ಆನೆ ಪ್ಲಾಸ್ಟಿಕ್ ತಿನ್ನುತ್ತಿರುವ ವಿಡಿಯೋ ವೈರಲ್: ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಕುವುದಕ್ಕೆ ಆಕ್ರೋಶ
ಆನೆಯೊಂದು ಹಸಿವು ತಡೆಯಲಾಗದೇ ಪ್ಲಾಸ್ಟಿಕ್ ತಿನ್ನುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಜೊತೆಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವ ಜನರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಚೆನ್ನೈ: ಎಲ್ಲೆಂದರಲ್ಲಿ ಕಸವನ್ನು ಪ್ಲಾಸ್ಟಿಕ್ಗಳನ್ನು ಬಿಸಾಕುವುದರಿಂದ ನಮಗೆ ಮಾತ್ರವಲ್ಲ. ಇಡೀ ಪರಿಸರ ಕುಲಕ್ಕೆ ಹಾನಿಯುಂಟಾಗುತ್ತದೆ. ಹಸಿವು ತಡೆಯಲಾಗದೇ ರಸ್ತೆ ಪಕ್ಕ ಎಸೆದಿರುವ ಕಸಗಳನ್ನು ತಿಂದು ಬಿಡಾಡಿ ದನಗಳು ಹಾಳು ಮಾಡಿಕೊಂಡು ಸಾವಿಗೀಡಾಗಿದ್ದನ್ನು ನೋಡಿದ್ದೇವೆ. ಅಲ್ಲದೆ ಹೊಟ್ಟೆ ಊದಿಸಿಕೊಂಡು ನಡೆದಾಡುತ್ತಿದ್ದ ಹಸುವೊಂದನ್ನು ಪಶುವೈದ್ಯರು ಶಸ್ತ್ರಚಿಕಿತ್ಸೆಗೆ ಒಳಪಡಿಸಿದಾಗ ಅದರ ಹೊಟ್ಟೆಯಲ್ಲಿ ಕೆಜಿಗಟ್ಟಲೇ ಪ್ಲಾಸ್ಟಿಕ್ ಸಿಕ್ಕಿದ ಘಟನೆಯೂ ನಡೆದಿತ್ತು. ಅದೇ ರೀತಿ ಈಗ ಆನೆಯೊಂದು ಹಸಿವು ತಡೆಯಲಾಗದೇ ಪ್ಲಾಸ್ಟಿಕ್ ತಿನ್ನುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಜೊತೆಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವ ಜನರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ (Sushant Nanda) ಸಾಮಾಜಿಕ ಜಾಲತಾಣದಲ್ಲಿ (Socila Media) ಪೋಸ್ಟ್ ಮಾಡಿದ್ದಾರೆ. ಪರಿಸರವೂ ಅರಗಿಸಿಕೊಳ್ಳಲಾಗದಂತಹ ತ್ಯಾಜ್ಯವನ್ನು ನಾವು ಮನುಷ್ಯರು ಮಾತ್ರವೇ ಸೃಷ್ಟಿ ಮಾಡುತ್ತೇವೆ. ತಮಿಳುನಾಡಿನ ನೀಲಗಿರಿ ಅರಣ್ಯದ್ದು(Nilgir Forest) ಎನ್ನಲಾದ ಈ ವಿಡಿಯೋ ನನ್ನ ಹೃದಯವನ್ನು ಚೂರು ಮಾಡುತ್ತಿದೆ. ಪ್ಲಾಸ್ಟಿಕ್ ದೈತ್ಯ ಪ್ರಾಣಿಗಳ ಪಾಲಿಗೂ ಅಪಾಯಕಾರಿ, ಇದು ಪ್ರಾಣಿಗಳ ಅನ್ನನಾಳವನ್ನು ಸ್ಥಗಿತಗೊಳಿಸಿಬಿಡುತ್ತದೆ. ಹೀಗಾಗಿ ನಾನು ಒಂದು ಬಾರಿ ಬಳಸುವಂತಹ ಪ್ಲಾಸ್ಟಿಕ್ ಅನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ವಿಚಾರದಲ್ಲಿ ಪ್ರತಿಯೊಬ್ಬರು ಜವಾಬ್ದಾರರಾಗಿರಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಅವರು ಈ ಆನೆಯ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.
ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಇದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಈ ಪ್ರಾಣಿ ಪ್ಲಾಸ್ಟಿಕ್ ತಿನ್ನುವುದನ್ನು ನೋಡಿದರೆ ಹೃದಯ ಚೂರಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಬೇಕು, ನಾವು ಈ ಭೂಮಿಗೆ ಕೇವಲ ಪ್ರವಾಸಿಗರಾಗಿ ಬಂದಿದ್ದೇವೆ. ನಮ್ಮ ಈ ಭೇಟಿ ಇತರರಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾವು ಕೇವಲ ದೂರುವುದರಲ್ಲೇ ಇದ್ದೇವೆ. ಏಕೆ ವನ್ಯಜೀವಿ (Wildlife) ಪ್ರದೇಶಗಳಲ್ಲಿ ಈ ರೀತಿ ಪ್ಲಾಸ್ಟಿಕ್ ಬಿಸಾಕುವವರ ವಿರುದ್ಧ ಶಿಸ್ತು ಕ್ರಮ ಅಥವಾ ಶಿಕ್ಷೆ ಕೈಗೊಳ್ಳಬಾರದು ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ಆನೆಗಳು ಸೊಂಡಿಲಲ್ಲಿ ಆಶೀರ್ವದಿಸಿದ್ರೆ ಅನ್ಕೊಂಡಿದ್ದೆಲ್ಲ ಆಗುತ್ತಾ?
