ತೆಲಂಗಾಣದ ವೇಮುಲವಾಡದಲ್ಲಿ ನಿರ್ಮಾಣ ಹಂತದ ಡಬಲ್ ಬೆಡ್‌ರೂಮ್ ಮನೆಗಳ ಪರಿಶೀಲನೆ ವೇಳೆ, ಕಾಂಗ್ರೆಸ್ ಶಾಸಕ ಆದಿ ಶ್ರೀನಿವಾಸ್ ಮತ್ತು ಅಧಿಕಾರಿಗಳಿದ್ದಾಗಲೇ ನೆಲಮಾಳಿಗೆ ಕುಸಿದುಬಿದ್ದಿದೆ. ಈ ಘಟನೆಗೆ ಹಿಂದಿನ ಬಿಆರ್‌ಎಸ್ ಸರ್ಕಾರ ಕಾರಣ ಎಂದು ಶಾಸಕರು ಆರೋಪಿಸಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ವೇಮುಲವಾಡ: (ನ.28): ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ವೇಮುಲವಾಡದಲ್ಲಿ ನಿರ್ಮಾಣ ಹಂತದಲ್ಲಿರುವ ಡಬಲ್ ಬೆಡ್‌ರೂಮ್ ವಸತಿ ಯೋಜನೆಯ ಮನೆಗಳ ಪರಿಶೀಲನೆ ವೇಳೆ ಮಹಾ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಕಾಂಗ್ರೆಸ್ ಶಾಸಕ ಹಾಗೂ ಸರ್ಕಾರಿ ಸಚೇತಕ ಆದಿ ಶ್ರೀನಿವಾಸ್, ಜಿಲ್ಲಾಧಿಕಾರಿ ಗರಿಮಾ ಅಗರ್ವಾಲ್ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾಗ ದಿಢೀರನೇ ನೆಲಮಾಳಿಗೆ ಕುಸಿದು ಬಿದ್ದಿದೆ. ಅಧಿಕಾರಿಗಳು ಮತ್ತು ಬೆಂಬಲಿಗರು ಕೂಡಲೇ ಅವರನ್ನು ಹಿಡಿದುಕೊಂಡ ಕಾರಣ ಅವರು ಬೀಳುವುದರಿಂದ ಪಾರಾಗಿದ್ದಾರೆ.

ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪ

ಘಟನೆ ನಡೆದ ತಕ್ಷಣ ರಾಜಕೀಯ ಆರೋಪಗಳು ಶುರುವಾಗಿವೆ.ವಿರೋಧ ಪಕ್ಷವಾದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕರು, ಶಾಸಕರ ಭೇಟಿಯ ಸಮಯದಲ್ಲಿ ನೆಲಮಾಳಿಗೆ ಕುಸಿದಿರುವುದು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದು ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಆದಿ ಶ್ರೀನಿವಾಸ್, ಈ ಘಟನೆಯು ಹಿಂದಿನ ಬಿಆರ್‌ಎಸ್ ಸರ್ಕಾರದ ಆಡಳಿತದ ಕಳಪೆ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಕಳಪೆ ಕಾಮಗಾರಿಯೇ ಕುಸಿತಕ್ಕೆ ಕಾರಣ

ಶಾಸಕರ ಪ್ರಕಾರ, ಈ ಡಬಲ್ ಬೆಡ್‌ರೂಮ್ ಮನೆಗಳ ನಿರ್ಮಾಣವನ್ನು ಬಿಆರ್‌ಎಸ್ ಆಡಳಿತಾವಧಿಯಲ್ಲಿಯೇ ಅನುಮೋದಿಸಲಾಗಿತ್ತು ಮತ್ತು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ಆತುರದಲ್ಲಿ ನಿರ್ಮಿಸಲಾಗಿದ್ದರಿಂದ ನೆಲಮಾಳಿಗೆ ಕುಸಿದಿದೆ. ಕಮಿಷನ್ ಗಳಿಸುವ ಸಲುವಾಗಿ ಕಳಪೆ ಕಾಮಗಾರಿ ನಡೆಸಿರುವುದೇ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

Scroll to load tweet…

ಬಿಆರ್‌ಎಸ್ ಅಧಿಕಾರದಲ್ಲಿದ್ದಾಗಲೂ ನಾವು ಭ್ರಷ್ಟಾಚಾರ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗಳ ಬಗ್ಗೆ ಧ್ವನಿ ಎತ್ತಿದ್ದೆವು. ಕಾಂಗ್ರೆಸ್ ಸರ್ಕಾರ ಬಂದ ನಂತರ, ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲು ನಿರ್ಧರಿಸಿದೆವು. ಪರಿಶೀಲನೆ ನಡೆಸುತ್ತಿದ್ದಾಗ ನೆಲಮಾಳಿಗೆ ಕುಸಿಯಿತು. ನಾವು ಹೇಳುತ್ತಿದ್ದ ವಿಷಯಕ್ಕೆ ಇದು ಸ್ಪಷ್ಟ ಪುರಾವೆಯಾಗಿದೆ ಎಂದು ಆದಿ ಶ್ರೀನಿವಾಸ್ ಆರೋಪಿಸಿದ್ದಾರೆ.

ಕಾಳೇಶ್ವರಂ ಯೋಜನೆಯ ಭಾಗವಾಗಿ ನಿರ್ಮಿಸಲಾದ ಬ್ಯಾರೇಜ್‌ಗಳು ಸಹ ಇದೇ ರೀತಿ ಕುಸಿದಿದ್ದವು. ಸರ್ಕಾರ ಮನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಭರವಸೆಯನ್ನು ನೀಡಿದೆ.