನಾವಣೆಯಲ್ಲಿ (Election) ಬಿಜೆಪಿ ಅಭ್ಯರ್ಥಿ ಆರ್‌. ರಘು ಗೆಲುವಿನ ಬಗ್ಗೆ ವಿಶ್ವಾಸವಿದೆ. ಮೈಸೂರು- ಚಾಮರಾಜನಗರ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರ್‌. ರಘು ಅವರಿಗೆ ಮೊದಲ ಪ್ರಾಶಸ್ತ್ಯ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar), ಶಾಸಕ ಸಿ.ಎಸ್‌. ನಿರಂಜನ ಕುಮಾರ್‌, ಬಿಜೆಪಿ (BJP) ಅಭ್ಯರ್ಥಿ ಆರ್‌. ರಘು, ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್‌ ಮೊದಲಾದವರು ಇದ್ದರು.

ರಘು ಗೆಲುವು ಖಚಿತ

ಕೆ.ಆರ್‌. ನಗರ : ಮೈಸೂರು ಮತ್ತು ಚಾಮರಾಜನಗರ (chamarajanagar) ಜಿಲ್ಲೆಗಳ ದ್ವಿಸದಸ್ಯ ಕ್ಷೇತ್ರಗಳಿಂದ ವಿಧಾನ ಪರಿಷತ್‌ ಚುನಾವಣೆಗೆ (Election) ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆರ್‌. ರಘು ಕೌಟಿಲ್ಯ ಅವರ ಪರವಾಗಿ ಎರಡು ಜಿಲ್ಲೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಅವರ ಗೆಲುವು ನಿಶ್ಚಿತ ಎಂದು ಜಿಲ್ಲಾ ಗ್ರಾಮಾಂತರ ಬಿಜೆಪಿ ವಕ್ತಾರ ಮಿರ್ಲೆ ಶ್ರೀನಿವಾಸಗೌಡ ಹೇಳಿದರು.

ತಾಲೂಕಿನ ಹಂಪಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಗ್ರಾಪಂ ಸದಸ್ಯರ ಮನೆಗಳಿಗೆ ತೆರಳಿ ಪಕ್ಷದ ಅಭ್ಯರ್ಥಿಯ ಪರವಾಗಿ ಮತ ಯಾಚಿಸಿದ ನಂತರ ಅವರು ಮಾತನಾಡಿದರು.ರಘು ಕೌಟಿಲ್ಯ ಅವರ ಗೆಲುವಿಗಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಿಜೆಪಿ ಚುನಾಯಿತ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರ ಜತೆಗೆ ರಾಜ್ಯಮಟ್ಟದ ನಾಯಕರು ಶ್ರಮಿಸುತ್ತಿದ್ದು, ನಮ್ಮ ಮನವಿಗೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವೈ. ಮಂಜು, ಟಿಎಪಿಸಿಎಂಎಸ್‌ (TAPCMS) ಅಧ್ಯಕ್ಷ ಎಚ್‌.ಡಿ. ಪ್ರಭಾಕರ್‌ ಜೈನ್‌, ಜಿಲ್ಲಾ ಗ್ರಾಮಾಂತರ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾರಾ ತಿಲಕ್‌, ಜಿಲ್ಲಾ ಓಬಿಸಿ ಕಾರ್ಯದರ್ಶಿ ಕೃಷ್ಙ, ತಿಪ್ಪೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಹದೇವನಾಯಕ, ಬಿಜೆಪಿ ಮುಖಂಡ ನಾಗರಾಜನಾಯಕ, ಗ್ರಾಪಂ ಸದಸ್ಯರಾದ ರಾಮೇಗೌಡ ಪವಿತ್ರಾ, ಕಲಾವತಿ ಪಾರ್ಥ, ನಾಗಮಣಿ ರಮೇಶ್‌, ಕಾರ್ತಿಕ್‌ ಇದ್ದರು.

Follow Us:
Download App:
  • android
  • ios