ಸಂಜು ಸ್ಯಾಮ್ಸನ್ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ. ಕೇರಳ ಕ್ರಿಕೆಟ್ ಲೀಗ್ನಿಂದ ಹಿಂದೆ ಸರಿದಿದ್ದು, ಇದಕ್ಕೆಲ್ಲ ಟೀಂ ಇಂಡಿಯಾದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳೇ ಕಾರಣ ಎನ್ನಲಾಗುತ್ತಿದೆ. ಈ ಕುರಿತ ಸುದ್ದಿ ಇಲ್ಲಿದೆ.
ತಿರುವನಂತಪುರಂ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಮುಂಬರುವ ಕೇರಳ ಕ್ರಿಕೆಟ್ ಲೀಗ್ನ (KCL 2026) ಮೂರನೇ ಆವೃತ್ತಿಯಿಂದ ಸಂಜು ಸ್ಯಾಮ್ಸನ್ ಹಿಂದೆ ಸರಿದಿದ್ದಾರೆ.
ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿದ್ದ ಸಂಜುಗೆ ಕಳೆದ ಕೆಲವು ದಿನಗಳು ಏರಿಳಿತಗಳಿಂದ ಕೂಡಿದ್ದವು. ವಿಶ್ವಕಪ್ ತಂಡದಲ್ಲಿದ್ದರೂ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗದಿದ್ದುದು ಮತ್ತು ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗದ ಬೆನ್ನಲ್ಲೇ ಈಗ ಈ ಸುದ್ದಿ ಹೊರಬಿದ್ದಿದೆ.
ಹರಾಜು ಪ್ರಕ್ರಿಯೆಯಿಂದ ಸಂಜು ದೂರ
ವರದಿಗಳ ಪ್ರಕಾರ ತಿರುವನಂತಪುರಂನಲ್ಲಿ ನಡೆಯಲಿರುವ ಕೇರಳ ಕ್ರಿಕೆಟ್ ಲೀಗ್ ಆಕ್ಷನ್ನಲ್ಲಿ (Auction) ಸಂಜು ಸ್ಯಾಮ್ಸನ್ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ. ಈ ಬಾರಿಯ ಹರಾಜಿನಲ್ಲಿ ಒಟ್ಟು 156 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಆದರೆ ಅದರಲ್ಲಿ ಕೇರಳದ ಅತಿ ದೊಡ್ಡ ಕ್ರಿಕೆಟ್ ಐಕಾನ್ ಸಂಜು ಹೆಸರು ಇಲ್ಲದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇದಕ್ಕೂ ಮೊದಲು 'ಕೊಚ್ಚಿ ಬ್ಲೂ ಟೈಗರ್ಸ್' ತಂಡ ಸಂಜು ಅವರನ್ನು ಬಿಡುಗಡೆ (Release) ಮಾಡಿತ್ತು. ಅವರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಂಜು ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಲೀಗ್ಗೆ ದೊಡ್ಡ ಹೊಡೆತ
ಸಂಜು ಸ್ಯಾಮ್ಸನ್ ಕೇರಳ ಕ್ರಿಕೆಟ್ ಅಸೋಸಿಯೇಷನ್ಗೆ ತಮ್ಮ ನಿರ್ಧಾರವನ್ನು ಈಗಾಗಲೇ ತಿಳಿಸಿದ್ದಾರೆ. ಕೇರಳದಲ್ಲಿ ಸಂಜು ಅವರಿಗೆ ಇರುವ ಜನಪ್ರಿಯತೆ ಅಪಾರ. ಕೇವಲ ಕೇರಳ ಮಾತ್ರವಲ್ಲದೆ ವಿದೇಶಗಳಲ್ಲೂ ಅವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಲೀಗ್ನ ಪ್ರಮುಖ ಆಕರ್ಷಣೆಯೇ ಆಗಿದ್ದ ಸಂಜು ಅನುಪಸ್ಥಿತಿ ಕೆಸಿಎಲ್ (KCL) ಟೂರ್ನಮೆಂಟ್ಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ಸೀಸನ್ನ ಅತ್ಯಂತ ದುಬಾರಿ ಆಟಗಾರ
ಕಳೆದ ಸೀಸನ್ನಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ತಂಡ ಸಂಜು ಸ್ಯಾಮ್ಸನ್ ಅವರನ್ನು 26.80 ಲಕ್ಷ ರೂಪಾಯಿಗೆ ಖರೀದಿಸಿತ್ತು. ಆ ಮೂಲಕ ಅವರು ಲೀಗ್ನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಟೂರ್ನಿಯ ಮೂರನೇ ಆವೃತ್ತಿಯು ಆಗಸ್ಟ್ 20 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದ್ದು, ಸಂಜು ಟೆಸ್ಟ್ ತಂಡದ ಭಾಗವಾಗಿಲ್ಲದಿದ್ದರೂ ಲೀಗ್ನಿಂದ ಏಕೆ ದೂರ ಉಳಿದಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ವಿಶ್ವಕಪ್ ತಂಡದ ಭಾಗವಾಗಿದ್ದರೂ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳ ನಂತರ ಸಂಜು ಅವರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಈಗ ರಾಜ್ಯ ಮಟ್ಟದ ಲೀಗ್ನಿಂದಲೂ ಅವರು ದೂರ ಉಳಿದಿರುವುದು ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.


