ಪಶ್ಚಿಮ ಬಂಗಾಳ ಸರ್ಕಾರವು ಕಲ್ಯಾಣ ಯೋಜನೆಗಳಿಗೆ ಹೊಸ ಕಠಿಣ ಷರತ್ತುಗಳನ್ನು ವಿಧಿಸಿದೆ. ಎರಡಕ್ಕಿಂತ ಹೆಚ್ಚು ಮದುವೆಯಾದವರು, ಮಕ್ಕಳಿಗೆ ಲಸಿಕೆ ಹಾಕಿಸದವರು ಮತ್ತು ಧಾರ್ಮಿಕ ಶಿಕ್ಷಣಕ್ಕಾಗಿ ಶಾಲೆ ಬಿಟ್ಟವರು ಇನ್ನು ಮುಂದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಅರ್ಹರಿಗೆ ಮಾತ್ರ ಯೋಜನೆಗಳು ತಲುಪುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಕೋಲ್ಕತಾ: ಎರಡಕ್ಕಿಂತ ಹೆಚ್ಚು ಮದುವೆ, ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಲು ನಿರಾಕರಿಸುವವರು, ನಿರ್ದಿಷ್ಟ ಧಾರ್ಮಿಕ ಶಿಕ್ಷಣ ಸಂಸ್ಥೆಗಳಿಗೆ ಸೇರಲು ಸರ್ಕಾರಿ ಶಾಲೆ ಬಿಟ್ಟವರು ಅಥವಾ ಭಾರತೀಯ ಪ್ರಜೆಗಳಲ್ಲದವರಿಗೆ ಇನ್ನು ಮುಂದೆ ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರಿ ಕಲ್ಯಾಣ ಯೋಜನೆಯ ಸೌಲಭ್ಯಗಳು ಸಿಗುವುದಿಲ್ಲ!
ಸರ್ಕಾರಿ ಕಲ್ಯಾಣ ಯೋಜನೆಗಳ ಕುರಿತು ಪುನರ್ ಪರಿಶೀಲನಾ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಇಂಥ ನಿರ್ಧಾರ ಪ್ರಕಟಿಸಿದ್ದಾರೆ.
ಸರ್ಕಾರಿ ಕಲ್ಯಾಣ ಯೋಜನೆಗಳು ಕೇವಲ ಅರ್ಹರಿಗಷ್ಟೇ ತಲುಪಬೇಕೆಂಬ ಉದ್ದೇಶದಿಂದ ಪಶ್ಚಿಮ ಬಂಗಾಳ ಸರ್ಕಾರ ಇಂಥ ಕಠಿಣ ಷರತ್ತುಗಳನ್ನು ಹಾಕುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ನಿಯಮಗಳೇನು?:
ಮಕ್ಕಳಿಗೆ ಸರ್ಕಾರ ಕಡ್ಡಾಯ ಮಾಡಿದ ಲಸಿಕೆಗಳನ್ನು ಹಾಕಿಸದ ಪೋಷಕರು ಅಥವಾ ಪಾಲಕರು ಕರ್ನಾಟಕದ ಗೃಹ ಲಕ್ಷ್ಮಿ ಮಾದರಿಯ ಅನ್ನಪೂರ್ಣ ಯೋಜನೆಗೆ ಅನರ್ಹರಾಗುತ್ತಾರೆ. ಇದಲ್ಲದೆ ಯೋಜನೆಯ ಅರ್ಜಿಯಲ್ಲಿ 4 ಮಕ್ಕಳವರೆಗೆ ಲಸಿಕೆ ಹಾಕಿಸಿರುವ ಕುರಿತು ವಿವರ ನೀಡಬೇಕು. ಅಲ್ಲದೆ ಮಕ್ಕಳು ಯಾವ ಶಾಲೆಗೆ (ಅಂದರೆ ಸರ್ಕಾರಿ, ಸರ್ಕಾರೇತರ, ಸರ್ಕಾರಿ ಅನುದಾನಿತ ಅಥವಾ ಮದ್ರಸಾ ಶಾಲೆ) ತೆರಳುತ್ತಿದ್ದಾರೆ ಎಂಬ ಕುರಿತು ಸ್ಪಷ್ಟ ಮಾಹಿತಿ ನೀಡುವುದು ಕಡ್ಡಾಯ.
ಇನ್ನು ನಿರ್ದಿಷ್ಟ ಧಾರ್ಮಿಕ ಸಂಸ್ಥೆಗಳಿಗೆ ಸೇರುವ ಉದ್ದೇಶದಿಂದ ಶಾಲೆ ತೊರೆದಿರುವ ವ್ಯಕ್ತಿಗಳು ಹಣಕಾಸು ನೆರವನ್ನು ಕಳೆದುಕೊಳ್ಳಲಿದ್ದಾರೆ, ಇದರ ಜತೆಗೆ ಧರ್ಮದ ಆಧಾರದ ಮೇಲೆ ಜಾರಿಗೆ ತಂದಿರುವ ಎಲ್ಲಾ ಹಣಕಾಸು ಸೌಲಭ್ಯ ಯೋಜನೆಗಳನ್ನು ಇದೇ ವೇಳೆ ಸರ್ಕಾರ ರದ್ದು ಮಾಡಿದೆ.
ಸರ್ಕಾರವು 30 ಲಕ್ಷ ಅನರ್ಹಫಲಾನುಭವಿಗಳ ಪತ್ತೆಗಾಗಿ ಪರಿಶೀಲನಾ ಕಾರ್ಯವನ್ನೂ ಆರಂಭಿಸಿದೆ. ಹೊಸ ಅರ್ಜಿಯಲ್ಲಿ ಆಧಾರ್, ರೇಷನ್ ಕಾರ್ಡ್, ಆಸ್ತಿ ಮತ್ತು ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿದ್ದಾರೆಯೇ, ಇಲ್ಲವೇ ಎಂಬ ಕುರಿತು ಮಾಹಿತಿ ನೀಡಬೇಕಿದೆ.


