2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 203 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಜಯ ಸಾಧಿಸಿದೆ. ಆದರೆ, ಈ ಗೆಲವಿಗೆ ಹಲವು ಅಂಶಗಳು ಕಾರಣವಾಗಿವೆ. ಒಟ್ಟು 5 ಅಂಶಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಪತಾಕೆಯನ್ನು ಹಾರಿಸುವುದಕ್ಕೆ ಪ್ರಮುಖ ಕಾರಣವಾಗಿವೆ. ಅವುಗಳ ವಿವರ ಇಲ್ಲಿದೆ ನೋಡಿ.

ಭಾರತೀಯ ರಾಜಕಾರಣದ ಅತ್ಯಂತ ಕಠಿಣ ಚುನಾವಣಾ ಕಣಗಳಲ್ಲಿ ಒಂದಾದ ಪಶ್ಚಿಮ ಬಂಗಾಳದಲ್ಲಿ 2026ರ ವಿಧಾನಸಭಾ ಚುನಾವಣೆಯು ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗಿದೆ. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (TMC) ಭದ್ರಕೋಟೆಯನ್ನು ನೆಲಕಚ್ಚುವಂತೆ ಮಾಡಿರುವ ಬಿಜೆಪಿ, 203 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ವಿಜಯ ಸಾಧಿಸಿದೆ. ದಶಕಗಳ ಕಾಲ ಬಂಗಾಳವನ್ನು ಆಳಿದ್ದ ಪ್ರಾದೇಶಿಕ ಶಕ್ತಿಯನ್ನು ಮೆಟ್ಟಿ ನಿಲ್ಲಲು ಬಿಜೆಪಿಗೆ ಸಾಧ್ಯವಾಗಿದ್ದು ಹೇಗೆ? ಈ ಗೆಲುವಿನ ಹಿಂದಿನ ರೋಚಕ ಕಾರಣಗಳು ಇಲ್ಲಿವೆ.

ಚುನಾವಣಾ ಫಲಿತಾಂಶದ ಚಿತ್ರಣ:

  • ಬಿಜೆಪಿ (BJP): 203
  • ಟಿಎಂಸಿ (TMC): 84
  • ಕಾಂಗ್ರೆಸ್ (Congress): 02
  • ಇತರೆ: 04

ಬಿಜೆಪಿ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು:

1. ಆರ್.ಜಿ.ಕರ್ ಆಸ್ಪತ್ರೆ ಪ್ರಕರಣ ಮತ್ತು ಸಿಂಪತಿ ಕಾರ್ಡ್:

ಬಿಜೆಪಿಯ ಗೆಲುವಿನಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಾ*ಚಾರ ಹಾಗೂ ಕೊಲೆ ಪ್ರಕರಣ. ಈ ಘಟನೆಯಿಂದ ಇಡೀ ದೇಶವೇ ತಲ್ಲಣಿಸಿತ್ತು. ಬಿಜೆಪಿ ಅತ್ಯಂತ ಚಾಣಾಕ್ಷತನದಿಂದ ಸಂತ್ರಸ್ತ ಯುವತಿಯ ತಾಯಿಗೆ ಚುನಾವಣಾ ಟಿಕೆಟ್ ನೀಡುವ ಮೂಲಕ ಬಂಗಾಳದ ಜನರ ಭಾವನಾತ್ಮಕ ಬೆಂಬಲವನ್ನು ಗಳಿಸಿತು. ಇದು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧದ ಆಕ್ರೋಶವನ್ನು ಮತಗಳಾಗಿ ಪರಿವರ್ತಿಸಲು ಸಹಕಾರಿಯಾಯಿತು.

2. ಅಮಿತ್ ಶಾ ಅವರ ನೇರ ಉಸ್ತುವಾರಿ ಮತ್ತು ಐ-ಪ್ಯಾಕ್ ಹತ್ತಿಕ್ಕುವಿಕೆ:

