2 ರಾಜ್ಯದಲ್ಲಿ ಭಾರಿ ಮಳೆ, ಇನ್ನೆರಡು ರಾಜ್ಯದಲ್ಲಿ ಆಲಿಕಲ್ಲು ಮಳೆ, ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಸ್ನೋಫಾಲ್ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ. ಒಟ್ಟು 8 ರಾಜ್ಯದಲ್ಲಿ ಮುಂದಿನ 2 ರಿಂದ 3 ದಿನ ಮಳೆಯಾಗುವ ಸಾಧ್ಯತೆಯನ್ನು ಐಎಂಡಿ ಸೂಚಿಸಿದೆ.

ನವದೆಹಲಿ(ಫೆ.29) ದೇಶದ ಬಹುತೇಕ ಎಲ್ಲಾ ಕಡೆ ಉರಿ ಬಿಸಿಲಿನ ಅನುಭವಾಗುತ್ತಿದೆ. ಈಗಾಗಲೇ ನೀರಿನ ಅಭಾವ ಸೃಷ್ಟಿಯಾಗಿದೆ. ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಬಹುತೇಕ ರಾಜ್ಯದಲ್ಲಿ ನೀರಿನ ಕೊರತೆ ಕಾಣುತ್ತಿದೆ. ಇದೀಗ ಬಿಸಿಲ ಬೇಗೆಗೆ ತಂಪೆರೆಯಲು ಮಳೆರಾಯ ಆಗಮಿಸುವ ಸಾಧ್ಯತೆ ಇದೆ ಅನ್ನೋ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 2 ರಿಂದ 3 ದಿನ 8 ರಾಜ್ಯಗಳಲ್ಲಿ ಮಳೆ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ. ಹಿಮಾಚಲ ಪ್ರದೇಶ ಹಾಗೂ ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆ ಹಾಗೂ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಸೂಚಿಸಿದೆ.

ಉತ್ತರ ಪ್ರದೇಶ, ಪಂಜಾಬ್, ದೆಹಲಿ, ಮಧ್ಯಪ್ರದೇಶದಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು ರಾಜಸ್ಥಾನ ಹಾಗೂ ಹರ್ಯಾಣದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಸೂಚಿಸಿದೆ. ಪಂಜಾಬ್, ಹರ್ಯಾಣ ಹಾಗೂ ಚಂಡಿಘಡದಲ್ಲಿ ಮಾರ್ಚ್ ಹಾಗೂ ಮಾರ್ಚ್ 2 ರಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಾರ್ಚ್ 2 ರಂದು ಈ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಮಧ್ಯಪ್ರದೇಶದಲ್ಲಿ ತುಂತುರ ಮಳೆಯಾಗಲಿದೆ.

ವಿಜಯಪುರ: ಬಾರದ ಮಳೆ, ಹಾನಿಯಾದ ಲಿಂಬೆ ಬೆಳೆ..!

ಕರ್ನಾಟಕದಲ್ಲಿ ಬೇಸಿಗೆ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಕೆಲವೆಡೆ ಮೋಡ ಕವಿದ ವಾತವರಣವಿದ್ದು, ಮಳೆ ಸಾಧ್ಯತೆಯನ್ನು ಸೂಚಿಸಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಶಿಯಸ್‌ಗಿಂತ ಗರಿಷ್ಠ ಉಷ್ಣಾಂಶ ಏರಿಕೆಯಾಗಿದೆ. 

ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಭಾರೀ ಪ್ರಮಾಣದ ಮಳೆ ಕೊರತೆ ಉಂಟಾಗಿದೆ. ಹೀಗಾಗಿ, ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ರಾಜ್ಯದ ಉಷ್ಣಾಂಶದಲ್ಲಿ ಹೆಚ್ಚಳವಾಗುತ್ತಿದೆ. ಆಕಾಶವು ಶುಭ್ರವಾಗಿರುವುದರಿಂದ ತಾಪ ಹೆಚ್ಚಳವಾಗಿದೆ. ಗರಿಷ್ಠ ಉಷ್ಣಾಂಶದ ಜೊತೆಗೆ, ಕನಿಷ್ಠ ಉಷ್ಣಾಂಶದಲ್ಲಿಯೂ ಭಾರೀ ಏರಿಕೆ ಕಂಡು ಬಂದಿದೆ. 

ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿಗೂ ಬರ: ಕಾರಣವೇನು?

ಕಳೆದ 13 ವರ್ಷಗಳ ಅಂಕಿ-ಅಂಶದ ಪ್ರಕಾರ ಬಳ್ಳಾರಿಯಲ್ಲಿ 2019ರ ಫೆ.25ರಂದು ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ಅದೇ ರೀತಿ 2012ರ ಫೆ.29ರಂದು 39.9 ನಷ್ಟು ಗರಿಷ್ಠ ಉಷ್ಣಾಂಶ ವರದಿಯಾಗಿತ್ತು. ಕಲಬುರಗಿಯಲ್ಲಿ 2017ರ ಫೆ.24 ರಂದು 39.4 ಡಿಗ್ರಿ ಸೆಲ್ಸಿಯಸ್‌ ಹಾಗೂ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು.