ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಭಾರತ ಇದುವರೆಗೆ ನಡೆಸಿದ ಯಾವುದೇ ಸೇನಾ ಕಾರ್ಯಾಚರಣೆಗಿಂತ ಭಿನ್ನವಾಗಿದೆ ಅದು ಹೇಗೆ ಮತ್ತು ಏಕೆ ಎಂಬುದನ್ನು ಈಗ ನೋಡೋಣ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಭಾರತ ಇದುವರೆಗೆ ನಡೆಸಿದ ಯಾವುದೇ ಸೇನಾ ಕಾರ್ಯಾಚರಣೆಗಿಂತ ಭಿನ್ನವಾಗಿದೆ ಅದು ಹೇಗೆ ಮತ್ತು ಏಕೆ ಎಂಬುದನ್ನು ಈಗ ನೋಡೋಣ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯೂ ಭಾರತದ ಭದ್ರತಾಪಡೆ ಬಾಲಕೋಟ್ ಕಾರ್ಯಾಚರಣೆಯ ನಂತರ ನಡೆಸಿದ ಅತ್ಯಂತ ವಿಸ್ತಾರವಾದ ಹಾಗೂ ಗಡಿಯಾಚೆಗೆ ನಡೆಸಿದ ದಾಳಿಯಾಗಿದೆ. ಬರೀ ಇಷ್ಟೇ ಅಲ್ಲ, ಈ ದಾಳಿಯೂ ಭಾರತದ ಭದ್ರತಾಪಡೆಗಳ ಕಾರ್ಯತಂತ್ರದಲ್ಲಿ ಆದ ಬದಲಾವಣೆಯಿಂದಲೂ ಗಮನ ಸೆಳೆಯುತ್ತಿದೆ.
2016 ರಲ್ಲಿ ನಡೆದ ಉರಿ ಸರ್ಜಿಕಲ್ ಸ್ಟ್ರೈಕ್ ಹಾಗೂ, 2019 ರಲ್ಲಿ ನಡೆದ ಬಾಲಕೋಟ್ ವೈಮಾನಿಕ ದಾಳಿಗಳು ಹಾಗೂ ಭಾರತ ನಡೆಸಿದ ಇತರ ದಾಳಿಗಳಿಗೆ ಒಂದು ನಿಗದಿತ ಪ್ರಮಾಣ ಹಾಗೂ ವ್ಯಾಪ್ತಿಗೆ ಸೀಮಿತವಾಗಿತ್ತು. ಆದರೆ ನಿನ್ನೆ ರಾತ್ರಿ ನಡೆದ ಆಪರೇಷನ್ ಸಿಂಧೂರ್ ತಾಂತ್ರಿಕವಾಗಿ ಬಹಳ ಬಲಿಷ್ಠ ಹಾಗೂ ವಿಸ್ತಾರವಾಗಿತ್ತು ಮತ್ತು ಭಾರತ ಇದುವರೆಗೆ ನಡೆಸಿದ ಯಾವುದೇ ಸೇನಾ ಕಾರ್ಯಾಚರಣೆಗಿಂತ ಇದು ವಿಭಿನ್ನವಾಗಿತ್ತು. ಪಾಕಿಸ್ತಾನ ಆಕ್ರಮಿತ ಪ್ರದೇಶದೊಳಗೆ ನುಗ್ಗಿ ನಡೆಸಿದ ಈ ದಾಳಿಯೂ ಭಾರತದ ಭದ್ರತಾಪಡೆಗಳು ತಮ್ಮ ಹಿಂದಿನ ತಂತ್ರಗಳಿಂದ ಹೊರಬಂದು ಹೊಸತಂತ್ರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿವೆ ಎಂಬುದನ್ನು ಬಹಿರಂಗಪಡಿಸಿದೆ.
ಈ ಭಾರತದ ಅಪರೇಷನ್ ಸಿಂಧೂರ್ನಿಂದ ಪಾಕ್ನ ಭಯೋತ್ಪಾದಕರಿಗೆ ಆದ ನಷ್ಟದ ಪ್ರಮಾಣವೇ ಈ ಭಯೋತ್ಪಾದಕ ಜಾಲಗಳು ಹಾಗೂ ಅವುಗಳನ್ನು ನಿರ್ವಹಿಸುತ್ತಿರುವವರಿಗೆ ಬಲವಾದ ಸಂದೇಶ ನೀಡಿದೆ. ಜೊತೆಗೆ ಭಾರತ ಅನಾಹುತ ನಡೆಯುವುದಕ್ಕೂ ಮೊದಲೇ ಪೂರ್ವಭಾವಿ ದಾಳಿ ನಡೆಸಬಲ್ಲದು ಹಾಗೂ ಪಾಕಿಸ್ತಾನದಲ್ಲಿ ಅದು ತಲುಪದಂತಹ ಸ್ಥಳ ಯಾವುದೂ ಇಲ್ಲ ಎಂಬುದನ್ನು ಸಾಬೀತು ಮಾಡಿದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಈ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಪಹಲ್ಗಾಮ್ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರು ಬಲಿಯಾಗಿದ್ದಾರೆ. ಈ ದಾಳಿಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ (LeT)ದ ಸಹಸಂಘಟನೆ ನಡೆಸಿದೆ ಎಂಬುದು ಸಾಬೀತಾಗಿದೆ. ಎಲ್ಇಟಿ ಭಾರತೀಯ ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ದೀರ್ಘ ದಾಖಲೆಯನ್ನು ಹೊಂದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ನಡೆದ ಆಪರೇಷನ್ ಸಿಂಧೂರ್ ಕೇವಲ ಪ್ರತೀಕಾರ, ಬಲಪ್ರದರ್ಶನ ಮಾತ್ರವಲ್ಲ, ಅದು ಪಾಕಿಸ್ತಾನದ ನೆಲದಲ್ಲಿ ಹುಟ್ಟಿಕೊಂಡ ಭಯೋತ್ಪಾದನೆಯನ್ನು ನಿರ್ನಾಮ ಮಾಡುವ ಪ್ರಯತ್ನವಾಗಿತ್ತು.
