ಮದುವೆಗೆ ಹೆಣ್ಣು ಹುಡುಕಲು ವಧು ವರರ ಅನ್ವೇಷಣಾ ಕೇಂದ್ರಕ್ಕೆ ಹೋಗುವವರನ್ನು ನೋಡಿದ್ದೇವೆ ಇಲ್ಲವೇ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಜಾಹೀರಾತನ್ನು ಹಾಕಿ ಹೆಣ್ಣು ಗಂಡು ಹುಡುಕುವವರನ್ನು ಕೂಡ ನೋಡಿರಬಹುದು.

ವರದಿ: ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ

Add Asianetnews Kannada as a Preferred SourcegooglePreferred

ಶಿವಮೊಗ್ಗ (ನ.26): ಮದುವೆಗೆ ಹೆಣ್ಣು ಹುಡುಕಲು ವಧು ವರರ ಅನ್ವೇಷಣಾ ಕೇಂದ್ರಕ್ಕೆ ಹೋಗುವವರನ್ನು ನೋಡಿದ್ದೇವೆ ಇಲ್ಲವೇ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಜಾಹೀರಾತನ್ನು ಹಾಕಿ ಹೆಣ್ಣು ಗಂಡು ಹುಡುಕುವವರನ್ನು ಕೂಡ ನೋಡಿರಬಹುದು. ಕೊನೆಗೆ ಸಂಬಂಧಿಕರ ಮೂಲಕ ಅಥವಾ ಮ್ಯಾರೇಜ್ ಬ್ರೋಕರ್‌ಗಳ ಮೂಲಕ ಹೆಣ್ಣು ಹುಡುಕಾಟ ನಡೆಸಿದ್ದನ್ನು ಕೂಡ ಕೇಳಿರಬಹುದು. ಆದರೆ ಇನ್ನೊಬ್ಬ ಭೂಪ ಹೆಣ್ಣು ಹುಡಕಲು ನಡೆಸಿದ ಪ್ರಯತ್ನ ಮಾತ್ರ ವಿಚಿತ್ರವೇ ಸೈ..!. ಇಂತಹದೊಂದು ಪ್ರಯತ್ನವನ್ನು ಮತ್ಯಾರು ನಡೆಸಲಿಕ್ಕೆ ಸಾಧ್ಯವಿಲ್ಲ ಎಂಬಂತೆ ಈ ಯುವಕ ನಡೆಸಿದ ಹುಡುಗಿ ಹುಡುಕುವ ಪ್ರಯತ್ನ ಸ್ವಾರಸ್ಯಕರವಾಗಿದೆ. 

ಮದುವೆಯಾಗಲು ಹೆಣ್ಣನ್ನ ಹುಡುಕಿಕೊಡಿ ಎಂದು ಹೇಳಿ ಎಸ್ಪಿ ಕಚೇರಿಗೆ ಪತ್ರ ಬರೆಯಲಾಗಿದೆ. ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪರಿಶೀಲನೆ ನೀಡಿ ಕಾನೂನು ಕ್ರಮ ಕೈಗೊಳ್ಳುವ ಸರಿ ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೆಗಲೇರಿದೆ. ಹೌದು! ನ.10 ರಂದು ಭದ್ರಾವತಿ ಪಟ್ಟಣದ ವಿಳಾಸವಿರುವ ಪ್ರವೀಣ್ ಎಂಬಾತ ಎಸ್ಪಿ ಕಚೇರಿಯ ಟಪಾಲ್ ವಿಭಾಗಕ್ಕೆ ಅರ್ಜಿಯೊಂದನ್ನು ನೀಡಿ ಹಿಂಬರಹ ಪಡೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸ ಪ್ರಸಂಗ ಬಂದೊದಗಿದೆ. ನನಗೆ ಹೆಣ್ಣು ಸಿಗುತ್ತಿಲ್ಲ. ನಿಮ್ಮ ಅಧೀನದಲ್ಲಿ ಯಾವುದಾದರೂ ಹೆಣ್ಣು ಕಂಡುಬಂದಲ್ಲಿ ನಾನು ಮದುವೆ ಮಾಡಿಕೊಳ್ಳಲು ಸಹಾಯವಾಗುತ್ತಿದೆ. 

ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಸಿದ್ದರಾಮಯ್ಯ ಅಡ್ರೆಸ್ ಇಲ್ಲದಂತಾಗುತ್ತಾರೆ: ಬಿಎಸ್‌ವೈ

ನನಗೆ ಪುರಸಭೆ ಸದಸ್ಯ ವಿ ಕದಿರೇಶ್ ಮತ್ತು ಗ್ರಾಮ ಪಂಚಾಯಿತಿಯ ಚಂದ್ರ ನಾಯ್ಕ್ ಪರಿಚಯವಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ನನ್ನ ತಂದೆ ತೋಟಗಾರಿಕೆ ಇಲಾಖೆಯಲ್ಲಿ ಡೆಪ್ಯೂಟಿ ಡೈರೆಕ್ಟಾರಾಗಿ ಹುದ್ದೆ ನಿರ್ವಹಿಸಿ ನಿವೃತ್ತರಾಗಿ ಮರಣ ಹೊಂದಿದ್ದಾರೆ. ತಾಯಿ ಇದ್ದಾರೆ. ನಾನು ಮೂಲತಃ ಆಂಧ್ರಪ್ರದೇಶದ ಮೂಲದ ಗೊಲ್ಲ ಜಾತಿಯವನಾಗಿದ್ದೇನೆ. ನಾನು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ. ನನಗೆ ಒಬ್ಬ ಅಣ್ಣನಿದ್ದು ಆತನಿಗೆ ಮದುವೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇಷ್ಟಕ್ಕೂ ಯುವಕ ಬರೆದ ಪತ್ರದ ಬಗ್ಗೆ ಕುತೂಹಲವಿದೆಯೇ? ಅದರ ಯಥಾವತ್ತು ಹೀಗಿದೆ. 

ಗೆ: 
ಸೂಪರಿಂಡೆಂಟ್ ಆಫ್ ಪೋಲಿಸ್ ಶಿವಮೊಗ್ಗ ಜಿಲ್ಲೆ,

ಪ್ರವೀಣ್ ಓ.ಎಸ್ ಬಿನ್ ಲೇಟ್ ಓ ಸಣ್ಣರಂಗಪ್ಪ, ಮನೆ ನಂ: 135/ಡಿ.ಎನ್.ಎಂ.ಸಿ. 4ನೇ ಕ್ರಾಸ್, ಎಡಭಾಗ ಹೊಸಮನೆ ಭದ್ರಾವತಿ, ಮೊ: 9481975142

