ಇರಾನ್-ಅಮೆರಿಕ ನಡುವಿನ ಸಮರ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಚಾಟಿ ಬೀಸಿದ್ದಾರೆ. ‘ಮಧ್ಯಸ್ಥಿಕೆ ವಹಿಸಲು ನಾವೇನೂ ದಲ್ಲಾಳಿ ದೇಶವಲ್ಲ’ ಎಂದು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ನವದೆಹಲಿ: ಇರಾನ್-ಅಮೆರಿಕ ನಡುವಿನ ಸಮರ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಚಾಟಿ ಬೀಸಿದ್ದಾರೆ. ‘ಮಧ್ಯಸ್ಥಿಕೆ ವಹಿಸಲು ನಾವೇನೂ ದಲ್ಲಾಳಿ ದೇಶವಲ್ಲ’ ಎಂದು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
‘ಬುಧವಾರ ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕೆಲವು ಸಂಸದರು ಪಾಕಿಸ್ತಾನದ ಮಧ್ಯಸ್ಥಿಕೆ ವಿಷಯ ಪ್ರಸ್ತಾಪಿಸಿದರು. ಆಗ ವಿದೇಶಾಂಗ ಸಚಿವ ಎಸ್. ಜೈಶಂಕರ್, ‘1981ರಿಂದಲೂ ಈ ಪ್ರದೇಶದಲ್ಲಿ ಇರಾನ್-ಅಮೆರಿಕ ನಡುವೆ ಉದ್ವಿಗ್ನತೆ ಉಂಟಾದಾಗ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸತ್ತಿದೆ. ಆದರೆ ಭಾರತ ಪಾಕಿಸ್ತಾನದಂತೆ ಮಧ್ಯವರ್ತಿಯಾಗಿ ವರ್ತಿಸುವುದಿಲ್ಲ. ಪಾಕಿಸ್ತಾನದಂತೆ ನಾವು ‘ದಲಾಲ್ (ಮಧ್ಯವರ್ತಿ) ರಾಷ್ಟ್ರ ಅಲ್ಲ ಎಂದು ಅಪಹಾಸ್ಯ ಮಾಡಿದರು’ ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಭಾರತಕ್ಕೆ ಇಂಧನ ಸಮಸ್ಯೆ ಇಲ್ಲ: ಸರ್ಕಾರ ಅಭಯ
ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಗ್ಗೆ ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ, ‘ಭಾರತದ ಇಂಧನ ಭದ್ರತೆ ಅಭೇದ್ಯವಾಗಿದೆ. ಅಲ್ಲದೆ ಭಾರತ ಹೆಚ್ಚು ಇಂಧನ ತರಿಸಿಕೊಳ್ಳುತ್ತಿದೆ. ಆತಂಕ ಬೇಡ’ ಎಂದು ಕೇಂದ್ರ ಸರ್ಕಾರವು ಬುಧವಾರ ಭರವಸೆ ನೀಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರವು, ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷದ ರಾಜತಾಂತ್ರಿಕ, ಕಾರ್ಯತಂತ್ರ ಮತ್ತು ಆರ್ಥಿಕ ಪರಿಣಾಮಗಳ ಕುರಿತು ಸರ್ವಪಕ್ಷ ನಾಯಕರಿಗೆ ವಿವರಣೆ ನೀಡಿತು.
ತಕ್ಷಣಕ್ಕೆ ಕಳವಳ ಪಡುವ ಯಾವುದೇ ಕಾರಣವಿಲ್ಲ
‘ಭಾರತದ ಇಂಧನ ಪರಿಸ್ಥಿತಿಯ ಬಗ್ಗೆ ತಕ್ಷಣಕ್ಕೆ ಕಳವಳ ಪಡುವ ಯಾವುದೇ ಕಾರಣವಿಲ್ಲ ಮತ್ತು ಈ ಪ್ರದೇಶದಲ್ಲಿನ ಏರಿಳಿತದ ಹೊರತಾಗಿಯೂ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್ಪಿಜಿಯ ಸಮರ್ಪಕ ಪೂರೈಕೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಹೋರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡೆತಡೆ ಇದ್ದರೂ ಭಾರತವು ಅನ್ಯಮಾರ್ಗಗಳ ಮೂಲಕ ಅತ್ಯಗತ್ಯ ಇಂಧನಗಳನ್ನು ಹೆಚ್ಚುವರಿ ಹಡಗುಗಳ ಮೂಲಕ ತರಿಸುತ್ತಿದೆ’ ಎಂದು ಸಂಬಂಧಿಸಿದ ಸಚಿವರು ಸಭೆಗೆ ವಿವರ ನೀಡಿದರು.
ಆದರೆ ಈ ವಿಷಯವನ್ನು ಕೇವಲ ಸಂಕ್ಷಿಪ್ತ ವಿವರಣೆಗೆ ಸೀಮಿತಗೊಳಿಸದೆ, ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಚರ್ಚಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದವು.
ಸಂಘರ್ಷ ತೀವ್ರಗೊಂಡರೆ, ವಿಶೇಷವಾಗಿ ತೈಲ ದಾಸ್ತಾನು, ಎಲ್ಪಿಜಿ ಲಭ್ಯತೆ ಮತ್ತು ಗೃಹಬಳಕೆಯ ಇಂಧನ ಪೂರೈಕೆಯ ಮೇಲೆ ಏನು ಪರಿಣಾಮ ಏನಾಗಬಹುದು? ಅದಕ್ಕೇನು ಸಿದ್ಧತೆ ಆಗಿದೆ ಎಂದು ವಿಪಕ್ಷದ ನಾಯಕರು ಸ್ಪಷ್ಟತೆ ಕೋರಿದರು.
ಸಭೆಯಲ್ಲಿ, ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ‘ಭಾರತದ ಎಲ್ಪಿಜಿ ಬೇಡಿಕೆಯ ಸುಮಾರು ಶೇ.60ರಷ್ಟನ್ನು ದೇಶೀಯ ಉತ್ಪಾದನೆಯ ಮೂಲಕ ಪೂರೈಸಲಾಗುತ್ತಿದೆ. ಉಳಿದದ್ದನ್ನು ಆಮದು ಮತ್ತು ಪೂರೈಕೆ ಯೋಜನೆಯ ಮೂಲಕ ನಿರ್ವಹಿಸಲಾಗುತ್ತಿದೆ’ ಎಂದರು.
ಮೋದಿ ಕೋವಿಡ್ ಉಲ್ಲೇಖಕ್ಕೆ ಟೀಕೆ:
ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಇಸ್ರೇಲ್ ಭೇಟಿಯನ್ನು ಪ್ರತಿಪಕ್ಷಗಳು ಟೀಕಿಸಿದವು, ಕೆಲವು ನಾಯಕರು, ಕೋವಿಡ್ ಅವಧಿಯ ರೀತಿ ದೇಶ ಸನ್ನದ್ಧವಾಗಬೇಕು ಎಂದು ಮೋದಿ ಸೂಚಿಸುತ್ತಿರುವುದು ತಪ್ಪು. ಇದು ಅನಗತ್ಯ ಸಾರ್ವಜನಿಕ ಭೀತಿಯನ್ನು ಉಂಟುಮಾಡುತ್ತಿದೆ ಎಂದು ಪ್ರಶ್ನಿಸಿದರು.

