ಪಾರಂಪರಿಕ ಟಾಂಗಾ ಸವಾರಿಯಲ್ಲಿ ಒಟ್ಟು 42 ಜೋಡಿಗಳು ಭಾಗವಹಿಸಿ ದಸರೆ ಸಂದರ್ಭದಲ್ಲಿ ತಮ್ಮ ಈ ದಿನವನ್ನು ಅವೀಸ್ಮರಣೀಯವಾಗಿಸಿಕೊಂಡರು.

ಎಲ್‌.ಎಸ್‌. ಶ್ರೀಕಾಂತ್‌

ಮೈಸೂರು(ಅ.01): ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ನಗರದ ಪುರಭವನದ ಆವರಣದಲ್ಲಿ ಶುಕ್ರವಾರ ಪಾರಂಪರಿಕ ಟಾಂಗಾ ಸವಾರಿಗೆ ಪಾರಂಪರಿಕ ದಸರಾ ಉಪಸಮಿತಿಯ ಅಧ್ಯಕ್ಷ ಗೋಪಾಲರಾವ್‌ ಚಾಲನೆ ನೀಡಿದರು. ಈ ಟಾಂಗಾ ಸವಾರಿಯಲ್ಲಿ ವಿವಿಧ ಭೌಗೋಳಿಕ ಪ್ರದೇಶಗಳ ಸಂಸ್ಕೃತಿ ಪ್ರತಿಬಿಂಬಿಸುವ ಕೊಡವ ಧಿರಿಸು, ಮಹಾರಾಜರ ತೊಡಿಗೆ, ಮೈಸೂರು ಪೇಟಾ, ಪಂಚೆ ಹಾಗೂ ಮೈಸೂರು ರೇಷ್ಮೆ ಸೀರೆ ಸೇರಿದಂತೆ ವಿವಿಧ ರೀತಿಯ ಪಾರಂಪರಿಕ ಉಡುಗೆ ತೊಟ್ಟು ಭಾಗವಹಿಸಿದ್ದ ಜೋಡಿಗಳಿಗೆ ಬಾಗಿನ ನೀಡಿ ಸ್ವಾಗತಿಸಲಾಯಿತು. ಪಾರಂಪರಿಕ ಟಾಂಗಾ ಸವಾರಿಯಲ್ಲಿ ಒಟ್ಟು 42 ಜೋಡಿಗಳು ಭಾಗವಹಿಸಿ ದಸರೆ ಸಂದರ್ಭದಲ್ಲಿ ತಮ್ಮ ಈ ದಿನವನ್ನು ಅವೀಸ್ಮರಣೀಯವಾಗಿಸಿಕೊಂಡರು.

ಪಾರಂಪರಿಕ ಟಾಂಗಾ ಸವಾರಿಯು ಪುರಭವನದಿಂದ ಪ್ರಾರಂಭವಾಗಿ ಹತ್ತನೆ ಚಾಮರಾಜ ಒಡೆಯರ್‌ ವೃತ್ತ, ಕೃಷ್ಣರಾಜ ಒಡೆಯರ್‌ ವೃತ್ತ, ಲ್ಯಾನ್ಸ್‌ಡೌನ್‌ ಕಟ್ಟಡ, ಜಗನ್ಮೋಹನ ಅರಮನೆ, ಪರಕಾಲ ಮಠ, ವಾಣಿಜ್ಯ ತೆರಿಗೆ ಕಚೇರಿ, ಪದ್ಮಾಲಯ, ಎಂಡಿಎ ವೃತ್ತ, ಪ್ರಾಚ್ಯವಿದ್ಯಾಸೌಧ, ಕ್ರಾಫರ್ಡ್‌ ಹಾಲ್‌, ಜಿಲ್ಲಾಧಿಕಾರಿಗಳ ಕಚೇರಿ, ಮಹಾರಾಜ ಜೂನಿಯರ್‌ ಕಾಲೇಜು, ಮೆಟ್ರೊಪೋಲ್‌ ವೃತ್ತ, ರೈಲ್ವೆ ನಿಲ್ದಾಣ, ಮೈಸೂರು ಮೆಡಿಕಲ್‌ ಕಾಲೇಜು ಮೂಲಕ ಹಾದು ಹೋಗಿ ದೊಡ್ಡ ಗಡಿಯಾರದ ಬಳಿ ಮುಕ್ತಾಯವಾಯಿತು.

ಯುವ ದಸರಾದಲ್ಲಿ ಪುನೀತ್ Gandhada Gudi ಟೀಸರ್ ನೋಡಿ ಕಣ್ಣೀರಿಟ್ಟ ಅಶ್ವಿನಿ

ಇತಿಹಾಸ ಮತ್ತು ಪುರಾತತ್ವ ತಜ್ಞ ಡಾ. ಶಲ್ವಪಿಳ್ಳೆ ಅಯ್ಯಂಗಾರ್‌ ಪಾರಂಪರಿಕ ಉಡುಗೆಯಲ್ಲಿ ಟಾಂಗಾ ಸವಾರಿಯಲ್ಲಿದ್ದ ದಂಪತಿಗೆ ಪಾರಂಪರಿಕ ಕಟ್ಟಡಗಳು ಕುರಿತು ಮಾಹಿತಿ ನೀಡಿ ಮೈಸೂರು ಪಾರಂಪರಿಕ ಕಟ್ಟಗಳ ಐತಿಹಾಸಿಕ ಹಿನ್ನೆಲೆ ತಿಳಿಸಿಕೊಟ್ಟರು.

ಬೆಂಗಳೂರಿನ ಹೇಮಲತಾ ಪ್ರಭು ಜೋಡಿ ಮಾತನಾಡಿ, ದಸರಾ ಕಾರ್ಯಮಕ್ಕಾಗಿಯೇ ಮೈಸೂರಿಗೆ ಬಂದಿದ್ದೇವೆ. ಪಾರಂಪರಿಕ ಟಾಂಗಾ ಸವಾರಿಯಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷ ಉಂಟು ಮಾಡಿದೆ. ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜಂಬೂ ಸವಾರಿಯನ್ನು ವೀಕ್ಷಿಸಲು ಕಾತುರರಾಗಿರುವುದಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿಯಾದ ಎನ್‌.ಎಸ್‌. ರಂಗರಾಜು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳ ಹಾಗೂ ಸಿಬ್ಬಂದಿ ಇದ್ದರು.