ಮಾನ್ಯರೇ,
ವಿಷಯ: ವಿವಾಹ ಮಾಡಿಕೊಳ್ಳುವ ಸಲುವಾಗಿ ವಧು ಇದ್ದಲ್ಲಿ ತಿಳಿಸುವ ಬಗ್ಗೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಭದ್ರಾವತಿ ನಗರದಲ್ಲಿ ಜನಿಸಿರುತ್ತೇನೆ. ನಾನು ಯಾದವ ಗೊಲ್ಲ ಜಾತಿಗೆ ಸೇರಿದವನಾಗಿರುತ್ತೇನೆ, ನನ್ನ ತಂದೆ ಕಡೆಯವರು ಆಂಧ್ರಪ್ರದೇಶ ರಾಜ್ಯ ಮಡಕಶಿರ ಟೌನ್ ಶ್ರೀ ಸತ್ಯಸಾಯಿ ಜಿಲ್ಲೆಯವರಾಗಿರುತ್ತಾರೆ. ನಮ್ಮ ತಂದೆಯವರು ರಿಟೈಡ್ ಡೈಪೋಟಿ ಡೈರೆಕ್ಟರ್ ತೋಟಗಾರಿಕೆ ಇಲಾಖೆಯಲ್ಲಿ ನಿವೃತ್ತರಾಗಿರುತ್ತಾರೆ. ಹಾಲಿ ನಮ್ಮ ತಂದೆ ಮರಣ ಹೊಂದಿರುತ್ತಾರೆ. ನನ್ನ ತಾಯಿಯವರು ಇರುತ್ತಾರೆ. ಹಾಗೂ ನನ್ನ ಅಣ್ಣ ಇದ್ದು ಅವರು ಮದುವೆಯಾಗಿರುತ್ತಾರೆ. ಈ ಹಿಂದೆ ನಾನು ಸಾಫ್ಟ್‌ವೇರ್ ಕಂಪನಿಯಲ್ಲಿ ಅಧ್ಯಾಪಕನಾಗಿ ಮತ್ತು ಎಂ.ಸಿ.ಐ ಚಿಟ್ಸ್ ಕಂಪನಿ ಬೆಂಗಳೂರು ಇಲ್ಲಿ ಕೆಲಸ ಮಾಡಿರುತ್ತೇನೆ, ಭದ್ರಾವತಿಯಲ್ಲಿರುವ ನಮ್ಮ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುತ್ತೇನೆ. ವಧು ಆನ್ವೇಷಣೆಯಲ್ಲಿ ಯಾವುದು ಸರಿಹೋಗದ ಕಾರಣ ನಮ್ಮ ಮೇಲ್ಕಂಡ ಜಾತಿಯವರಾಗಿದ್ದು ತಮ್ಮ ಅಧೀನದಲ್ಲಿ ಯಾರಾದರೂ ಒಂದು ವಧು ಕಂಡು ಬಂದಲ್ಲಿ ನನಗೆ ತಿಳಿಸುವುದರ ಮೂಲಕ ನಾನು ವಿವಾಹ ಮಾಡಿಕೊಳ್ಳಲು ಸಹಾಯ ಮಾಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಪರಿಚಯ ವ್ಯಕ್ತಿಗಳು, ಶ್ರೀ ವಿ. ಕದಿರೇಶ್ ಪುರಸಭೆ ಸದಸ್ಯರು ಮತ್ತು ಚಂದ್ರ ನಾಯಕ್‌, ಗ್ರಾಮ ಪಂಚಾಯತ್‌ ಸದಸ್ಯರು ಈ ಅರ್ಜಿಯನ್ನು ಪೋಲಿಸರಿಂದ ಪರಿಶೀಲಿಸಿ ಹಾಗೂ ನನ್ನ ಆಧಾರ್ ಕಾರ್ಡ್, ಬ್ಯಾಂಕ್‌ ಪಾಸ್‌ ಬುಕ್ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿರುತ್ತೇನೆ.

ವಂದನೆಗಳೊಂದಿಗೆ
ಪ್ರವೀಣ್.

ಇಳಕಲ್‌ ಸೀರೆಯ ಮೇಲೆ ಕಾಂತಾರ: ಆಸ್ಕರ್ ಅವಾರ್ಡ್‌ಗಾಗಿ ಶುಭ ಹಾರೈಸಿದ ಯುವ ನೇಕಾರ ಮೇಘರಾಜ್

ಹೀಗೊಂದು ಅರ್ಜಿ ಶಿವಮೊಗ್ಗ ಜಿಲ್ಲಾ ಎಸ್‌ಪಿ ಕಚೇರಿಯನ್ನು ತಲುಪಿದ್ದು ಎಸ್ಪಿ ಮಿಥುನ್ ಕುಮಾರ್ ಭದ್ರಾವತಿಯ ಈ ಯುವಕನಿಗೆ ಹೆಣ್ಣು ಹುಡುಕಿ ಕೊಡುತ್ತಾರೋ ಅಥವಾ ಹುಚ್ಛಾಟ ಮೆರೆದಿದ್ದಾನೆಂದು ಬುದ್ದಿ ಹೇಳುತ್ತಾರೋ ಅಥವಾ ಪೊಲೀಸ್ ಇಲಾಖೆ ವಧು-ವರರ ಅನ್ವೇಷಣ ಕೇಂದ್ರ ಅಲ್ಲ ಎಂದು ತಿಳುವಳಿಕೆ ನೀಡುತ್ತಾರೋ ಎಂಬುದೇ ಮತ್ತೊಂದು ಸ್ವಾರಸ್ಯಕರ ವಿಷಯವಾಗಿದೆ.