ಸಿಎಲ್ ಪಿ ಸಭೆಯಲ್ಲಿ  ಸಿಎಂ ಸಿದ್ದರಾಮಯ್ಯ ಕಣ್ಣೀರು ಹಾಕಿರುವುದು ಸುಳ್ಳು. ಅವರೋರ್ವ ಉತ್ತಮ ಆಡಳಿತಗಾರರಾಗಿದ್ದು, ಒಳ್ಳೆ ಆಡಳಿತ ನೀಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. 

ಬೆಂಗಳೂರು :  ಸಿಎಲ್ ಪಿ ಸಭೆಯಲ್ಲಿ  ಸಿಎಂ ಸಿದ್ದರಾಮಯ್ಯ ಕಣ್ಣೀರು ಹಾಕಿರುವುದು ಸುಳ್ಳು. ಅವರೋರ್ವ ಉತ್ತಮ ಆಡಳಿತಗಾರರಾಗಿದ್ದು, ಒಳ್ಳೆ ಆಡಳಿತ ನೀಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. 

ಈ  ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆಗ ಬರೀ ರೆಸಾರ್ಟ್ ರಾಜಕೀಯ ಮಾಡಿದ್ದರು.  ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಿರಲಿಲ್ಲ. ಅಲ್ಲದೇ ಬಿಜೆಪಿ ಮುಖಂಡರು ಜೈಲಿಗೆ ಹೋಗಿ ಬಂದಿದ್ದರು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.  

ಇನ್ನು ಇದೇ ವೇಳೆ ಕೋಳಿವಾಡ ಹೇಳಿಕೆ ಪ್ರಸ್ತಾಪಿಸಿದ ಅವರು ತಮ್ಮ ಸೋಲಿಗೆ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎನ್ನುವ ಆರೋಪ ಸುಳ್ಳು ಎಂದರು .  ಸಿಎಲ್ ಪಿ ಸಭೆಗೆ  ಎಲ್ಲರೂ ಬರರುತ್ತಿದ್ದಾರೆ. ಬೆಳಗಾವಿ ಭಾಗದ ಶಾಸಕರಿಗೆ ಅನಾರೋಗ್ಯವಿದೆ ಆದ್ದರಿಂದ ಕೆಲವರು ಆಗಮಿಸಿರಲಿಲ್ಲ ಎಂದು ತಿಳಿಸಿದ್ದಾರೆ. 

ಕಾಂಗ್ರೆಸ್ ನಾಯಕರನ್ನು ಬಿಜೆಪಿ ಸೆಳೆಯುತ್ತಿದೆಯೇ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ನಮ್ಮ ಶಾಸಕರು ನಮ್ಮ ಜೊತೆಗೆ ಇದ್ದಾರೆ. ನಾವೆಲ್ಲಾ ಒಟ್ಟಾಗಿಯೇ ಇರುತ್ತೇವೆ.  ಸದ್ಯಕ್ಕೆ ಸಿಎಲ್ ಪಿ ನಾಯಕನ ಆಯ್ಕೆ ಆಗಿಲ್ಲ. ಈಗಾಗಲೇ ಹೆಚ್ ಡಿಕೆ ಸಿಎಂ ಆಗಲು ನಾವೆಲ್ಲ ಸಹಿ ಮಾಡಿಕೊಟ್ಟಿದ್ದೇವೆ.  2008ರಲ್ಲಿ ಆಪರೇಷನ್ ಕಮಲ ಮಾಡಿದ್ದರು. ಇದೇನು ಹೊಸದೇನಲ್ಲ. ಅಡ್ಡಕಸುಬು ಮಾಡಿ ಅಧಿಕಾರ ಹಿಡಿದಿದ್ದರು. ಬಿಜೆಪಿಯವರು ನಮ್ಮ ಶಾಸಕರನ್ನ ಸಂಪರ್ಕ ಮಾಡಿದ್ದು ನಿಜ ಎಂದು ಸಿಎಲ್ ಪಿ ಸಭೆಯಲ್ಲಿ ಐವರು ಶಾಸಕರು ಕೈ ಎತ್ತಿದ್ದರು. ಆದರೆ ಆಮಿಷಕ್ಕೆ ನಮ್ಮ ಶಾಸಕರು ಬಗ್ಗಲ್ಲ ಎಂದು ಹೇಳಿದ್ದಾರೆ. 

ಬಿಜೆಪಿ ಅಧಿಕಾರ ಪಡೆಯುವ ಯತ್ನದ ಬಗ್ಗೆ  ಮಾತನಾಡಿದ ಅವರು ದೊಡ್ಡ ಪಕ್ಷಕ್ಕೆ ಅಧಿಕಾರ ನಡೆಸಲು ಅವಕಾಶ ನೀಡಬೇಕು ಎಂದು ಎಲ್ಲಿಯೂ ಇಲ್ಲ. ಹೀಗಿದ್ದರೆ ಗೋವಾ ಸೇರಿದಂತೆ ಇತರೆ ರಾಜ್ಯಗಳ ಕಥೆ ಏನು ?  ಬಿಜೆಪಿಗೆ ಅಧಿಕಾರಕ್ಕೆ ಅವಕಾಶ ನೀಡಿದರೆ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.