ರಾಜ್ಯದ ಒಟ್ಟು ಉತ್ಪಾದನಾ ಪ್ರಮಾಣ (ಜಿಎಸ್‌ಡಿಪಿ) ಶೇ.9.5ಕ್ಕೆ ಹೆಚ್ಚಾಗಿದೆ. ಹೊಸ ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಈ ವರ್ಷ 25 ಸಾವಿರ ಕೋಟಿ ರು.ಗಳೂ ಬೇಕಾಗುವುದಿಲ್ಲ.

ವಿಧಾನಸಭೆ (ಜು.07): ರಾಜ್ಯದ ಒಟ್ಟು ಉತ್ಪಾದನಾ ಪ್ರಮಾಣ (ಜಿಎಸ್‌ಡಿಪಿ) ಶೇ.9.5ಕ್ಕೆ ಹೆಚ್ಚಾಗಿದೆ. ಹೊಸ ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಈ ವರ್ಷ 25 ಸಾವಿರ ಕೋಟಿ ರು.ಗಳೂ ಬೇಕಾಗುವುದಿಲ್ಲ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸುವ ಬಜೆಟ್‌ನಲ್ಲಿ ಸಾಲದ ಹೊರೆ ಹಾಗೂ ತೆರಿಗೆ ಬರೆ ಎಳೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಒಂದು ವೇಳೆ, ಹೆಚ್ಚುವರಿ ಸಾಲ ಮಾಡಿದರೆ, ಜನರ ಮೇಲೆ ತೆರಿಗೆ ಹೆಚ್ಚಳದ ಬರೆ ಎಳೆದರೆ ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿನ ವೈಫಲ್ಯಗಳ ಜೊತೆಗೆ ಜನ ವಿರೋಧಿ ಸರ್ಕಾರ ಎಂಬ ಹಣೆಪಟ್ಟಿ ದೊರೆಯುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Add Asianetnews Kannada as a Preferred SourcegooglePreferred

ಸದನದಲ್ಲಿ ಗುರುವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೂತನ ಸರ್ಕಾರದ ಮೇಲೆ ರಾಜ್ಯದ ಜನರಲ್ಲಿ ಬಹಳಷ್ಟುನಿರೀಕ್ಷೆ ಇತ್ತು. ಆದರೆ, ರಾಜ್ಯಪಾಲರ ಭಾಷಣದಲ್ಲಿ ಆ ನಿರೀಕ್ಷೆಗೆ ಸ್ಪಂದಿಸುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಚುನಾವಣಾ ಪೂರ್ವದಲ್ಲಿ ಸಾಮಾನ್ಯ ಆಶ್ವಾಸನೆಯನ್ನು ಮೀರಿ ತಾವೇ ಮಾಡಿಕೊಂಡ ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರದ ಮೊದಲ ಸಚಿವ ಸಂಪುಟದಲ್ಲೇ ಜಾರಿಗೊಳಿಸುವುದಾಗಿ ಹೇಳಿ ವಿಳಂಬ ಮಾಡುತ್ತಿದ್ದಾರೆ ಎಂದರು.