ಕಳೆದ ಚುನಾವಣೆಗಳಲ್ಲಿ ಟಿಎಂಸಿ ಪರವಾಗಿ ಐ-ಪ್ಯಾಕ್ (I-PAC) ಸಂಸ್ಥೆಯು ರೂಪಿಸುತ್ತಿದ್ದ ತಂತ್ರಗಾರಿಕೆಗಳು ಬಿಜೆಪಿಗೆ ಮುಳುವಾಗಿದ್ದವು. ಆದರೆ ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇರವಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು. ಐ-ಪ್ಯಾಕ್‌ನ ಯಾವುದೇ ತಂತ್ರಗಳು ಕೆಲಸ ಮಾಡದಂತೆ ಕೇಂದ್ರ ಮಟ್ಟದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಇದರಿಂದಾಗಿ ಈ ಹಿಂದೆ ಮಮತಾ ಬ್ಯಾನರ್ಜಿ ಅವರು ಪ್ರದರ್ಶಿಸುತ್ತಿದ್ದ 'ಕಾಲು ಮುರಿತ', 'ತಲೆನೋವು' ಮುಂತಾದ ಭಾವನಾತ್ಮಕ ನಾಟಕಗಳಿಗೆ ಈ ಬಾರಿ ಮನ್ನಣೆ ಸಿಗಲಿಲ್ಲ.

3. ಮಹಿಳಾ ಮತದಾರರ ಒಲವು ಮತ್ತು ಮಹಿಳಾ ಮೀಸಲಾತಿ:

ಪಶ್ಚಿಮ ಬಂಗಾಳದಲ್ಲಿ ಮಹಿಳಾ ಮತದಾರರ ಸಂಖ್ಯೆ ಮತ್ತು ಅವರ ಪ್ರಭಾವ ದೊಡ್ಡದಿದೆ. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತರುವಲ್ಲಿ ಮಮತಾ ಬ್ಯಾನರ್ಜಿ ವಿಫಲರಾದರು ಎಂಬ ಅಂಶವನ್ನು ಬಿಜೆಪಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿತು. ಇದುವರೆಗೂ ಟಿಎಂಸಿಯ 'ವೋಟ್ ಬ್ಯಾಂಕ್' ಆಗಿದ್ದ ಮಹಿಳೆಯರು ಈ ಬಾರಿ ಮೋದಿ ಸರ್ಕಾರದ ಪರವಾಗಿ ನಿಂತಿದ್ದು ಬಿಜೆಪಿಯ ಈ ಬೃಹತ್ ಗೆಲುವಿಗೆ ಪ್ರಮುಖ ಕಾರಣವಾಯಿತು.

4. ನರೇಂದ್ರ ಮೋದಿ ಅವರ 'ಸರಳ' ಸಂಪರ್ಕ:

ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದ ಸಂಸ್ಕೃತಿಗೆ ಹತ್ತಿರವಾಗುವ ಪ್ರಯತ್ನ ಮಾಡಿದರು. ಪ್ರಚಾರದ ನಡುವೆ ಬಂಗಾಳದ ಜನಸಾಮಾನ್ಯರಂತೆ ರಸ್ತೆಯಲ್ಲಿ 'ಚುರುಮುರಿ' ತಿನ್ನುವ ಮೂಲಕ ಅವರು ಜನರ ಮನಗೆದ್ದರು. 'ಮೋದಿ ಹೊರಗಿನವರಲ್ಲ, ನಮ್ಮವರೇ ಒಬ್ಬರು' ಎಂಬ ಭಾವನೆ ಮೂಡಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಬಂಗಾಳದ ಭಾಷೆ ಮತ್ತು ಸಂಸ್ಕೃತಿಯನ್ನು ಮೋದಿ ಅವರು ತಮ್ಮ ಭಾಷಣಗಳಲ್ಲಿ ಬಳಸಿದ್ದು ಜನರನ್ನು ಸೆಳೆಯಿತು.

ಟಿಎಂಸಿ ಪತನಕ್ಕೆ ಕಾರಣವೇನು?

ಮಮತಾ ಬ್ಯಾನರ್ಜಿ ಅವರ ಸುತ್ತ ಬೆಳೆದಿದ್ದ ಭ್ರಷ್ಟಾಚಾರದ ಆರೋಪಗಳು, ಪಕ್ಷದ ಕಾರ್ಯಕರ್ತರ ದೌರ್ಜನ್ಯ ಮತ್ತು ಆರ್.ಜಿ.ಕರ್ ಪ್ರಕರಣವನ್ನು ನಿಭಾಯಿಸಿದ ರೀತಿ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು. ಇದರ ಲಾಭವನ್ನು ಬಿಜೆಪಿ ಸರಿಯಾದ ಸಮಯದಲ್ಲಿ ಪಡೆದುಕೊಂಡಿತು. 2026ರ ಈ ಫಲಿತಾಂಶವು ಬಂಗಾಳದ ರಾಜಕಾರಣದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದೆ.