ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಶೇಕಡ 50ರಷ್ಟುರಿಯಾಯಿತಿ ನೀಡಿದ ಮೊದಲ ದಿನವಾದ ಗುರುವಾರ 7,216 ಪ್ರಕರಣಗಳಿಂದ 22.49 ಲಕ್ಷ ದಂಡ ಸಂಗ್ರಹವಾಗಿದೆ. 

ಬೆಂಗಳೂರು (ಜು.07): ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಶೇಕಡ 50ರಷ್ಟುರಿಯಾಯಿತಿ ನೀಡಿದ ಮೊದಲ ದಿನವಾದ ಗುರುವಾರ 7,216 ಪ್ರಕರಣಗಳಿಂದ 22.49 ಲಕ್ಷ ದಂಡ ಸಂಗ್ರಹವಾಗಿದೆ. ಪಿಡಿಎ 2,967 ಪ್ರಕರಣಗಳಿಂದ 9,31,400, ಕೆಎಸ್‌ಪಿ ಆ್ಯಪ್‌ ಮೂಲಕ 91 ಪ್ರಕರಣಗಳಿಂದ 33,750, ಟಿಎಂಸಿ ಕೌಂಟರ್‌ನಲ್ಲಿ 43 ಪ್ರಕರಣಗಳಿಂದ 11,200, ಬೆಂಗಳೂರು ಒನ್‌ ಕೇಂದ್ರದಲ್ಲಿ 4,115 ಪ್ರಕರಣಗಳಿಂದ 12,73,250 ದಂಡ ಸಂಗ್ರಹವಾಗಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಬಂಧ ಬಾಕಿ ಉಳಿಸಿಕೊಂಡಿರುವ ದಂಡ ಪಾವತಿಗೆ ಶೇ.50ರಷ್ಟುರಿಯಾಯಿತಿ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಕಳೆದ ಫೆ.11ರೊಳಗೆ ಬಾಕಿ ಉಳಿಸಿಕೊಂಡಿರುವ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರ ಈ ಶೇ.50ರ ರಿಯಾಯಿತಿ ಅನ್ವಯವಾಗಲಿದೆ. ಮುಂದಿನ ಸೆಪ್ಟೆಂಬರ್‌ 9ರ ವರೆಗೂ ಈ ರಿಯಾಯಿತಿ ಸೌಲಭ್ಯ ಇರಲಿದೆ.

ಬಜೆಟ್‌ನಲ್ಲಿ ಜನರಿಗೆ ತೆರಿಗೆ ಬರೆ ಬೇಡ: ಮಾಜಿ ಸಿಎಂ ಬೊಮ್ಮಾಯಿ

ಇಲ್ಲಿ ದಂಡ ಕಟ್ಟಿ: ಸಾರ್ವಜನಿಕರು ಕರ್ನಾಟಕ ಸ್ಟೇಟ್‌ ಪೊಲೀಸ್‌(ಕೆಎಸ್‌ಪಿ) ಆ್ಯಪ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌ ವೆಬ್‌ಸೈಟ್‌ಗಳು, ಸಮೀಪದ ಸಂಚಾರ ಪೊಲೀಸ್‌ ಠಾಣೆಗಳು, ಟಿಎಂಸಿ ಕೇಂದ್ರ ಕೌಂಟರ್‌ನಲ್ಲಿ ಬಾಕಿ ದಂಡ ಪಾವತಿಗೆ ಅವಕಾಶ ನೀಡಲಾಗಿದೆ.

ಟ್ರಾಫಿಕ್‌ ಫೈನ್‌ಗೆ ಶೇ.50 ರಿಯಾಯ್ತಿ ಮತ್ತೆ ಜಾರಿ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಬಂಧ ದಂಡ ಪಾವತಿಗೆ ಶೇ.50 ರಷ್ಟುರಿಯಾಯಿತಿ ನೀಡುವ ಸೌಲಭ್ಯವನ್ನು ಮತ್ತೆ ಜಾರಿಗೊಳಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಈ ಆದೇಶವು ಕಳೆದ ಫೆ.11ರ ಹಿಂದಿನ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ. ರಿಯಾಯಿತಿ ದಂಡ ಪಾವತಿಗೆ ಬರುವ ಸೆ.9ರವರೆಗೆ ಅವಕಾಶ ನೀಡಲಾಗಿದೆ.

5 ಬಾಲಕರಿಂದ 9 ವರ್ಷದ ಬಾಲಕಿಯ ಗ್ಯಾಂಗ್‌ರೇಪ್‌: ಕಲಬುರಗಿಯಲ್ಲಿ ಹೇಯ ಘಟನೆ

ಇದೇ ಜೂನ್‌ ತಿಂಗಳಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹೈಕೋರ್ಟ್‌ ನ್ಯಾಯಮೂರ್ತಿ ಜಿ.ನರೇಂದ್ರನ್‌ ಅವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಸಂಚಾರಿ ಇ ಚಲನ್‌ ಮೂಲಕ ದಾಖಲಾಗಿರುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ದಂಡ ಪಾವತಿಸಲು ರಿಯಾಯಿತಿ ನೀಡುವಂತೆ ತೀರ್ಮಾನಿಸಲಾಯಿತು. ಈ ಹಿನ್ನಲೆಯಲ್ಲಿ ಸರ್ಕಾರವು, ಮತ್ತೆ ರಿಯಾಯಿತಿ ನೀಡಿದೆ. ಇದೇ ವರ್ಷದ ಫೆಬ್ರವರಿಯಿಂದ ಎರಡು ಬಾರಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಗೆ ಶೇ.50 ರಿಯಾಯಿತಿ ಸರ್ಕಾರ ನೀಡಿತ್ತು. ಆಗ ಸುಮಾರು 50 ಲಕ್ಷ ಪ್ರಕರಣಗಳು ಇತ್ಯರ್ಥವಾಗಿ 137 ಕೋಟಿ ರು ದಂಡ ವಸೂಲಿಯಾಗಿತ್ತು.