ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ವಿಶ್ವದ ವಿವಿಧ ನಾಯಕರು ಖಂಡಿಸಿದ್ದಾರೆ. ಇಸ್ರೇಲ್ ರಾಯಭಾರಿ ಭಾರತದ ಬೆಂಬಲಕ್ಕೆ ನಿಂತಿದ್ದು, ಭಯೋತ್ಪಾದನೆ ವಿರುದ್ಧ ಹೋರಾಡಲು ಸಹಕಾರ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಆಸ್ಟ್ರೇಲಿಯಾ, ಭೂತಾನ್ ಮತ್ತು ನೇಪಾಳ ದೇಶಗಳು ಕೂಡ ದಾಳಿಯನ್ನು ಖಂಡಿಸಿವೆ.

ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಉಗ್ರರ ದಾಳಿ ಪ್ರಕರಣಕ್ಕೆ ಪ್ರಪಂಚದ ವಿವಿಧ ದೇಶಗಳ ನಾಯಕರು, ರಾಯಭಾರಿಗಳು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಕೂಡ ಈ ದಾಳಿಯನ್ನು ಬಲವಾಗಿ ಖಂಡಿಸಿದ್ದು, ಇಂತಹ ಅಪರಾಧಿಗಳು ಯಾವಾಗಲೂ ಇತರರನ್ನು ಬೆದರಿಸಲು ಪ್ರಯತ್ನಿಸುತ್ತಾರೆ. ಭಯೋತ್ಪಾದಕರ ನಿರಂತರ ಪ್ರಯತ್ನಗಳ ಹೊರತಾಗಿಯೂ ಭಾರತವು ಪ್ರತಿದಾಳಿ ನಡೆಸಲು ಹೆಚ್ಚು ಸಶಕ್ತವಾಗಿದೆ ಎಂದರು.

ನಮ್ಮಲ್ಲಿ ಯಾವಾಗಲೂ ಕಾಪಿ ಕ್ಯಾಟ್ ಮಾಡ್ತೇವೆ ಆದರೆ ಉಗ್ರರು ನಮ್ಮನ್ನು ಬೆದರಿಸಲು ಹೊಸ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ನಾವು ಅದನ್ನು ಅನುಸರಿಸಬೇಕು. ಅವರು ಹೇಗೆ ಯೋಚಿಸುತ್ತಾರೆ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಅನುಸರಿಸಬೇಕು ಮತ್ತು ಆದರೆ ಅವರು ಮುಂದುವರಿಯಲು ಪ್ರಯತ್ನಿಸುತ್ತಾರೆ ಆದರೆ ನಾವು ಹೆಚ್ಚು ದೃಢನಿಶ್ಚಯದಿಂದ ಇರುತ್ತೇವೆ ಮತ್ತು ಇಂತಹ ಘಟನೆಗಳ ವಿರುದ್ಧ ಹೋರಾಡಲು ನಾವು ಹೆಚ್ಚು ಹೂಡಿಕೆ ಮಾಡುತ್ತೇವೆ ಎಂದು ನನಗೆ ಖಚಿತವಾಗಿದೆ. ಇಸ್ರೇಲ್ ಭಾರತದೊಂದಿಗೆ ಯಾವಾಗಲೂ ವಿಶಾಲ ಆಧಾರದ ಮೇಲೆ ಸಹಕರಿಸಿದೆ ಮತ್ತು ಮುಂಬರುವ ಸಮಯಗಳಲ್ಲಿ ಅದು ಸಹಕಾರವನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದರು.

