ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆಯೊಬ್ಬರನ್ನು ರೈಲ್ವೆ ಪೊಲೀಸ್ ಕೂದಲೆಳೆ ಅಂತರದಲ್ಲಿ ರಕ್ಷಿಸಿದ್ದಾರೆ. ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ರೈಲಿನಿಂದ ಬೀಳುವುದನ್ನು ಪೊಲೀಸ್ ತಪ್ಪಿಸಿದ್ದಾರೆ.
ರೈಲು ಹತ್ತುವ, ಇಳಿಯುವ ರಭಸದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿ. ಇನ್ನು ಹಲವರನ್ನು ರೈಲು ಸಿಬ್ಬಂದಿ ಕಾಪಾಡಿರುವ ವಿಡಿಯೋಗಳು ಇದಾಗಲೇ ಸಾಕಷ್ಟು ವೈರಲ್ ಆಗುತ್ತಿವೆ. ಆದರೂ ಜನರಿಗೆ ಬುದ್ಧಿ ಬರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ತಪ್ಪು ರೈಲು ಹತ್ತುವುದು ಇದೆ. ಅದು ಬೇರೆ ರೈಲು ಎಂದು ಗೊತ್ತಾದ ತಕ್ಷಣ ಗಾಬರಿಯಿಂದ ಇಳಿಯುವುದು ಇದೆ. ಆ ಕ್ಷಣದಲ್ಲಿ ಗಾಬರಿಯಾಗುವುದು ಎಂಥವರಿಗೂ ಸಹಜವೇ. ಆದರೆ ಸ್ವಲ್ಪ ಯಾಮಾರಿ ಜೀವ ಕಳೆದುಕೊಂಡವರು ತುಂಬಾ ಮಂದಿ ಇದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಒಬ್ಬರು ಮೇಲೆ ಹತ್ತಿರುತ್ತಾರೆ, ಅವರ ಜೊತೆಯಲ್ಲಿ ಬಂದವರು ಕೆಳಗಡೆಯೇ ಇರುತ್ತಾರೆ, ಆಗಲೂ ಗಾಬರಿಯಿಂದ ರೈಲು ಇಳಿದೋ, ಹತ್ತಿಯೋ ಎಡವಟ್ಟು ಮಾಡಿಕೊಳ್ಳುವುದು ಇದೆ.
ಆದರೆ ಕೆಲವೊಮ್ಮೆ ವಿನಾಕಾರಣ, ಅವಸರದಲ್ಲಿ ಪ್ರಾಣವನ್ನು ಕಳೆದುಕೊಳ್ಳುವ ಮತ್ತೊಂದಿಷ್ಟು ಮಂದಿಯೂ ಇದ್ದಾರೆ. ರೈಲು ನಿಲ್ಲುವವರೆಗೂ ತಾಳ್ಮೆ ತೋರದೇ ಗಾಬರಿಯಿಂದ ಅದನ್ನು ಹತ್ತಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುವವರು ಇಲ್ಲವೇ ಕೈಕಾಲು ಮುರಿದುಕೊಳ್ಳುವವರು ಇದ್ದಾರೆ. ಆದರೆ ಕೆಲವೊಮ್ಮೆ ಮಾತ್ರ ಅದೃಷ್ಟ ಅವರನ್ನು ಕಾಪಾಡುವುದೂ ಇದೆ. ಅಂಥದ್ದೇ ಒಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಈ ಘಟನೆ ನಡೆದಿರುವುದಾಗಿ ಹೇಳಲಾಗಿದೆ.
ಮಹಿಳೆಯೊಬ್ಬರು ರೈಲು ನಿಲ್ದಾಣ ಬಂದಿದ್ದು ಅರಿಯದೇ ರೈಲಿನ ಒಳಗೇ ಇದ್ದರು. ಬಳಿಕ ರೈಲು ಚಲಿಸುತ್ತಿದ್ದಂತೆಯೇ ನಿಲ್ದಾಣ ಬಂದಿರುವುದು ತಿಳಿದಿದೆ. ಆಗ ಗಡಿಬಿಡಿಯಿಂದ ರೈಲಿನಿಂದ ಇಳಿಯಲು ನೋಡಿದ್ದಾರೆ. ಅಲ್ಲಿಯೇ ಇದ್ದ ರೈಲ್ವೆ ಪೊಲೀಸ್ ಇದನ್ನು ದೂರದಿಂದ ಗಮನಿಸಿದ್ದಾರೆ. ಕೂಡಲೇ ಅವರಿಗೆ ಎಡವಟ್ಟು ಆಗಿದೆ ಎಂದು ತಿಳಿದಿದೆ. ಅಲ್ಲಿಂದ ರಭಸದಲ್ಲಿ ಓಡಿಬಂದು ಹೀರೋ ರೀತಿಯಲ್ಲಿ ಮಹಿಳೆಯನ್ನು ಕಾಪಾಡಿದ್ದಾರೆ. ಕೂದಲೆಳೆ ಅಂತರದಿಂದ ಮಹಿಳೆ ಬದುಕಿದ್ದಾಳೆ. ಇಲ್ಲದಿದ್ದರೆ ಆಕೆ ರೈಲಿನ ಅಡಿ ಆಗುವುದು ಖಚಿತವಾಗಿತ್ತು. ಅದರ ವಿಡಿಯೋ ವೈರಲ್ ಆಗುತ್ತಿದೆ..
ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ರೈಲು ಇನ್ನೂ ಬಂದಿಲ್ಲ ಎನ್ನುವ ಕಾರಣಕ್ಕೆ ಅಂಗಡಿಯಲ್ಲಿ ಚಿಪ್ಸ್ ಪ್ಯಾಕೆಟ್ ಖರೀದಿಸಲು ಹೋಗಿದ್ದಳು. ಅವಳು ಆ ಪ್ಯಾಕೆಟ್ ಈ ಪ್ಯಾಕೆಟ್ ಎಂದೆಲ್ಲಾ ಖರೀದಿ ಮಾಡುವಷ್ಟರಲ್ಲಿಯೇ ರೈಲು ಬಂದಿದೆ. ಅದನ್ನು ನೋಡಿ ಯುವತಿ ಗಾಬರಿಯಾಗಿಬಿಟ್ಟಿದ್ದಾಳೆ. ರೈಲು ನಿಲ್ಲುವುದನ್ನೂ ಕಾಯದೇ ಕೈಯಲ್ಲಿದ್ದ ಪ್ಯಾಕೆಟ್ಗಳನ್ನು ಅಂಗಡಿಯಲ್ಲಿಯೇ ವಾಪಸ್ ಇಟ್ಟು ಓಡಿ ಹೋಗಿದ್ದಾಳೆ. ರೈಲು ಇನ್ನೂ ನಿಂತಿರಲಿಲ್ಲ. ಚಲಿಸುತ್ತಲೇ ಇತ್ತು. ಯುವತಿಗೆ ಅದೇನಾಯ್ತೋ ಗೊತ್ತಿಲ್ಲ. ಚಲಿಸುತ್ತಿರುವ ರೈಲನ್ನು ಹತ್ತುವ ಸಾಹಸ ಮಾಡಿದ್ದಳು. ಕೊನೆಗೆ ಆಯತಪ್ಪಿ ಬೀಳುವಷ್ಟರಲ್ಲಿಯೇ ಇದೇ ರೀತಿ ಪೊಲೀಸ್ ರಕ್ಷಣೆ ಮಾಡಿದ್ದರು. ರೈಲಿನಲ್ಲಿ ಇಂಥ ದುರ್ಘಟನೆಗಳು ನಡೆಯುತ್ತಲೇ ಇರುವ ಕಾರಣ, ಪ್ರಯಾಣಿಕರು ಬಹಳ ಎಚ್ಚರಿಕೆಯಿಂದ ಇರುವಂತೆ ರೈಲ್ವೆ ಇಲಾಖೆ ಹೇಳಿದೆ.


