ಪಶ್ಚಿಮ ಬಂಗಾಳದಲ್ಲಿ ತೆರವಾದ ಮೂರು ರಾಜ್ಯಸಭಾ ಸ್ಥಾನಗಳಿಗೆ ಜುಲೈ 24 ರಂದು ಉಪಚುನಾವಣೆ ನಡೆಯಲಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿರುವ ಬಿಜೆಪಿ, ತನ್ನ ಶಾಸಕರ ಬಲದಿಂದ ಮೂರೂ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಟಿಎಂಸಿ ಗೆಲುವು ಸವಾಲು!

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕಾವು ಇನ್ನೂ ಇಳಿದಿಲ್ಲ. ಹಲವು ವಿವಾದ, ಹಿಂಸಾಚಾರ ಗದ್ದಲಗಳ ನಡುವೆ ಸುವೇಂದು ಅಧಿಕಾರಿ ನೇತೃತ್ವದ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರ ಬಂತು. ಬಿಜೆಪಿ ಗೆಲುವಿನ ಸಂಭ್ರಮ, ಟಿಎಂಸಿ ಸೋಲಿನ ನೋವು ಹತಾಶೆ ಮುಖದ ಮೇಲಿನ್ನು ಮರೆಯಾಗಿಲ್ಲ. ಇದೀಗ ಮತ್ತೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಂದಿದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜುಲೈ 24 ರಂದು ಪಶ್ಚಿಮ ಬಂಗಾಳ(West bengal)ದ ಮೂರು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ರಾಜ್ಯ ರಾಜಕಾರಣ ಮತ್ತೆ ಕಾವೇರಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಮತದಾನ, ಜನ ಬೆಂಬಲ ಗಮನಿಸಿದರೆ, ರಾಜಕೀಯ ಸಮೀಕರಣಗಳು ಬದಲಾಗದೆ ಇದ್ದರೆ, ಬಿಜೆಪಿ ಪಕ್ಷವೂ ಮೂರೂ ಸ್ಥಾನಗಳನ್ನು ಗೆಲ್ಲುವ ಫೆವರಿಟ್ ಆಗಿದೆ.

ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ಘೋಷಣೆ

ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರ ರಾಜೀನಾಮೆಯಿಂದ ತೆರವಾದ ಮೂರು ಸ್ಥಾನಗಳಿಗೆ ಭಾರತೀಯ ಚುನಾವಣಾ ಆಯೋಗವು ಪ್ರತ್ಯೇಕ ಉಪಚುನಾವಣೆಗಳನ್ನು ಘೋಷಿಸಿದೆ. ಈ ಮೂರು ಸ್ಥಾನಗಳಿಗೆ ಚುನಾವಣೆಗಳು ಎಂದಿನಂತೆ ನಡೆಯುವುದಿಲ್ಲ. ಆಯೋಗದ ಪ್ರಕಾರ, ಮೂರು ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆಗಳೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ ಪ್ರತಿ ಸ್ಥಾನಕ್ಕೂ ಪ್ರತ್ಯೇಕ ಚುನಾವಣೆ ನಡೆಯಲಿದೆ. ನಾಮನಿರ್ದೇಶನಗಳಿಗೆ ಕೊನೆಯ ದಿನಾಂಕ ಜುಲೈ 14 ಆಗಿದ್ದು, ಮತದಾನ ಜುಲೈ 24 ರಂದು ನಡೆಯಲಿದೆ.

ಪ್ರತ್ಯೇಕ ಚುನಾವಣೆ ಏಕೆ?