ಜಮ್ಮುಕಾಶ್ಮೀರದಲ್ಲಿ ನಡೆದ ಘಟನೆ ಸಂಪೂರ್ಣವಾಗಿ ಭಾರತ ಸರ್ಕಾರಕ್ಕೆ ಸಂಬಂಧಿಸಿದ್ದು,. ಅವರು ಹೇಗೆ ಕೆಲಸ ಮಾಡಬೇಕೆಂದು ತಿಳಿದಿದ್ದಾರೆ ಎಂದು ನನಗೆ ಖಚಿತವಾಗಿದೆ. ಸರ್ಕಾರದ ಪ್ರಯತ್ನಗಳಿಗೆ ಧನ್ಯವಾದಗಳು. ಹಿಂದೆ ಅಲ್ಲಿನ ಪರಿಸ್ಥಿತಿಯನ್ನು ಹೇಗೆ ಸ್ಥಿರಗೊಳಿಸಲಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಆದ್ದರಿಂದ ನಾವು ಒಂದೇ ಘಟನೆಗೆ ಸಂಬಂಧಿಸಿದ ಕಾರ್ಯಾಚರಣೆಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಸಾಮಾನ್ಯವಾಗಿ ಬೆದರಿಕೆಗಳನ್ನು ಹೇಗೆ ಎದುರಿಸುವುದು, ಭಯೋತ್ಪಾದನೆಯ ವಿರುದ್ಧ ಹೋರಾಡುವ ವಿಧಾನಗಳನ್ನು ಹೇಗೆ ಸುಧಾರಿಸುವುದು, ಅದು ಗುಪ್ತಚರ, ತಂತ್ರಜ್ಞಾನ, ವಿಧಾನ ಇತ್ಯಾದಿಯಾಗಿರಲಿ, ವಿಶಾಲ ಆಧಾರದ ಮೇಲೆ ಒಟ್ಟಾಗಿ ಸಹಕರಿಸಲು ನಾವು ಪ್ರಯತ್ನಿಸುತ್ತೇವೆ. ಆದ್ದರಿಂದ ನಾವು ಭವಿಷ್ಯದಲ್ಲಿ ಈ ಸಹಕಾರವನ್ನು ಮುಂದುವರಿಸುತ್ತೇವೆ. ಭಾರತವು ಈ ವಿಷಯದ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರುವುದರಿಂದ ಏನು ಮಾಡಬೇಕೆಂದು ಇಸ್ರೇಲ್ ಭಾರತಕ್ಕೆ ಶಿಫಾರಸು ಮಾಡುವುದಿಲ್ಲ ಎಂದು ಅಜರ್ ಹೇಳಿದ್ದಾರೆ. 

ನಾನು ಹೇಳಿದಂತೆ, ಇಸ್ರೇಲ್ ಒಂದು ನಿರ್ದಿಷ್ಟ ಪ್ರಕರಣದಲ್ಲಿ ಏನು ಮಾಡಬೇಕೆಂದು ಇತರ ದೇಶಗಳಿಗೆ ಶಿಫಾರಸು ಮಾಡುವುದಿಲ್ಲ. ಭಾರತ ಸರ್ಕಾರ ಮತ್ತು ಇಲ್ಲಿನ ಅಧಿಕಾರಿಗಳು ಗಡಿಯಾಚೆಗಿನ ಪ್ರದೇಶದ ಪರಿಸ್ಥಿತಿ ಮತ್ತು ಈ ಸಮಸ್ಯೆಯನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಉತ್ತಮ ಗುಪ್ತಚರ ಮಾಹಿತಿಯನ್ನು ಹೊಂದಿದ್ದಾರೆ ಎಂದು ನನಗೆ ಖಚಿತವಾಗಿದೆ. ಸಾಮಾನ್ಯ ನಿಯಮಗಳಿಗೆ ಬಂದಾಗ ಅವರು ಸಹಕರಿಸುತ್ತಾರೆ. ವಿಧಾನಶಾಸ್ತ್ರ, ತಂತ್ರಜ್ಞಾನ, ಬುದ್ಧಿಮತ್ತೆಯ ವಿಷಯಕ್ಕೆ ಬಂದಾಗ, ನಾವು ಸಹಕಾರದ ಮೇಲೆ ಕೇಂದ್ರೀಕರಿಸಲಿದ್ದೇವೆ ಮತ್ತು ಇದು ನಾವು ಮುಂದುವರಿಸುವ ಬಹಳ ಮುಖ್ಯವಾದ ಕೆಲಸ ಎಂದು ಅವರು ಹೇಳಿದರು.

