ಬೀದಿ ನಾಯಿಗಳ ಗುಂಪೊಂದು ತೋಟದ ಮನೆ ಆವರಣದಲ್ಲಿ ಕಟ್ಟಿದ್ದ ಎಮ್ಮೆ ಕರುವಿನ ಮೇಲೆ ದಾಳಿ ನಡೆಸಿದ ಘಟನೆ ಬುಧವಾರ ಸಂಪಿಗೆ ನಗರದಲ್ಲಿ ನಡೆದಿದೆ. ಬೇಸರದ ಸಂಗತಿ ಏನೆಂದರೆ, ಬುಧವಾರ ಸರ್ಕಾರಿ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಕರುವಿಗೆ ಸಕಾಲಕ್ಕೆ ವೈದ್ಯಕೀಯ ಸಿಗಲಿಲ್ಲ. 

ಧಾರವಾಡ (ಫೆ.2) : ಬೀದಿ ನಾಯಿಗಳ ಗುಂಪೊಂದು ತೋಟದ ಮನೆ ಆವರಣದಲ್ಲಿ ಕಟ್ಟಿದ್ದ ಎಮ್ಮೆ ಕರುವಿನ ಮೇಲೆ ದಾಳಿ ನಡೆಸಿದ ಘಟನೆ ಬುಧವಾರ ಸಂಪಿಗೆ ನಗರದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಕಲ್ಲಪ್ಪ ಮೇಸ್ತ್ರಿ(Kallappa Mesti) ಎಂಬುವರು ತಮ್ಮ ತೋಟದ ಮನೆಯಲ್ಲಿನ ಎಮ್ಮೆಯ ಹಾಲು ಕರೆದು ಸಮೀಪದ ಮನೆಗೆ ಹೋಗಿ ಬರುವಷ್ಟರಲ್ಲಿ ಬಾಗಿಲ ಬಳಿ ಕಟ್ಟಿದ್ದ ಆರು ತಿಂಗಳ ಕರುವಿನ ಮೇಲೆ ದಾಳಿ ನಡೆಸಿದ ಐದಾರು ನಾಯಿಗಳು ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿವೆ. ಕರುವನ್ನು ಕಟ್ಟಿಹಾಕಿದ್ದರಿಂದ ನಾಯಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ನರಳಾಡಿದೆ. ಕ್ರೂರ ನಾಯಿಗಳ ದಾಳಿಗೆ ಕರುವಿನ ಎರಡೂ ಕಿವಿಗಳು ಹರಿದು ಹೋಗಿವೆ. ಬಾಯಿ, ಮೂಗು ಹೊಟ್ಟೆಭಾಗಕ್ಕೆ ತೀವ್ರ ಪೆಟ್ಟಾಗಿದೆ. ನಾಯಿ ದಾಳಿಗೆ ತೀವ್ರ ವೇದನೆ ಪಡುತ್ತಿದ್ದ ಕರುವಿನ ಧ್ವನಿ ಕೇಳಿ ಸ್ಥಳೀಯರಾದ ಆನಂದ ಉದ್ದನ್ನವರ ಹಾಗೂ ರಾಹುಲ್‌ ಸುಬೇದಾರ ಎಂಬುವರು ಬಂದು ನಾಯಿಗಳನ್ನು ಹೊಡೆದು ಕರುವನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ, ಕರುವಿನ ಮಾಲೀಕನನ್ನು ಕರೆಯಿಸಿ ವಿಷಯ ತಿಳಿಸಿದ್ದಾರೆ.

ಬುಕ್‌ ಮಾಡಿದ್ದನ್ನು ಬಿಟ್ಟು ಗ್ರಾಹಕನಿಗೆ ಬೇರೆ ಕಾರು ನೀಡಿದ Kia showroom ಗೆ ದಂಡ

ಬೇಸರದ ಸಂಗತಿ ಏನೆಂದರೆ, ಬುಧವಾರ ಸರ್ಕಾರಿ ನೌಕರರ ಪ್ರತಿಭಟನೆ(Karnataka government employee protest)ಹಿನ್ನೆಲೆಯಲ್ಲಿ ಕರುವಿಗೆ ಸಕಾಲಕ್ಕೆ ವೈದ್ಯಕೀಯ ಸಿಗಲಿಲ್ಲ. ಹೀಗಾಗಿ ಕರುವಿನ ಮಾಲೀಕ ಕಲ್ಲಪ್ಪ ಮನೆ ಮದ್ದು ನೀಡಿದರು. ನಂತರ ಮಧ್ಯಾಹ್ನದ ಹೊತ್ತಿಗೆ ಪಶುವೈದ್ಯರೊಬ್ಬರು ಆಗಮಿಸಿ ಕರುವಿಗೆ ಚಿಕಿತ್ಸೆ ನೀಡಿದ್ದಾರೆ. ನಾಯಿಗಳ ದಾಳಿಗೆ ತತ್ತರಿಸುವ ಕರು ಜೀವನ್ಮರಣದ ಮಧ್ಯೆ ಹೋರಾಡುತ್ತಿದೆ. ಧಾರವಾಡ(Dharwad)ದಲ್ಲಿ ನಾಯಿಗಳ(stray dogs) ಹಾವಳಿ ಜಾಸ್ತಿಯಾಗಿದೆ. ನಾಯಿಗಳ ಗುಂಪುಗಳಿಗೆ ಕೆಲವರು ಮಾಂಸದ ಆಹಾರ ಹಾಕುತ್ತಿದ್ದಾರೆ. ಕೆಲವೊಮ್ಮೆ ಮಾಂಸ ಸಿಗದೇ ಇದ್ದಾಗ ಅವು ಮಕ್ಕಳು, ಮಹಿಳೆಯರು ಹಾಗೂ ಅಮಾಯಕ ದನಕರುಗಳ ಮೇಲೆ ದಾಳಿ ಮಾಡುತ್ತಿವೆ. ಈ ಬಗ್ಗೆ ಪಾಲಿಕೆ ಸದಸ್ಯರ ಹಾಗೂ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈಗಲಾದರೂ ಬೀದಿ ನಾಯಿಗಳ ಹಾವಳಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕರು ರಕ್ಷಣೆ ಮಾಡಿದ ಆನಂದ ಉದ್ದನ್ನವರ ಹಾಗೂ ರಾಹುಲ್‌ ಆಗ್ರಹಿಸಿದರು.

ಬೆಳಗಾವಿ ಜನರ ನಿದ್ದೆಗೆಡಿಸಿದ ಏಕೈಕ ಬೀದಿ ನಾಯಿ, ಮಹಾನಗರ ಪಾಲಿಕೆ ವಿರುದ್ಧ ಜನರ ಅಸಮಾಧಾನ!