RCB Match vs GT: ಈ ಬಾರಿ ಕೂಡ ಆರ್‌ಸಿಬಿ ಫೈನಲ್ಸ್‌ಗೆ ಲಗ್ಗೆ ಇಟ್ಟಿದೆ. ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್‌ಗಳ ಭರ್ಜರಿ ಜಯದೊಂದಿಗೆ ಆರ್‌ಸಿಬಿ ಟೀಂ ಈಗ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದೆ. ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿದ ನಾಯಕ ರಜತ್ ಪಾಟಿದಾರ್, 'ನಾವು ನಿಮಗಾಗಿ ಬರುತ್ತಿದ್ದೇವೆ' ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

ಧರ್ಮಶಾಲಾ: ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗುಬಡಿದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಆರ್‌ಸಿಬಿ 92 ರನ್‌ಗಳ ಭರ್ಜರಿ ಜಯ ಸಾಧಿಸಿತು. ಗುಜರಾತ್ ತಂಡವನ್ನು ಸೋಲಿಸಿದ ನಂತರ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ನೀಡಿದ ಹೇಳಿಕೆ, ಎದುರಾಳಿಗಳಿಗೆ ಸ್ಪಷ್ಟ ಎಚ್ಚರಿಕೆಯಂತಿತ್ತು. 'ನಾವು ನಿಮಗಾಗಿ ಬರುತ್ತಿದ್ದೇವೆ' ಎಂದು ಪಂದ್ಯದ ನಂತರ ಅವರು ಹೇಳಿದರು. ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ನಾಯಕ ಪಾಟಿದಾರ್, ಐಪಿಎಲ್ ಪ್ಲೇ-ಆಫ್ ಇತಿಹಾಸದಲ್ಲೇ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಆಡಿದರು.

ಅಬ್ಬರಿಸಿದ ರಜತ್‌ ಪಾಟಿದಾರ್

ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಚಚ್ಚಿದ ಪಾಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ, ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಪ್ಲೇ-ಆಫ್ ಇತಿಹಾಸದಲ್ಲೇ ಅತ್ಯಧಿಕ ತಂಡದ ಸ್ಕೋರ್ ಆಗಿದೆ. ಪಂದ್ಯದ ಕೊನೆಯ ಐದು ಓವರ್‌ಗಳಲ್ಲಿ ಪಾಟಿದಾರ್ ಮತ್ತು ತಂಡ ಅಕ್ಷರಶಃ ಅಬ್ಬರಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್, ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಗುಜರಾತ್ ತಂಡ 162 ರನ್‌ಗಳಿಗೆ ಆಲೌಟ್ ಆಯಿತು.‌

ಆಕ್ರಮಣಕಾರಿ ಆಟ

ಪಂದ್ಯದ ನಂತರ ಮಾತನಾಡಿದ RCB ನಾಯಕ, ಇದೊಂದು ಅಧಿಕೃತ ಜಯ ಎಂದು ಸ್ಪಷ್ಟಪಡಿಸಿದರು. 'ನಮಗೆ ಇದೊಂದು ಸೂಪರ್ ಮ್ಯಾಚ್ ಆಗಿತ್ತು. ಅದರಲ್ಲೂ ಬ್ಯಾಟರ್‌ಗಳು ತೋರಿದ ಆಕ್ರಮಣಕಾರಿ ಆಟ ತಂಡಕ್ಕೆ ಬಹಳಷ್ಟು ಸಹಾಯ ಮಾಡಿತು. 'ನಾವು ನಿಮ್ಮನ್ನು ಸೋಲಿಸಲು ಬರುತ್ತಿದ್ದೇವೆ' ಎನ್ನುವಂತಹ ಬಾಡಿ ಲ್ಯಾಂಗ್ವೇಜ್ ಅನ್ನು ನಾವು ಮೈದಾನದಲ್ಲಿ ತೋರಿಸಬೇಕಾಗುತ್ತದೆ. ಅದು ನಮ್ಮ ಎಲ್ಲಾ ಬ್ಯಾಟರ್‌ಗಳಲ್ಲೂ ಇತ್ತು. ಪಂದ್ಯಕ್ಕೂ ಮುನ್ನ ನಡೆದ ಸಭೆಯಲ್ಲಿ ನಾವು ಪಾಸಿಟಿವ್ ಬಾಡಿ ಲ್ಯಾಂಗ್ವೇಜ್ ಉಳಿಸಿಕೊಳ್ಳುವ ಬಗ್ಗೆ ಮಾತನಾಡಿದ್ದೆವು' ಎಂದು ಪಾಟಿದಾರ್ ವಿವರಿಸಿದರು. 

ವಿಕೆಟ್‌ ಕಳೆದುಕೊಳ್ಳುವ ಯೋಚನೆ

ಆರಂಭದಲ್ಲಿ ಪಿಚ್ ಸ್ವಲ್ಪ ನಿಧಾನಗತಿಯಲ್ಲಿದ್ದ ಕಾರಣ, ಕ್ರೀಸ್‌ನಲ್ಲಿ ನೆಲೆಯೂರಲು ಸಮಯ ಬೇಕಾಯಿತು ಎಂದು ಅವರು ಹೇಳಿದರು. 'ಆರಂಭದಲ್ಲಿ ಪಿಚ್ ಹೇಗಿದೆ ಮತ್ತು ಬೌಲರ್‌ಗಳು ಹೇಗೆ ಬೌಲಿಂಗ್ ಮಾಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಸಾಮಾನ್ಯವಾಗಿ ಎಂಟರಿಂದ ಹತ್ತು ಎಸೆತಗಳನ್ನು ತೆಗೆದುಕೊಳ್ಳುತ್ತೇನೆ. ಅದಾದ ನಂತರ ನನಗೆ ಸ್ಪಷ್ಟವಾದ ಪ್ಲಾನ್ ಸಿಗುತ್ತದೆ. ಆಮೇಲೆ ನಾನು ವಿಕೆಟ್ ಕಳೆದುಕೊಳ್ಳುವ ಬಗ್ಗೆ ಯೋಚಿಸುವುದಿಲ್ಲ, ಬದಲಿಗೆ ಬೌಲರ್‌ಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತೇನೆ' ಎಂದು ಪಾಟಿದಾರ್ ತಮ್ಮ ಆಟದ ಗುಟ್ಟನ್ನು ಬಿಚ್ಚಿಟ್ಟರು.