ಹಾಗೆಯೇ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ ಘಟನೆಯನ್ನು ಖಂಡಿಸಿದ್ದು ಟ್ವಿಟ್‌ ಮಾಡಿದ್ದು,ಆಸ್ಟ್ರೇಲಿಯಾ ಮತ್ತು ಭಾರತ ಉತ್ತಮ ಸ್ನೇಹಿತರು ಮತ್ತು ಈ ಕಷ್ಟದ ಸಮಯದಲ್ಲಿ ನಾವು ಭಾರತದ ಜೊತೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. 

ಹಾಗೆಯೇ ನೆರೆಯ ಭೂತಾನ್ ಪ್ರಧಾನಿ ಕೂಡ ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ನಿನ್ನೆ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರು ಮತ್ತು ಸಂತ್ರಸ್ತರಿಗೆ ಸಂತಾಪ ಮತ್ತು ಪ್ರಾರ್ಥನೆಗಳನ್ನು ಕಳುಹಿಸುತ್ತಿದ್ದೇನೆ. ಭೂತಾನ್ ಇಂತಹ ಕ್ರೂರ ಭಯೋತ್ಪಾದಕ ಕೃತ್ಯಗಳನ್ನು ಬಲವಾಗಿ ಖಂಡಿಸುತ್ತದೆ ಮತ್ತು ಒಗ್ಗಟ್ಟು ಮತ್ತು ಸ್ನೇಹಕ್ಕಾಗಿ ಭಾರತ ಸರ್ಕಾರ ಮತ್ತು ಜನರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಭೂತಾನ್ ಪ್ರಧಾನಿ ತ್ಸೆರಿಂಗ್ ಟೋಬ್ಗೆ ಟ್ವೀಟ್ ಮಾಡಿದ್ದಾರೆ.

ಹಾಗೆಯೇ ನೆರೆಯ ನೇಪಾಳ ದೇಶವೂ ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ನೇಪಾಳ ಬಲವಾಗಿ ಖಂಡಿಸುತ್ತದೆ. ಇಂತಹ ಹಿಂಸಾಚಾರದ ವಿರುದ್ಧ ನಾವು ಭಾರತದ ಜೊತೆ ನಿಲ್ಲುತ್ತೇವೆ. ನೇಪಾಳಿ ಪ್ರಜೆ ಸುದೀಪ್ ನ್ಯೂಪಾನೆ ಅವರ ನಿಧನದಿಂದ ತೀವ್ರ ದುಃಖಿತರಾಗಿದ್ದೇವೆ. ಅವರ ಕುಟುಂಬ ಮತ್ತು ಸಂತ್ರಸ್ತರಿಗೆ ಹೃತ್ಪೂರ್ವಕ ಸಂತಾಪಗಳು. ನೇಪಾಳ ಸರ್ಕಾರ ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುತ್ತದೆ ಎಂದು ಭಾರತದಲ್ಲಿ ನೇಪಾಳ ರಾಯಭಾರಿಯಾಗಿರುವ ಡಾ. ಶಂಕರ್ ಪಿ ಶರ್ಮಾ ಹೇಳಿದ್ದಾರೆ.

ಇತ್ತ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಇಂದು ವಿಧ್ವಂಸಕ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ, ತನಿಖೆಯಲ್ಲಿ ಜಮ್ಮು ಮತ್ತು ಕಾಶ್ಮೀರ (ಜೆ-ಕೆ) ಪೊಲೀಸರಿಗೆ ಬೆಂಬಲ ನೀಡಿದೆ. ಎನ್‌ಐಎ ತಂಡದ ಸದಸ್ಯರು ತನಿಖೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಸಹಾಯ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:
ಇದನ್ನೂ ಓದಿ:ಮೋದಿಯನ್ನು ಬೆಂಬಲಿಸುವಿರಾ ಎಂದು ಕೇಳಿ ಟೆಂಟ್‌ನಿಂದ ಎಳೆದು ಗುಂಡಿಕ್ಕಿದರು