Asianet Suvarna News Asianet Suvarna News

ಹೊಸ ಉದ್ಯಮ, ಉದ್ಯೋಗ ಸೃಷ್ಟಿ ಮಾಡುವ ಗುರಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ನನ್ನ ಸ್ನೇಹಿತ ವರ್ಗ ಮತ್ತು ಹಿತೈಷಿಗಳು ಅನೇಕ ದಿನಗಳಿಂದ ಸೌಹಾರ್ದ ಸಹಕಾರಿ ಸಂಘವನ್ನು ಪ್ರಾರಂಭಿಸಿ ನಮ್ಮ ತಾಲೂಕಿನ ನಿರುದ್ಯೋಗಿ ಯುವಕರಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಉದ್ಯಮಿಗಳ ಸಂಖ್ಯೆ ಹೆಚ್ಚಿಸೊಣ ಎಂದು ಒತ್ತಾಯಿಸುತ್ತಿದ್ದ ಪರಿಣಾಮ ಈ ಸಹಕಾರಿ ಸಂಘ ಪ್ರಾರಂಭಿಸಲಾಗಿದೆ ಎಂದ ಲಕ್ಷ್ಮಣ ಸವದಿ. 

Aim to Create New Business and Employment Says Laxman Savadi grg
Author
First Published Mar 8, 2023, 10:00 PM IST | Last Updated Mar 8, 2023, 10:00 PM IST

ಅಥಣಿ(ಮಾ.08): ಜನರಿಗೆ ಸುಲಭ ಸೇವೆಗಳನ್ನು ನೀಡುವಲ್ಲಿ ಸೌಹಾರ್ದ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ. ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆಯ ಜಿಲ್ಲೆಯ ವ್ಯಾಪ್ತಿಗಳಲ್ಲಿ ಹೊಸ ಹೊಸ ಉದ್ಯೋಗವನ್ನು ನೀಡುವುದು ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಸಹಕಾರಿ ಸಂಘದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ನೀಡಲಾಗುವುದು ಎಂದು ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದಲ್ಲಿ ಮೂರು ಜಿಲ್ಲೆಗಳ ವ್ಯಾಪ್ತಿಯ ನೂತನವಾಗಿ ಪ್ರಾರಂಭಗೊಂಡ ಶ್ರೀಲಕ್ಷ್ಮಣ ಸವದಿ ಸೌಹಾರ್ದ ಸಹಕಾರಿ ಸಂಘವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಸ್ನೇಹಿತ ವರ್ಗ ಮತ್ತು ಹಿತೈಷಿಗಳು ಅನೇಕ ದಿನಗಳಿಂದ ಸೌಹಾರ್ದ ಸಹಕಾರಿ ಸಂಘವನ್ನು ಪ್ರಾರಂಭಿಸಿ ನಮ್ಮ ತಾಲೂಕಿನ ನಿರುದ್ಯೋಗಿ ಯುವಕರಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಉದ್ಯಮಿಗಳ ಸಂಖ್ಯೆ ಹೆಚ್ಚಿಸೊಣ ಎಂದು ಒತ್ತಾಯಿಸುತ್ತಿದ್ದ ಪರಿಣಾಮ ಈ ಸಹಕಾರಿ ಸಂಘ ಪ್ರಾರಂಭಿಸಲಾಗಿದೆ ಎಂದರು.

'ಕಾಂಗ್ರೆಸ್‌ ಪಕ್ಷಕ್ಕೆ ನೀಡಿದರೇ ಕಸದ ಬುಟ್ಟಿಗೆ ಹಾಕಿದಂತೆ'

ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಈ ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಸೌಹಾರ್ದ ಸಹಕಾರಿ ಸಂಘದ ಶಾಖೆಗಳನ್ನು ಮುಂದಿನ 5 ವರ್ಷಗಳಲ್ಲಿ ರಾಜ್ಯದ 10 ಜಿಲ್ಲೆಗಳಿಗೆ ವಿಸ್ತರಿಸುವ ಹಾಗೂ .1 ಸಾವಿರ ಕೋಟಿಗೂ ಅಧಿಕ ವಹಿವಾಟು ಮಾಡುವ ಗುರಿ ತಮ್ಮದಾಗಿದೆ. ಸೌಹಾರ್ದ ಸಹಕಾರಿ ಸಂಘದಿಂದ ವಾಹನ, ಬಂಗಾರ, ನಗದು ಪತ್ತಿನ, ಗೃಹ, ಸಣ್ಣ ಮತ್ತು ದೊಡ್ಡ ಕೈಗಾರಿಕೆ, ಮಧ್ಯಮ ಹಾಗೂ ದೀರ್ಘಾವಧಿ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುವುದು. ಸಹಕಾರ ಸಂಘದ ಶಾಖೆಗಳನ್ನು ಪ್ರಾರಂಭಿಸುವ ಮೂಲಕ ನೇರವಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಸಹಕಾರ ಸಂಘದ ಮೂಲಕ ಸಾಲ ಕೊಡುವ ಮೂಲಕ ಹೊಸ ಹೊಸ ಉದ್ಯಮ, ಕೈಗಾರಿಕೆಗಳಲ್ಲಿ ಉದ್ಯೋಗ ಸೃಷ್ಟಿಮಾಡುವ ಗುರಿ ತಮ್ಮದಾಗಿದೆ. ತಾಲೂಕಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ವಿಜಯಪುರ ಷಣ್ಮುಖರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆಶೀರ್ವಚನ ನೀಡಿದ ಅವರು, ಸಹಕಾರ ಸಂಘದಲ್ಲಿ ಅಪಾರ ಅನುಭವ ಹೊಂದಿರುವ ಈ ಭಾಗದ ರಾಜಕೀಯ ಮುತ್ಸದ್ದಿ ಲಕ್ಷ್ಮಣ ಸವದಿ ಅವರ ಹೆಸರಿನಲ್ಲಿ ಸಹಕಾರಿ ಸಂಘವನ್ನು ಸ್ಥಾಪನೆ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಸೌಹಾರ್ದ ಸಹಕಾರಿ ಸಂಘದ ಮೂಲಕ ತಾಲೂಕಿನಲ್ಲಿ ಜನರಿಗೆ ಉದ್ಯೋಗ, ವ್ಯಾಪಾರ ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ. ಈ ಸಹಕಾರಿ ಸಂಘವನ್ನು ಆಡಳಿತ ಮಂಡಳಿಯ ಎಲ್ಲ ಸದಸ್ಯರು ಪಾರದರ್ಶಕವಾಗಿ ನಡೆಸಿಕೊಂಡು ಹೋಗಬೇಕು. ಇಂದು ಆರಂಭಗೊಂಡ ಈ ಸಹಕಾರಿ ಸಂಘ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪರಪ್ಪ ಸವದಿ, ಮುರುಗೆಪ್ಪ ತೊದಲುಬಾಗಿ, ಜಿ.ಎಂ.ಪಾಟೀಲ, ಶಂಕ್ರಯ್ಯ ಸಾಲಿಮಠ, ಚಿದಾನಂದ ಸವದಿ, ಮಲ್ಲೇಶ ಸವದಿ, ಸಂತೋಷ ಸಾವಡಕರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಬೆಳಗಾವಿ: ಭಗ್ನಗೊಂಡ ನಾಲ್ಕು ಸಾವಿರ ದೇವರ ಫೋಟೋಗಳಿಗೆ ಅಗ್ನಿಸ್ಪರ್ಶ

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಸೌಹಾರ್ದ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಧ್ಯಕ್ಷರಾಗಿ ಹಾಗೂ ನಂದಗಾಂವ ಗ್ರಾಮದ ಪ್ರಗತಿ ಪರ ರೈತ ಮುತ್ತಣ್ಣ ಕಾತ್ರಾಳ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಸಹಕಾರ ಇಲಾಖೆ ಅಧಿಕಾರಿ ಆರ್‌.ಎನ್‌.ನೂಲಿ ಘೋಷಸಿದರು.

ಸಂಘದ ನಿರ್ದೇಶಕರಾಗಿ ಶಿವಕುಮಾರ ಸವದಿ, ಶಂಭುಲಿಂಗ ಮಮದಾಪುರ, ಸೈಬಣ್ಣ ಕಮತಗಿ, ಶಿವರುದ್ರ ನೇಮಗೌಡ, ಸಂತೋಷ ಗಾಣಿಗೇರ, ಶಂಕರ ನಂದೇಶ್ವರ, ಪ್ರಸನ್ನ ಸಗರಿ, ಮುರಿಗೆಪ್ಪ ಭಾವಿ, ಸಿದ್ಧಪ್ಪ ಲೋಕುರ, ಜಡೆಪ್ಪ ಕುಂಬಾರ, ರಮೇಶ ಪಟ್ಟಣ, ಕವಿತಾ ನಾಯಿಕ, ಪ್ರೀತಿ ವರಲ್ಯಾನಿ ಆಯ್ಕೆಯಾದರು.

Latest Videos
Follow Us:
Download App:
  • android
  • ios