ಭಾರೀ ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ 191 ಮನೆಗಳಿಗೆ ಧಕ್ಕೆ
* 21,732 ಹೆಕ್ಟೇರ್ ಕೃಷಿ ಭೂಮಿ ಹಾನಿ
* ಕಡಿತಗೊಂಡ ರಸ್ತೆಗಳನ್ನು ತೆರವುಗೊಳಿಸಲು ಕ್ರಮ
* 11 ರಸ್ತೆಗಳು ತಾತ್ಕಾಲಿಕವಾಗಿ ಮುಳುಗಡೆ
ಧಾರವಾಡ(ಜು.24): ಮಳೆಯಿಂದಾಗಿ ಜಿಲ್ಲೆಯಲ್ಲಿ 191 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇದರೊಂದಿಗೆ 21,732 ಹೆಕ್ಟೇರ್ ಕೃಷಿ ಭೂಮಿ ಹಾನಿಯಾಗಿದೆ. 51 ಕಿ.ಮೀ. ರಸ್ತೆಗೆ ಧಕ್ಕೆ ಉಂಟಾಗಿದ್ದು ಇದರೊಂದಿಗೆ 16 ಸೇತುವೆಗಳು ಮಳೆ ನೀರಿಗೆ ಮುಳುಗಡೆಯಾಗಿವೆ. 11 ರಸ್ತೆಗಳು ತಾತ್ಕಾಲಿಕವಾಗಿ ಮುಳುಗಡೆಯಾಗಿದ್ದು ಮಳೆ ನಿಂತ ನಂತರ ತೆರವು ಆಗಲಿವೆ. ಅತಿಯಾದ ಮಳೆಯಿಂದಾಗಿ 158 ಶಾಲೆಗಳ ಸೋರಿಕೆಯಾಗುತ್ತಿದ್ದು, 134 ಅಂಗನವಾಡಿಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ವಿವರಿಸಿದರು.
ನವಲಗುಂದ: ಬೆಣ್ಣೆಹಳ್ಳದಲ್ಲಿ ಸಿಲುಕಿರುವ 200 ಕುರಿ, 7 ಕುರಿಗಾಯಿಗಳ ರಕ್ಷಣೆಗೆ ಕಾರ್ಯಾಚರಣೆ
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ವಿಪರೀತ ಮಳೆಯಿಂದ ಅಳ್ನಾವರದಲ್ಲಿ ಏಳು, ಹು-ಧಾ ಅವಳಿ ನಗರದಲ್ಲಿ ಒಂದು, ನವಲಗುಂದದಲ್ಲಿ ಒಂದು ಸೇರಿದಂತೆ ಒಟ್ಟು 8 ಪುನರ್ವಸತಿ ಕೇಂದ್ರ ಆರಂಭಿಸಲಾಗಿದೆ. ಅಳ್ನಾವರದ ಹುಲಿಕೇರಿ ನೀರು ಅಪಾರ ಪ್ರಮಾಣದಲ್ಲಿ ಅಳ್ನಾವರ ಪಟ್ಟಣಕ್ಕೆ ನುಗ್ಗುತ್ತಿರುವ ಅಲ್ಲಿನ ಜನರಿಗೆ ಈ ಕೇಂದ್ರಗಳು ಅನುಕೂಲ ಆಗಲಿವೆ. ಅಲ್ಲಿನ 800 ಜನರಿಗೆ ಊಟ-ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎಲ್ಲ ತಾಲೂಕು ನೋಡಲ್ ಅಧಿಕಾರಿ, ತಹಸೀಲ್ದಾರಗಳು ಸಮಸ್ಯೆಯಾದಲ್ಲಿ ಸ್ಪಂದನೆ ಮಾಡಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳದಲ್ಲಿದ್ದು ಪರಿಹಾರ ಕಾರ್ಯ ಮಾಡಲು ಸೂಚನೆ ನೀಡಲಾಗಿದೆ. ಸಂಪರ್ಕ ಕಡಿತಗೊಂಡ ರಸ್ತೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.