ಖಾಲಿ ಇರುವ ಪ್ರತಿಯೊಂದು ರಾಜ್ಯಸಭಾ ಸ್ಥಾನಕ್ಕೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿ, ಪ್ರತ್ಯೇಕ ಮತದಾನ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈ ವ್ಯವಸ್ಥೆಯು 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 147 ರಿಂದ 151 ರವರೆಗೆ ಇದ್ದು, ದೆಹಲಿ ಹೈಕೋರ್ಟ್ ಇದನ್ನು ಎತ್ತಿಹಿಡಿದಿದೆ. ಪರಿಣಾಮವಾಗಿ, ಪ್ರತಿ ಸ್ಥಾನಕ್ಕೆ ಶಾಸಕರ ಮತಗಳನ್ನು ಪ್ರತ್ಯೇಕವಾಗಿ ಎಣಿಸಲಾಗುತ್ತದೆ. ಒಂದು ಪಕ್ಷವು ಸಾಕಷ್ಟು ಶಾಸಕರನ್ನು ಹೊಂದಿದ್ದರೆ, ಅದು ಪ್ರತಿ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು.

ಬಿಜೆಪಿ ಗೆಲ್ಲುವ ಕುದುರೆ

ಪ್ರಸ್ತುತ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಒಟ್ಟು 294 ಸದಸ್ಯರು ಇದ್ದಾರೆ. ಆ ಪೈಕಿ ಬಿಜೆಪಿ 208 ಶಾಸಕರನ್ನು ಹೊಂದಿದ್ದರೆ, ಎಲ್ಲಾ ಪಕ್ಷದ ಶಾಸಕರು ತಮ್ಮ ಅಭ್ಯರ್ಥಿಗಳಿಗೆ ಮತ ಹಾಕಿದರೆ, ಮೂವರು ಅಭ್ಯರ್ಥಿಗಳ ನಡುವೆ ಮತಗಳನ್ನು ಹಂಚಿಕೊಂಡರೆ ಪ್ರತಿ ಅಭ್ಯರ್ಥಿಯು ಸರಿಸುಮಾರು 69-70 ಮತಗಳನ್ನು ಪಡೆಯಬಹುದು. ಮೂರು ಸ್ಥಾನಗಳಿಗೆ ಚುನಾವಣೆಗಳು ಪ್ರತ್ಯೇಕವಾಗಿ ನಡೆಯುವುದರಿಂದ, ಈ ಸಂಖ್ಯೆಯು ಪ್ರತಿ ಸ್ಥಾನವನ್ನು ಗೆಲ್ಲಲು ಸಾಕಾಗುತ್ತದೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಪ್ರಸ್ತುತ ವಿಧಾನಸಭೆಯ ಈ ಲೆಕ್ಕಾಚಾರ ಬಿಜೆಪಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

ಟಿಎಂಸಿಗೆ ಸವಾಲು ಏಕೆ?

ತೃಣಮೂಲ ಕಾಂಗ್ರೆಸ್ ಎದುರಿಸುತ್ತಿರುವ ಅತಿದೊಡ್ಡ ಸವಾಲು ಎಂದರೆ ಅದರ ಆಂತರಿಕ ಬಿಕ್ಕಟ್ಟು. ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಟಿಎಂಸಿ ಪಕ್ಷದೊಳಗೆ ಆಂತರಿಕ ಸಂಘರ್ಷ ತಾರಕಕ್ಕೇರಿದೆ. ಅದರ ಪರಿಣಾಮವಾಗಿ ಪಕ್ಷದ ಮೂವರು ರಾಜ್ಯಸಭಾ ಸಂಸದರಾದ ಸುಖೇಂದು ಶೇಖರ್ ರಾಯ್, ಸುಷ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಕಳೆದ ತಿಂಗಳು ತಮ್ಮ ರಾಜ್ಯಸಭಾ ಸದಸ್ಯತ್ವ ಮತ್ತು ಟಿಎಂಸಿ ಎರಡಕ್ಕೂ ರಾಜೀನಾಮೆ ನೀಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರದ ಬಳಿಕ ನಂತರ ಮೂವರು ನಾಯಕರು ಪಕ್ಷದ ನಾಯಕತ್ವವನ್ನು ಪ್ರಶ್ನಿಸಿದ್ದರು.

