ಈ ಬಾರಿ ಅರಮನೆಯಲ್ಲಿ ಜಂಬೂಸವಾರಿ ಮಾರ್ಗ ಬದಲಾವಣೆ ಮಾಡಲು ನಿರ್ಧರಿಸಿದ್ದು, 10 ರಿಂದ 15 ಸಾವಿರ ಆಸನಗಳು ಹೆಚ್ಚಾಗಲಿವೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. 

ಮೈಸೂರು (ಸೆ.21): ದಸರಾ ಮಹೋತ್ಸವಕ್ಕೆ ದೇಶ ವಿದೇಶದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ಆಸನಗಳ ಸಮಸ್ಯೆ ಆಗುತ್ತಿದೆ. ಈ ಬಾರಿ ಅರಮನೆಯಲ್ಲಿ ಜಂಬೂಸವಾರಿ ಮಾರ್ಗ ಬದಲಾವಣೆ ಮಾಡಲು ನಿರ್ಧರಿಸಿದ್ದು, 10 ರಿಂದ 15 ಸಾವಿರ ಆಸನಗಳು ಹೆಚ್ಚಾಗಲಿವೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. ಮೈಸೂರು ಅರಮನೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ದಸರಾಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಟಿಕೆಟ್, ಪಾಸ್ ತೆಗೆದುಕೊಂಡವರು ಆಸನ ಸಿಗದೆ ಸಮಸ್ಯೆ ಎದುರಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಅರಮನೆಯಲ್ಲಿ ಆಸನಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.

Add Asianetnews Kannada as a Preferred SourcegooglePreferred

ಅರಮನೆ ಆವರಣದಲ್ಲಿ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಕೆಲವು ಮಾರ್ಪಾಡು ಮಾಡಲು ನಿರ್ಧರಿಸಿದ್ದು, ಸುಮಾರು 500 ಮೀಟರ್ ಹೆಚ್ಚಾಗಲಿದೆ. ಇದರಿಂದ ಆಸನಗಳ ಸಂಖ್ಯೆಯೂ ಹೆಚ್ಚಾಗಲಿದ್ದು, ಅರಮನೆ ಆವರಣದಲ್ಲಿ 35 ರಿಂದ 40 ಸಾವಿರ ಆಸನಗಳ ವ್ಯವಸ್ಥೆ ಮಾಡಬಹುದಾಗಿದೆ ಎಂದರು. ದಸರಾ ಆಚರಣೆಗೆ 19 ಉಪಸಮಿತಿಗಳನ್ನು ರಚಿಸಲಾಗಿದೆ. ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಉತ್ಸವ ನಡೆಸಲು ಜವಾಬ್ದಾರಿಯುತವಾಗಿ, ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಇಷ್ಟು ದೊಡ್ಡ ಹಬ್ಬ ಆಚರಣೆ ಮಾಡುವಾಗ ಸಣ್ಣಪುಟ್ಟ ವ್ಯತ್ಯಾಸಗಳಾಗುವುದು ಸಹಜ. ಎಲ್ಲವನ್ನು ಸರಿದೂಗಿಸಿಕೊಂಡು ಅದ್ಧೂರಿಯಾಗಿ ದಸರಾ ಆಚರಣೆ ಮಾಡುತ್ತೇವೆ. ಮುಖ್ಯಮಂತ್ರಿಗಳು ಕೇಂದ್ರ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದು ಅನುಮತಿ ದೊರೆತರೆ ಏರ್ ಶೋ ಮಾಡುತ್ತೇವೆ ಎಂದರು.

ಮಾವುತರು, ಕಾವಾಡಿಗರ ಕುಟುಂಬದವರ ಜೊತೆ ಉಪಾಹಾರ: ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ವಾಸ್ತವ್ಯ ಹೂಡಿರುವ ದಸರಾ ಆನೆಗಳ ಮಾವುತರು, ಕಾವಾಡಿಗಳ ಹಾಗೂ ಕುಟುಂಬವರ್ಗದವರಿಗೆ ಅರಮನೆ ಮಂಡಳಿಯಿಂದ ಉಪಾಹಾರ ಕೂಟ ಆಯೋಜಿಸಲಾಗಿತ್ತು. ಮಾವುತರು, ಕಾವಾಡಿಗಳ ಕುಟುಂಬದವರಿಗೆ ಹೊಳಿಗೆ ಬಡಿಸಿದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ನಂತರ ಅವರೊಂದಿಗೆ ಕುಳಿತು ಉಪಾಹಾರ ಸೇವಿಸಿದರು. ಡಾ.ಎಚ್.ಸಿ.ಮಹದೇವಪ್ಪ ಅವರು ಕಾಯಿ ಹೋಳಿಗೆ ಬಡಿಸಿದರೆ, ಶಾಸಕ ತನ್ವೀರ್ ಸೇಠ್ ತುಪ್ಪ ಬಡಿಸಿದರು. 

ಸತ್ತರೂ ಬಿಜೆಪಿ ಧ್ವಜ ಹಾಕ್ಕೊಂಡೆ ಸಾಯ್ತಿನಿ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

ಇವರಿಗೆ ಶಾಸಕರಾದ ಜಿ.ಟಿ. ದೇವೇಗೌಡ, ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸಾಥ್ ನೀಡಿದರು. ನಂತರ ಇಡ್ಲಿ, ಸಾಂಬಾರ್, ಚಟ್ನಿ, ಉದ್ದಿನವಡೆ, ದೋಸೆ, ಸಾಗು, ಕೇಸರಿ ಬಾತ್, ಉಪ್ಪಿಟ್ಟು, ಪೊಂಗಲ್ ಬಡಿಸಲಾಯಿತು. ಬಳಿಕ ಸಚಿವ ಮಹದೇವಪ್ಪ ಮಾವುತರು, ಅಧಿಕಾರಿಗಳೊಂದಿಗೆ ಕುಳಿತು ಉಪಾಹಾರ ಸೇವಿಸಿದರು. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಎಂಡಿಎ ಆಯುಕ್ತ ರಘುನಂದನ್, ಸೆಸ್ಕ್ ಎಂಡಿ ಜಿ. ಶಿಲ್ಪಾ, ಎಸ್ಪಿ ಎನ್. ವಿಷ್ಣುವರ್ಧನ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಮೊದಲಾದವರು ಇದ್ದರು.