ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ನಂತರ, ಆಸನ್ಸೋಲ್‌ನಲ್ಲಿ 21 ವರ್ಷಗಳಿಂದ ಬಹುತೇಕ ಮುಚ್ಚಲ್ಪಟ್ಟಿದ್ದ ಐತಿಹಾಸಿಕ ದುರ್ಗಾ ಮಂದಿರವನ್ನು ನೂತನ ಬಿಜೆಪಿ ಶಾಸಕ ಕೃಷ್ಣೇಂದು ಮುಖರ್ಜಿ ತೆರೆದಿದ್ದಾರೆ. ಈ ಘಟನೆ ಭಕ್ತರಲ್ಲಿ ಸಂಭ್ರಮ ತಂದಿದ್ದು, ದಶಕಗಳ ಕಾಲದ ರಾಜಕೀಯ, ಕೋಮು ಸಂಘರ್ಷಕ್ಕೆ ಅಂತ್ಯ ಹಾಡಿದೆ.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆಯನ್ನು ಆರಂಭಿಸಿದೆ. ಈ ಬದಲಾವಣೆಯ ಅಲೆ ಈಗ ಕೇವಲ ವಿಧಾನಸಭೆಗೆ ಸೀಮಿತವಾಗದೆ, ದಶಕಗಳ ಕಾಲ ಬೀಗ ಹಾಕಲ್ಪಟ್ಟಿದ್ದ ನಂಬಿಕೆ ಮತ್ತು ಸಂಪ್ರದಾಯಗಳ ಕದವನ್ನೂ ತೆರೆದಿದೆ. ಪಶ್ಚಿಮ ಬಂಗಾಳದ ಆಸನ್ಸೋಲ್‌ನ ಬಸ್ಟಿನ್ ಬಜಾರ್ ಪ್ರದೇಶದಲ್ಲಿರುವ ಐತಿಹಾಸಿಕ 'ಶ್ರೀ-ಶ್ರೀ ದುರ್ಗಾಮಾತಾ ಚಾರಿಟಬಲ್ ಟ್ರಸ್ಟ್' ಮಂದಿರವು 21 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಈಗ ಪ್ರತಿದಿನದ ಪೂಜೆಗಾಗಿ ಸಂಪೂರ್ಣವಾಗಿ ಮುಕ್ತವಾಗಿದೆ.

ದಶಕಗಳ ಕಾಲದ ಬಂಧನಕ್ಕೆ ಮುಕ್ತಿ:

ಬಸ್ಟಿನ್ ಬಜಾರ್‌ನ ಈ ದುರ್ಗಾ ಮಂದಿರವು ಸ್ಥಳೀಯರ ಆರಾಧ್ಯ ದೈವ. ಆದರೆ, ಕಳೆದ ಎರಡು ದಶಕಗಳಿಂದ ಈ ಮಂದಿರವು ಸ್ಥಳೀಯ ಕೋಮು ಉದ್ವಿಗ್ನತೆ ಮತ್ತು ರಾಜಕೀಯ ಹಿತಾಸಕ್ತಿಗಳ ಸಂಘರ್ಷಕ್ಕೆ ಸಿಲುಕಿತ್ತು. ಕೇವಲ ವರ್ಷಕ್ಕೆ ಎರಡು ಬಾರಿ—ದುರ್ಗಾ ಪೂಜೆ ಮತ್ತು ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಮಾತ್ರ 10 ದಿನಗಳ ಕಾಲ ಈ ಮಂದಿರದ ಬಾಗಿಲು ತೆರೆಯಲಾಗುತ್ತಿತ್ತು. ಉಳಿದ ದಿನಗಳಲ್ಲಿ ಭಕ್ತರು ಮಂದಿರದ ಹೊರಗಿನಿಂದಲೇ ದೇವಿಗೆ ನಮಸ್ಕರಿಸಿ ಹೋಗಬೇಕಾದ ಅನಿವಾರ್ಯತೆ ಇತ್ತು. 21 ವರ್ಷಗಳ ಕಾಲ ಈ ಮಂದಿರಕ್ಕೆ ಬೀಗ ಹಾಕಲಾಗಿತ್ತು.

