- Home
- Sports
- Cricket
- ಆರ್ಸಿಬಿ ಹ್ಯಾಟ್ರಿಕ್ ಐಪಿಎಲ್ ಕಪ್ ಗೆಲ್ಲಲು ಮಾಸ್ಟರ್ ಪ್ಲಾನ್; ಇಂಗ್ಲೆಂಡ್ ಮೂಲದ ಗೇಮ್ ಚೇಂಜರ್ ಆಟಗಾರನಿಗೆ ಗಾಳ ಹಾಕಿದ ಬೆಂಗಳೂರು ಕೋಚ್
ಆರ್ಸಿಬಿ ಹ್ಯಾಟ್ರಿಕ್ ಐಪಿಎಲ್ ಕಪ್ ಗೆಲ್ಲಲು ಮಾಸ್ಟರ್ ಪ್ಲಾನ್; ಇಂಗ್ಲೆಂಡ್ ಮೂಲದ ಗೇಮ್ ಚೇಂಜರ್ ಆಟಗಾರನಿಗೆ ಗಾಳ ಹಾಕಿದ ಬೆಂಗಳೂರು ಕೋಚ್
ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಈಗಿನಿಂದಲೇ ಸಿದ್ದತೆ ಆರಂಭಿಸಿವೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇಂಗ್ಲೆಂಡ್ ಮೂಲದ ಗೇಮ್ ಚೇಂಜರ್ ಆಟಗಾರನಿಗೆ ಗಾಳ ಹಾಕಿದೆ. ಈ ಕುರಿತಾದ ಅಪ್ಡೇಟ್ಸ್ ಇಲ್ಲಿದೆ.
ಹ್ಯಾಟ್ರಿಕ್ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟ ಆರ್ಸಿಬಿ
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದ್ದು, ಇದೀಗ ಹ್ಯಾಟ್ರಿಕ್ ಐಪಿಎಲ್ ಟ್ರೋಫಿ ಮೇಲೆ ಆರ್ಸಿಬಿ ತಂಡವು ಕಣ್ಣಿಟ್ಟಿದೆ. ಇದುವರೆಗೂ ಯಾವೊಂದು ತಂಡವು ಐಪಿಎಲ್ನಲ್ಲಿ ಹ್ಯಾಟ್ರಿಕ್ ಐಪಿಎಲ್ ಟ್ರೋಫಿ ಜಯಿಸಿಲ್ಲ. ಹೀಗಾಗಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲು ಬೆಂಗಳೂರು ತಂಡವು ಎದುರು ನೋಡುತ್ತಿದೆ.
ಮುಂದಿನ ಸೀಸನ್ ಐಪಿಎಲ್ಗೆ ಬಲಿಷ್ಠ ತಂಡ ಕಟ್ಟಲು ಆರ್ಸಿಬಿ ಪ್ಲಾನ್
ಹೀಗಿರುವಾಗಲೇ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿಯು ತನ್ನ ತಂಡವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಈಗಿನಿಂದಲೇ ರಣತಂತ್ರ ಹೆಣೆಯಲಾರಂಭಿಸಿದೆ. ಇದರ ಭಾಗವಾಗಿ ಆರ್ಸಿಬಿ ತಂಡದ ಡೆರೆಕ್ಟರ್ ಆಫ್ ಕ್ರಿಕೆಟ್ ಆಗಿ ಮೋ ಬೊಬಟ್(ಮೊಹಮ್ಮದ್ ಬೊಬಟ್) ಇದೀಗ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ಗೆ ಗಾಳ ಹಾಕಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಯಾಮ್ ಕರ್ರನ್ ಕರೆ ತರಲು ಆರ್ಸಿಬಿ ಮಾಸ್ಟರ್ ಪ್ಲಾನ್
ಹೌದು, ಇತ್ತೀಚೆಗಷ್ಟೇ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೀಮಿತ ಓವರ್ಗಳ ಸರಣಿಯಲ್ಲಿ ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ ಸ್ಯಾಮ್ ಕರ್ರನ್ ಅವರನ್ನು ಆರ್ಸಿಬಿಗೆ ಕರೆ ತರಲು ಮೊ ಬೊಬಟ್ ಮಾಸ್ಟರ್ ಪ್ಲಾನ್ ಹೆಣೆದಿದ್ದಾರೆ ಎಂದು ವರದಿಯಾಗಿದೆ. ಇದಷ್ಟೇ ಅಲ್ಲದೇ ಈ ವಿಚಾರವಾಗಿ ಸ್ಯಾಮ್ ಕರ್ರನ್ ಅವರ ಜತೆ ಬೊಬಟ್ ಈಗಾಗಲೇ ಲಂಡನ್ನಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಶೆಫರ್ಡ್ ಬದಲಿಗೆ ಕರ್ರನ್ಗೆ ಮಣೆ?
ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಕೆರಿಬಿಯನ್ ಮೂಲದ ರೊಮ್ಯಾರಿಯೋ ಶೆಫರ್ಡ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಹೀಗಾಗಿ ಶೆಫರ್ಡ್ ಬದಲಿಗೆ ಸ್ಯಾಮ್ ಕರ್ರನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್ಸಿಬಿ ಫ್ರಾಂಚೈಸಿ ಉತ್ಸುಕವಾಗಿದೆ ಎಂದು ವರದಿಯಾಗಿದೆ. ಸ್ಯಾಮ್ ಕರ್ರನ್ ಬೌಲಿಂಗ್ ಮಾತ್ರವಲ್ಲದೇ ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್ನಲ್ಲೂ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯವನ್ನು ಇಂಗ್ಲೆಂಡ್ ಆಲ್ರೌಂಡರ್ ಹೊಂದಿದ್ದಾರೆ.
ಲಾರ್ಡ್ಸ್ ಮ್ಯಾಚ್ ಗೆಲುವಿನ ರೂವಾರಿ ಸ್ಯಾಮ್ ಕರ್ರನ್
ಭಾರತ ಎದುರಿನ ಸೀಮಿತ ಓವರ್ಗಳ ಸರಣಿಯಲ್ಲಿ(ಏಕದಿನ ಹಾಗೂ ಟಿ20) ಇಂಗ್ಲೆಂಡ್ ಪರ ಒಟ್ಟು ಐದು ಪಂದ್ಯಗಳನ್ನಾಡಿದ ಸ್ಯಾಮ್ ಕರ್ರನ್ ಏಳು ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಲಾರ್ಡ್ಸ್ನಲ್ಲಿ ನಡೆದ ನಿರ್ಣಾಯಕ ಏಕದಿನ ಪಂದ್ಯವೊಂದರಲ್ಲೇ ಕರ್ರನ್ ಪ್ರಮುಖ 4 ವಿಕೆಟ್ ಕಬಳಿಸಿ ಇಂಗ್ಲೆಂಡ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನೂ ಬ್ಯಾಟಿಂಗ್ನಲ್ಲೂ ಕರ್ರನ್ ಭಾರತ ಎದುರಿನ ಸರಣಿಯಲ್ಲಿ 48 ರನ್ ಬಾರಿಸಿ ಮಿಂಚಿದ್ದರು.
ಆರ್ಸಿಬಿ ತೆಕ್ಕೆಗೆ ಬರ್ತಾರಾ ಸ್ಯಾಮ್ ಕರ್ರನ್?
ಈಗಾಗಲೇ ಆರ್ಸಿಬಿ ತಂಡದಲ್ಲಿ ಫಿಲ್ ಸಾಲ್ಟ್, ಜೇಕಬ್ ಬೆಥೆಲ್ ಅವರಂತಹ ಇಂಗ್ಲೆಂಡ್ ಮೂಲದ ಸ್ಟಾರ್ ಆಟಗಾರರಿದ್ದು, ಇದೀಗ ಸ್ಯಾಮ್ ಕರ್ರನ್ ಕೂಡಾ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡ ಕೂಡಿಕೊಂಡರೇ, ಬೆಂಗಳೂರು ತಂಡಕ್ಕೆ ಆನೆ ಬಲ ಬರಲಿದೆ. ಸ್ಯಾಮ್ ಕರ್ರನ್ ಮುಂಬರುವ ದಿನಗಳಲ್ಲಿ ಆರ್ಸಿಬಿ ಪಾಲಾಗ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