ಪ್ರವಾಸಿ ತಾಣಗಳಲ್ಲಿ ಕೆಲವೆಡೆ ಪ್ಲಾಸ್ಟಿಕ್ ಅಥವಾ ಹೊರಗಿನ ತಿಂಡಿಗಳನ್ನೇ ಕೊಂಡೊಯ್ಯುವುದನ್ನೇ ನಿಷೇಧಿಸಲಾಗಿದೆ. ಆದಾಗ್ಯೂ ಬಹುತೇಕ ಸ್ಥಳಗಳಲ್ಲಿ ಪ್ರವಾಸ ತೆರಳುವ ಜನ ಅಲ್ಲಿ ಬೇಡದ ವಸ್ತುಗಳನ್ನು ಕಸಗಳನ್ನು ಎಸೆದು ಬರುತ್ತಾರೆ. ಇದರಿಂದ ಸುಂದರ ತಾಣ ಪ್ಲಾಸ್ಟಿಕ್ಮಯವಾಗಿ ಬದಲಾಗುತ್ತಿದೆ. ಜೊತೆಗೆ ಪರಿಸರದ ನಾಶಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಪ್ರಾಣಿಗಳ ಆವಾಸಸ್ಥಾನ ಎನಿಸಿರುವ ರಾಷ್ಟ್ರೀಯ ಉದ್ಯಾನವನ, ಸಂರಕ್ಷಿತ ಅರಣ್ಯಗಳ ಮಧ್ಯೆ ಹೀಗೆ ಪ್ಲಾಸ್ಟಿಕ್ ಎಸೆಯುವುದರಿಂದ ಅವು ಕಾಡು ಪ್ರಾಣಿಗಳ ಜೀವಕ್ಕೆ ಎರವಾಗುತ್ತಿವೆ. ನಮ್ಮ ಒಂದು ಸಣ್ಣ ತಪ್ಪು ಒಂದು ಪ್ರಾಣಿಯ ಜೀವವನ್ನೇ ಬಲಿ ಪಡೆಯಬಹುದು. ದೊಡ್ಡ ಪ್ರಾಣಿಯೇ ಆಗಲಿ ಸಣ್ಣ ಪ್ರಾಣಿಯೇ ಆಗಲಿ ಹೊಟ್ಟೆಯೊಳಗೆ ಸೇರಿದ ಪ್ಲಾಸ್ಟಿಕ್ ಅನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಯಾವುದಕ್ಕೂ ಇಲ್ಲ.
ಹೆದ್ದಾರಿಯಲ್ಲಿ ಅಟ್ಟಾಡಿಸಿದ ಗಜರಾಜ, ಬೆಟ್ಟಹತ್ತಿ ಕುಳಿತ ಮಾಜಿ ಸಿಎಂ, ವಿಡಿಯೋ ವೈರಲ್!
ಪ್ಲಾಸ್ಟಿಕ್ ಅಥವಾ ಇನ್ನೀತರ ಕಸಗಳನ್ನು ಎಲ್ಲೆಂದರಲ್ಲಿ ಬಿಸಾಕುವುದು ಬಹುತೇಕರ ರೂಢಿ. ಇದರಿಂದ ಇಡೀ ಪರಿಸರವೇ ಹಾನಿಗೊಳಗಾಗುತ್ತದೆ. ಹಸಿ ಕಸ ಒಣ ಕಸ ಬೇರ್ಪಡಿಸಿ ಹಾಕಿ ಎಂದು ಎಷ್ಟೇ ಜಾಗೃತಿ ಮೂಡಿಸಿದರು ಕೆಲವರು ಕೇಳುವುದಕ್ಕೆ ಸಿದ್ಧರಿರುವುದಿಲ್ಲ. ಮತ್ತೇ ಎರಡನ್ನು ಒಟ್ಟಿಗೆ ಸೇರಿಸಿ ಹಾಕಿ ಪೌರ ಕಾರ್ಮಿಕರಿಗೆ ಸಂಕಷ್ಟ ತಂದೊಡ್ಡುವುದಲ್ಲದೇ ಒಂದು ಉತ್ತಮ ಯೋಜನೆಯನ್ನು ಹಾಳು ಗೆಡವಲು ಕಾರಣರಾಗುತ್ತಾರೆ. ಆದರೆ ಪ್ರತಿಯೊಬ್ಬರು ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿದಾಗ ಮಾತ್ರ ಈ ಭೂಮಿ ಹಾಗೂ ಪರಿಸರವನ್ನು ರಕ್ಷಿಸಲು ಸಾಧ್ಯ.