ನಟ ಜೊಸೆಫ್ ವಿಜಯ್ ಮುಖ್ಯಮಂತ್ರಿ ಆದ ಬೆನ್ನಲ್ಲೇ ತಲೆನೋವು ಶುರುವಾಗಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಂಪ್ರದಾಯದ ಉಲ್ಲಂಘನೆ ಆರೋಪ ಕೇಳಿಬಂದಿದೆ. ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ತಮಿಳು ಗೀತೆ ಸ್ಥಾನವನ್ನು ಸಿಪಿಐ ಪ್ರಶ್ನಿಸಿದೆ.
ಚೆನ್ನೇ (ಮೇ.10) ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆಯಾಗಿದೆ. ನಟ ಜೊಸೆಫ್ ವಿಜಯ್ ಅವರ ಟಿವಿಕೆ ಡಿಎಂಕೆ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಮುಖ್ಯಮಂತ್ರಿಯಾಗಿ ನಟ ಜೊಸೆಫ್ ವಿಜಯ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿಯಾದ ಬೆನ್ನಲ್ಲೇ ಕೆಲ ಆದೇಶಗಳನ್ನು ಜೊಸೆಫ್ ವಿಜಯ್ ಹೊರಡಿಸಿದ್ದಾರೆ. ಆದರೆ ಸಿಎಂ ಕುರ್ಚಿಯಲ್ಲಿ ಕುಳಿತ ಬೆನ್ನಲ್ಲೇ ವಿವಾದಗಳು, ತಲೆನೋವು ಆರಂಭಗೊಂಡಿದೆ. ಇದೀಗ ಪ್ರಮಾಣವಚನ ಸಮಾರಂಭದಲ್ಲಿ ಸಂಪ್ರದಾಯ ಉಲ್ಲಂಘನೆಯಾಗಿದೆ ಎಂದು ಸಿಪಿಐ ಆರೋಪಿಸಿದೆ. ಈ ಕುರಿತು ಸ್ಪಷ್ಟನೆ ನೀಡುವಂತೆ ತಮಿಳುನಾಡು ನೂತನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಏನಿದು ಮೊದಲ ವಿವಾದ
ನಟ ಜೊಸೆಫ್ ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ತಮಿಳು ಗೀತೆಯನ್ನು ಹಾಡಲಾಗಿದೆ. ಇಲ್ಲೇ ವಿವಾದ ಸೃಷ್ಟಿಯಾದಗಿದೆ. ಸಿಪಿಐ ಕಾರ್ಯದರ್ಶಿ ಎಂ ವೀರಪಾಂಡಿಯನ್ ಈ ಕುರಿತು ಕೆಲ ಪ್ರಮುಖ ಪ್ರಶ್ನೆ ಎತ್ತಿದ್ದಾರೆ. ವಿಜಯ್ ಪ್ರಮಾಣವಚನ ಸಮಾರಂಭದಲ್ಲಿ ವಂದೇ ಮಾತರಂ ಬಳಿಕ ರಾಷ್ಟ್ರಗೀತೆ ಹಾಗೂ ತಮಿಳು ವಂದನೆ ಗೀತೆ ಹಾಡಲಾಗಿದೆ. ಈ ಮೂಲಕ ತಮಿಳು ತಾಯಿ ವಂದನೆ (Thamizhthai Vaazhthu) ಗೀತೆಗೆ ಮೂರನೇ ಸ್ಥಾನ ನೀಡಿದ್ದಾರೆ. ಇದು ಸಂಪ್ರದಾಯದ ಉಲ್ಲಂಘನೆ ಎಂದು ಎಂ ವೀರಪಾಂಡಿಯನ್ ಆರೋಪಿಸಿದ್ದಾರೆ.
ತಮಿಳುನಾಡು ಸರ್ಕಾರ ಆಯೋಜಿಸಿದ ಕಾರ್ಯಕ್ರಮ ಇದು. ಇಲ್ಲಿ ವಂದೇ ಮಾತರಂ ಹಾಡಿಗೆ ಪ್ರಾಧಾನ್ಯತೆ ನೀಡಲಾಗಿದೆ. ಆದರೆ ರಾಜ್ಯದ ತಮಿಳು ಗೀತೆಗೆ ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಇದು ಸ್ಥಾಪಿತ ಸಂಪ್ರದಾಯದಕ್ಕೆ ವಿರುದ್ಧವಾಗಿದೆ. ಇದಕ್ಕೆ ಹೊಣೆ ಯಾರು? ಟಿವಿಕೆ ಪಕ್ಷ ತಮಿಳು ತಾಯಿಗೆ ವಂದನೆ ಗೀತೆಗೆ ಆದ್ಯತೆ ಯಾಕೆ ನೀಡಿಲ್ಲ. ಇದನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದು ಯಾಕೆ ಅನ್ನೋದನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಎಂ ವೀರಪಾಂಡಿಯನ್ ಆಗ್ರಹಿಸಿದ್ದಾರೆ.ಇಂತಹ ತಪ್ಪುಗಳು ಮುಂದುವರೆಯಬಾರದು ಎಂದಿದ್ದಾರೆ.
ತಮಿಳು ಗೀತೆ ಮೊದಲು ಹಾಡಬೇಕು
ಎಂ ವೀರಪಾಂಡಿಯನ್ ಬರೆದ ಪತ್ರದಲ್ಲಿ ಕೆಲ ಸೂಚನೆ ನೀಡಿದ್ದಾರೆ. ಶಾಸಕರ ಪ್ರಮಾಣವಚನಕ್ಕೆ ಕರೆಯದ ಅಧಿವೇಶನ ಹಾಗೂ ಇತರ ಎಲ್ಲಾಸರ್ಕಾರಿ ಕಾರ್ಯಕ್ರಮಗಳಲ್ಲಿ ತಮಿಳು ತಾಯಿಗೆ ವಂದನೆ ಗೀತೆಯನ್ನು ಮೊದಲು ಹಾಡಬೇಕು. ರಾಷ್ಟ್ರಗೀತೆಯನ್ನು ಸಮಾರಂಭದ ಕೊನೆಯಲ್ಲಿ ನುಡಿಸಬೇಕು. ಈ ಸಂಪ್ರದಾಯದಲ್ಲಿ ಉಲ್ಲಂಘನೆಯಾಗದಂತೆ ಸಿಎಂ ಜೊಸೆಫ್ ವಿಜಯ್ ಹಾಗೂ ಹಂಗಾಮಿ ಸ್ಪೀಕರ್ ಎಚ್ಚರವಹಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಜೊಸೆಫ್ ವಿಜಯ್ ಸಿಎಂ ಕುರ್ಚಿ ಮೇಲೆ ಕುಳಿತಿ ಮೊದಲ ಆದೇಶ ಹೊರಡಿಸಿದ ಬೆನ್ನಲ್ಲೇ ವಿವಾದಗಳು, ಆರೋಪಗಳು ಕೇಳಿಬಂದಿದೆ. ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭ ಇದೀಗ ಭಾರಿ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ.