ಈ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಒಂಬತ್ತು ಸ್ಥಳಗಳನ್ನು ಧ್ವಂಸ ಮಾಡಿದೆ. ಇವುಗಳಲ್ಲಿ ಮುಜಫರಾಬಾದ್, ಕೋಟ್ಲಿ, ಬಹವಾಲ್ಪುರ್, ರಾವಲಕೋಟ್, ಚಕ್ಸರಿ, ಭಿಂಬರ್, ನೀಲಂ ಕಣಿವೆ, ಝೀಲಂ ಮತ್ತು ಚಕ್ವಾಲ್ ಸೇರಿವೆ. ಒಟ್ಟು ಕ್ಷಿಪಣಿಗಳನ್ನು ಈ ಕಾರ್ಯಾಚರಣೆಗೆ ಬಳಸಲಾಗಿದೆ. ಇದು ಭಾರತ ಕೇವಲ ಒಂದೇ ದಿನದಲ್ಲಿ ಬಳಸಿದ ಅತೀ ಹೆಚ್ಚಿನ ಕ್ಷಿಪಣಿ ದಾಳಿ ಎನಿಸಿದೆ. ಈ ಸಂಘಟಿತ ದಾಳಿಯಲ್ಲಿ 70 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತ ದಾಳಿ ನಡೆಸಿದ ಪ್ರತಿಯೊಂದು ಸ್ಥಳದ ಮೇಲೂ ಬಹಳ ದೀರ್ಘ ಸಮಯದಿಂದಲೂ ಕಣ್ಣಿಡಲಾಗಿತ್ತು. ಸರ್ಕಾರಿ ಮೂಲಗಳ ಪ್ರಕಾರ, ಭಾರತೀಯ ಗುಪ್ತಚರ ಇಲಾಖೆಯು ಉಪಗ್ರಹ ಚಿತ್ರಣ, ಮಾನವ ಮೂಲಗಳು ಮತ್ತು ಸಂವಹನಗಳನ್ನು ಒಟ್ಟುಗೂಡಿಸಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್ಇಟಿ) ನಂತಹ ನಿರ್ದಿಷ್ಟ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದೆ.
ಆಪರೇಷನ್ ಸಿಂಧೂರ್ ವೇಳೆ ಧ್ವಂಸಗೊಂಡ ಕಟ್ಟಡಗಳನ್ನು ಸೈದ್ಧಾಂತಿಕ ಬೋಧನಾ ಕೇಂದ್ರಗಳು( ideological indoctrination centres), ಶಸ್ತ್ರಾಸ್ತ್ರ ಡಿಪೋಗಳು, ಲಾಜಿಸ್ಟಿಕಲ್ ಹಬ್ಗಳು ಮತ್ತು ಸ್ಲೀಪರ್ ಸೆಲ್ ಯೋಜನಾ ಸೌಲಭ್ಯಗಳಿದ್ದ ಕಟ್ಟಡಗಳು ಎಂದು ಗುರುತಿಸಲಾಗಿದೆ.
ಸಿಂಧೂರ್ ಕಾರ್ಯಾಚರಣೆಯು ವಾಯುಸೇನೆ, ನೌಕಾಸೇನೆ ಮತ್ತು ಭೂ ಸೇನೆ ಹೀಗೆ ಭದ್ರತಾಪಡೆಯ ಮೂರೂ ವಿಭಾಗಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಈ ಕಾರ್ಯಾಚರಣೆಯು ಗಾಳಿಯಿಂದ ಉಡಾಯಿಸುವ SCALP ಕ್ರೂಸ್ ಕ್ಷಿಪಣಿಗಳು (air-launched SCALP cruise missiles), ಹ್ಯಾಮರ್ ನಿಖರಗೊಳಿಸಿದ ನಿರ್ದೇಶಿತ ಬಾಂಬ್ಗಳು (HAMMER precision-guided bombs) ಮತ್ತು ಇತರ ಯುದ್ಧಸಾಮಗ್ರಿಗಳನ್ನು ಒಳಗೊಂಡಿತು. ಇವುಗಳನ್ನು ಭಾರತೀಯ ವಾಯು ಪ್ರದೇಶದ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುವ ಭಾರತೀಯ ವಾಯುಪಡೆಯ ವಿಮಾನಗಳಿಂದ ಹಾರಿಸಲಾಗಿತ್ತು. 250 ಕಿ.ಮೀ.ಗಿಂತ ಹೆಚ್ಚು ವ್ಯಾಪ್ತಿಯ SCALP (ಸ್ಟಾರ್ಮ್ ಶ್ಯಾಡೋ) ಕ್ಷಿಪಣಿಗಳನ್ನು ಬಲವರ್ಧಿತ ಬಂಕರ್ಗಳು ಮತ್ತು ಕಮಾಂಡ್ ಪೋಸ್ಟ್ಗಳು ಸೇರಿದಂತೆ ಸ್ಪಷ್ಟವಾದ ಗುರಿಗಳನ್ನು ಹೊಡೆಯಲು ಬಳಸಲಾಗಿತ್ತು.