ಮಾತು ಉಳಿಸಿಕೊಂಡ ಶಾಸಕ ಕೃಷ್ಣೇಂದು ಮುಖರ್ಜಿ:

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಎಲ್ಲಾ 9 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷವು ಭರ್ಜರಿ ಜಯ ದಾಖಲಿಸಿದೆ. ಆಸನ್ಸೋಲ್ ಉತ್ತರ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಬಿಜೆಪಿ ಶಾಸಕ ಕೃಷ್ಣೇಂದು ಮುಖರ್ಜಿ ಅವರು ಚುನಾವಣಾ ಪ್ರಚಾರದ ವೇಳೆ ಭಕ್ತರಿಗೆ ಒಂದು ಪ್ರಮುಖ ಭರವಸೆ ನೀಡಿದ್ದರು. 'ನಾವು ಗೆದ್ದರೆ ಮಂದಿರದ ಮೇಲಿರುವ ರಾಜಕೀಯ ಬೀಗವನ್ನು ಕಿತ್ತೆಸೆಯುತ್ತೇವೆ ಮತ್ತು ವರ್ಷದ 365 ದಿನಗಳೂ ಮಂದಿರವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತೇವೆ' ಎಂದು ಘೋಷಿಸಿದ್ದರು. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಮುಖರ್ಜಿ ಅವರು ಮಂದಿರಕ್ಕೆ ಭೇಟಿ ನೀಡಿ, ತಾವೇ ಖುದ್ದಾಗಿ ಕದ ತೆರೆಯುವ ಮೂಲಕ ಆ ಭರವಸೆಯನ್ನು ಈಡೇರಿಸಿದ್ದಾರೆ.

ಭಕ್ತರ ಕಣ್ಣೀರು ಮತ್ತು ಸಂಭ್ರಮ:

ಮಂದಿರದ ಕದ ತೆರೆಯುತ್ತಿದ್ದಂತೆ ಇಡೀ ಬಸ್ಟಿನ್ ಬಜಾರ್ ಪ್ರದೇಶದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಶಂಖನಾದ ಮತ್ತು ಜಯಘೋಷಗಳ ನಡುವೆ ಸಾವಿರಾರು ಭಕ್ತರು ಮಂದಿರ ಪ್ರವೇಶಿಸಿದರು. ದಶಕಗಳ ಕಾಲದ ಕಾಯುವಿಕೆ ಮುಗಿದ ನೆಮ್ಮದಿಯಲ್ಲಿ ಅನೇಕ ವೃದ್ಧ ಭಕ್ತರ ಕಣ್ಣಲ್ಲಿ ಆನಂದಬಾಷ್ಪ ಹರಿಯಿತು. ಈ ಭಾವನಾತ್ಮಕ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. 'ಇದು ಕೇವಲ ರಾಜಕೀಯ ವಿಜಯವಲ್ಲ, ಇದು ನಮ್ಮ ಧಾರ್ಮಿಕ ಹಕ್ಕಿನ ಮರುಸ್ಥಾಪನೆ' ಎಂದು ಸ್ಥಳೀಯರು ಸಂಭ್ರಮ ಹಂಚಿಕೊಂಡಿದ್ದಾರೆ.

Scroll to load tweet…

ಆರ್ಥಿಕತೆಯೂ ಚೇತರಿಕೆ:

ಮಂದಿರವು ದಿನನಿತ್ಯದ ಪೂಜೆಗೆ ಮುಕ್ತವಾಗಿರುವುದರಿಂದ ಕೇವಲ ಧಾರ್ಮಿಕ ಭಾವನೆಗಳಷ್ಟೇ ಅಲ್ಲದೆ, ಸ್ಥಳೀಯ ಆರ್ಥಿಕತೆಗೂ ಬಲ ಸಿಗಲಿದೆ. ಮಂದಿರದ ಸುತ್ತಮುತ್ತಲಿರುವ ಹೂವಿನ ಮಾರಾಟಗಾರರು, ಹಣ್ಣಿನ ಅಂಗಡಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಈಗ ವರ್ಷಪೂರ್ತಿ ವ್ಯಾಪಾರ ಸಿಗುವ ಭರವಸೆ ಮೂಡಿದೆ.

ಹೊಸ ಸರ್ಕಾರದ ಪ್ರಮಾಣವಚನ:

ಪಶ್ಚಿಮ ಬಂಗಾಳದ 293 ಸ್ಥಾನಗಳ ಪೈಕಿ ಬಿಜೆಪಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿದೆ. ಮೇ 9 ರಂದು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಅದಕ್ಕೂ ಮುನ್ನವೇ ರಾಜ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಗೋಚರಿಸುತ್ತಿವೆ.