ರಾಜ್ಯಪಾಲರ ಬೊಗಳೆ ಭಾಷಣ ಸಪ್ಪೆ, ಸುಳ್ಳಿನ ಕಂತೆ: ಮಾಜಿ ಸಿಎಂ ಬೊಮ್ಮಾಯಿ ಟೀಕೆ

ರಾಜ್ಯದ ಜಿಎಸ್‌ಡಿಪಿ 9.6ಕ್ಕೆ ಹೆಚ್ಚಳವಾಗಿದೆ. ನಮ್ಮ ಅಧಿಕಾರಾವಧಿಯಲ್ಲಿ ವಿತ್ತೀಯ ಕೊರತೆ ಶೇ.2.7ರಷ್ಟುಮೀರದಂತೆ ನೋಡಿಕೊಂಡಿದ್ದೇವೆ. ಹೊಸ ಸರ್ಕಾರ ಕೂಡ ಹೊಸ ಸಾಲ ಮಾಡದೆ, ತೆರಿಗೆ ಹೆಚ್ಚಿಸದೆ ವಿತ್ತೀಯ ಕೊರತೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಕ್ಯಾಪಿಟಲ್‌ ಎಕ್ಸ್‌ಪೆಂಡಿಚರ್‌ ಕಡಿಮೆ ಮಾಡಬಾರದು. ರಸ್ತೆ, ಆಸ್ಪತ್ರೆ, ಸೇತುವೆ ಸೇರಿದಂತೆ ಅಭಿವೃದ್ಧಿ ಯೋಜನೆಗಳು, ಮೂಲಸೌಕರ್ಯ, ಕೃಷಿ, ಕೈಗಾರಿಕಾ ಕ್ಷೇತ್ರಗಳಿಗೆ ಅನುದಾನ ಕಡಿಮೆ ಮಾಡಬಾರದು. ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ, ಬಡವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸೂಕ್ತ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.

ರಾಜಕಾರಣದಲ್ಲಿ ಯಾವಾಗ ಏನಾಗುತ್ತೋ ಗೊತ್ತಾಗಲ್ಲ: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಸರ್ಕಾರದ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಗಟಿನ ಉತ್ತರ ನೀಡಿದ್ದಾರೆ. ರಾಜಕಾರಣದಲ್ಲಿ ಯಾವ ಸಮಯದಲ್ಲಿ ಏನಾಗುತ್ತೋ ಗೊತ್ತಾಗಲ್ಲ. ಯಾವುದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಂಸದ ಡಾ.ಜಿ.ಎಂ.ಸಿದ್ದೇಶ್ವರ್‌ ಅವರ 71ನೇ ಜನ್ಮದಿನಾಚರಣೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾರಣದಲ್ಲಿ ಹೀಗೆಯೇ ಆಗುತ್ತದೆಂದು ಹೇಳಲು ಆಗಲ್ಲ. ಮತ್ತೆ ಯಾವುದನ್ನೂ ಅಲ್ಲಗಳೆಯುವುದಕ್ಕೂ ಸಾಧ್ಯವಿಲ್ಲ. ಹಿಂದಿನಿಂದಲೂ ಇಂಥದ್ದು ನಡೆದುಕೊಂಡು ಬಂದಿದೆ. 

ಇನ್ನೆರೆಡು ತಿಂಗಳಲ್ಲಿ ಡಿಸೇಲ್‌ ಇಲ್ಲದೆ ಬಸ್‌ಗಳು ಸಂಚಾರ ನಿಲ್ಲಿಸಲಿವೆ: ಬೊಮ್ಮಾಯಿ

ಈಗ ಮಹಾರಾಷ್ಟ್ರದಲ್ಲಿ ಆಗುತ್ತಿರುವುದು ನನ್ನ ಮಾತಿಗೆ ನಿದರ್ಶನ ಎಂದರು. ರಾಜ್ಯದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್‌ ನೀಡಿದ್ದ ಗ್ಯಾರಂಟಿಗಳೇ ಒಂದು. ಈಗ ಮಾಡಿದ್ದೇ ಮತ್ತೊಂದು. ಗ್ಯಾರಂಟಿ ಐದು ದೋಖಾಗಳನ್ನು ನೀಡಿ, ರಾಜ್ಯದ ಜನರಿಗೆ ಮೋಸ ಮಾಡಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸದನದ ಒಳ ಮತ್ತು ಹೊರಗೆ ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದರು. ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರದ ಬಗ್ಗೆ ನಮ್ಮ ಪ್ರಮುಖ ನಾಯಕರ ಜೊತೆಗೆ ಚರ್ಚೆ ನಡೆದಿದೆ. ಗುರುವಾರದೊಳಗೆ ಪ್ರತಿಪಕ್ಷ ನಾಯಕನ ಆಯ್ಕೆ ಆಗುತ್ತದೆ. ಬಿಜೆಪಿ ರಾಷ್ಟ್ರೀಯ ನಾಯಕರು ಬೇರೆ ಬೇರೆ ರಾಜ್ಯಗಳ ವಿಚಾರದಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿದೆ ಅಷ್ಟೇ ಎಂದು ಬೊಮ್ಮಾಯಿ ಹೇಳಿದರು.