ಟಿಎಂಸಿ ಪಕ್ಷದೊಳಗೆ ಹೆಚ್ಚಿದ ಬಂಡಾಯ

ಟಿಎಂಸಿಯೊಳಗೆ ಬಂಡಾಯ ಬಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ವರದಿಯಾಗಿದೆ. ಆರಂಭದಲ್ಲಿ, 80 ಶಾಸಕರಲ್ಲಿ 58 ಶಾಸಕರು ಬಂಡಾಯ ಎದ್ದಿದ್ದರು. ಈಗ ಈ ಬಣವು ಸರಿಸುಮಾರು 65 ಶಾಸಕರ ಬೆಂಬಲವನ್ನು ಹೊಂದಿದೆ ಎಂದು ಹೇಳಿಕೊಳ್ಳುತ್ತದೆ. ಮತದಾನದವರೆಗೂ ಇದೇ ಪರಿಸ್ಥಿತಿ ಮುಂದುವರಿದರೆ, ಟಿಎಂಸಿ ಗೆಲ್ಲುವುದು ಕಷ್ಟಕರವಾಗಬಹುದು.

ಖಾಲಿ ಇರುವ ಸ್ಥಾನಗಳ ಅವಧಿ

  • ಸುಖೇಂದು ಶೇಖರ್ ರಾಯ್ - ಆಗಸ್ಟ್ 18, 2029 ರವರೆಗೆ
  • ಪ್ರಕಾಶ್ ಚಿಕ್ ಬರೈಕ್ - ಆಗಸ್ಟ್ 18, 2029 ರವರೆಗೆ
  • ಸುಶ್ಮಿತಾ ದೇವ್ - ಏಪ್ರಿಲ್ 2, 2030 ರವರೆಗೆ

ಪ್ರಸ್ತುತ, ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯರ ಸಂಖ್ಯೆ 9 ಕ್ಕೆ ಇಳಿದಿದೆ.

ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದರೆ, ಅದು ತನ್ನ ರಾಜ್ಯಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೆ, ಪಶ್ಚಿಮ ಬಂಗಾಳದ ಬದಲಾಗುತ್ತಿರುವ ರಾಜಕಾರಣವನ್ನು ಸೂಚಿಸುತ್ತದೆ. ಟಿಎಂಸಿಗೆ, ಈ ಉಪಚುನಾವಣೆ ಮಾಡು ಇಲ್ಲವೆ ಮಡಿ ಎಂಬಂತ ಪರಿಸ್ಥಿತಿ ಸೃಷ್ಟಿಸಿದೆ. ಒಂದು ಈ ಚುನಾವಣೆಯಲ್ಲಿ ಟಿಎಂಸಿ ಎಲ್ಲ ಸ್ಥಾನ ಕಳೆದುಕೊಂಡರೆ ಅಲ್ಲಿಗೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದ ಕತೆ ಮುಗಿದಂತೆ. ಆದ್ಯಾಗೂ ಅಂತಿಮ ಫಲಿತಾಂಶ ಅಭ್ಯರ್ಥಿಗಳ ಘೋಷಣೆ, ನಾಮನಿರ್ದೇಶನ, ಮತದಾನದ ದಿನದಂದು ಶಾಸಕರ ನಿಜವಾದ ಸಂಖ್ಯೆ ಮತ್ತು ಪಕ್ಷದ ಬಲಾಬಲ ಅವಲಂಬಿಸಿದೆ. ಈಗಲೇ ಫಲಿತಾಂಶ ಹೀಗೆ ಬರುತ್ತೆ ಎಂದು ಹೇಳಲಾಗುವುದಿಲ್ಲ.. ಪ್ರಸ್ತುತ ವಿಧಾನಸಭೆ ಚುನಾವಣೆಯ ಲೆಕ್ಕಾಚಾರ ಬದಲಾಗದಿದ್ದರೆ ಬಿಜೆಪಿ ಮೂರು ರಾಜ್ಯಸಭಾ ಸ್ಥಾನಗಳಲ್ಲಿಯೂ ಮೇಲುಗೈ ಸಾಧಿಸುವುದು ಖಚಿತ!