ಬಹುಮತ ಸಾಬೀತು: ಯಡಿಯೂರಪ್ಪ ಅವರಿಗಿದು 5ನೇ ಅಗ್ನಿ ಪರೀಕ್ಷೆ
ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಕಾರಣ, ಕರ್ನಾಟಕ ಸರಕಾರ ರಚನೆಯ ಆಟ, ದೊಂಬರಾಟ ಮುಂದುವರಿಯುತ್ತಿದ್ದು, ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತು ಮಾಡಬೇಕಿದೆ.
ಬೆಂಗಳೂರು: ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಕಾರಣ, ಕರ್ನಾಟಕ ಸರಕಾರ ರಚನೆಯ ಆಟ, ದೊಂಬರಾಟ ಮುಂದುವರಿಯುತ್ತಿದ್ದು, ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತು ಮಾಡಬೇಕಿದೆ.
ಹನ್ನೊಂದು ವರ್ಷಗಳಲ್ಲಿಆಗಲೇ ನಾಲ್ಕು ಬಾರಿ ಬಹುಮತ ಸಾಬೀತು ಪಡಿಸುವ ಅಗ್ನಿಪರೀಕ್ಷೆ ಎದುರಿಸಿರುವ ಯಡಿಯೂರಪ್ಪ ಅವರಿಗೆ ಇದು ಮತ್ತೊಂದು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಇದೀಗ ಮೂರನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ.
ಕೇವಲ 104 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಇನ್ನೂ ಎಂಟು ಶಾಸಕರ ಬೆಂಬಲ ಬೇಕು. ಜೆಡಿಎಸ್ ಹಾಗೂ ಕಾಂಗ್ರೆಸ್ ಒಗ್ಗಟ್ಟಾಗಿ 117 ಶಾಸಕರನ್ನು ಹೊಂದಿದ್ದು, ಸರಕಾರ ರಚಿಸಲು ತುದಿಗಾಲಲ್ಲಿ ನಿಂತಿದೆ.
2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಕಡೇ ಕ್ಷಣದಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಬೆಂಬಲ ಸೂಚಿಸಲು ನಿರಾಕರಿಸಿದ ಕಾರಣ, ಕೇವಲ ಒಂದು ವಾರದಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಆರು ತಿಂಗಳ ನಂತರ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿ, ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಸರಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದರು. 2008ರಲ್ಲಿ ಅಧಿಕಾರಕ್ಕೆ ಬಂದಾಗಲೂ ಮೂರು ಶಾಸಕರ ಕೊರತೆ ಎದುರಿಸುತ್ತಿದ್ದ ಪಕ್ಷಕ್ಕೆ, ಆಪರೇಷನ್ ಕಮಲ ನೆರವಾಗಿತ್ತು.
ಎರಡು ವರ್ಷಗಳ ನಂತರ ಮತ್ತೊಮ್ಮೆ ಬಹುಮತ ಸಾಬೀತುಪಡಿಸುವ ಅನಿವಾರ್ಯತೆ ಯಡಿಯೂರಪ್ಪ ಅವರಿಗೆ ಎದುರಾಗಿತ್ತು, 18 ಶಾಸಕರ ಬೆಂಬಲ ಹಿಂಪಡೆದ ಕಾರಣ ಮತ್ತೊಮ್ಮೆ ಬಹುಮತ ಸಾಬೀತು ಪಡಿಸುವಂತಾಯಿತು. ಸ್ಪೀಕರ್ ಆಗಿದ್ದ ಕೆ.ಜಿ.ಬೋಪಯ್ಯ ಬೆಂಬಲ ಹಿಂಪಡೆದ ಬಿಜೆಪಿಯ 11 ಹಾಗೂ ಸ್ವತಂತ್ರ ಐವರು ಶಾಸಕರನ್ನು ಅನರ್ಹಗೊಳಿಸಿ, ಆದೇಶಿಸಿದ್ದನ್ನು, ಪ್ರಶ್ನಿಸಿ ಪ್ರತಿಪಕ್ಷಗಳು ಕೋರ್ಟ್ ಮೆಟ್ಟಿಲೇರಿದವು.
ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಮತ್ತೊಮ್ಮೆ ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದು, ಪರೀಕ್ಷೆಯಲ್ಲಿ ಗೆದ್ದಿದ್ದರು. ಆದರೆ, ಗಣಿ ಅಕ್ರಮದಲ್ಲಿ ಲೋಕಾಯಕ್ತ ಸಲ್ಲಿಸಿದ ವರದಿಯಲ್ಲಿ ಯಡಿಯೂರಪ್ಪ ಹೆಸರಿದ್ದ ಕಾರಣ ಅವರು 2011ರ ಅಕ್ಟೋಬರ್ನಲ್ಲಿ ಜೈಲಿಗೆ ಹೋಗಬೇಕಾಯಿತು. 20 ದಿನಗಳ ಸೆರೆವಾಸ ಅನುಭವಿಸಿದ ಬಿಎಸ್ವೈ ಅಧಿಕಾರ ಕಳೆದುಕೊಂಡರು. 2015ರಲ್ಲಿ ಯಡಿಯೂರಪ್ಪ ವಿರುದ್ಧದ ಶಿಕ್ಷೆಯನ್ನು ಕರ್ನಾಟಕ ಹೈ ಕೋರ್ಟ್ ವಜಾಗೊಳಿಸಿತು.