ರೀಲ್ಸ್ ಮಾಡ್ತಿದ್ದವರ ಹುಚ್ಚಾಟಕ್ಕೆ ಬಲಿಯಾಯ್ತು ಅಮಾಯಕ ಜೀವ: ಫ್ಲೈಒವರ್ ಮೇಲೆ ಆಗಿದ್ದೇನು?
ಜೋಡಿಯ ರೀಲ್ಸ್ ಹುಚ್ಚಿಗೆ ಅಮಾಯಕ ಜೀವವೊಂದು ಬಲಿಯಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಲಿಸುತ್ತಿದ್ದ ಬೈಕ್ ಮೇಲೆ ರೀಲ್ಸ್ ಮಾಡ್ತಿದ್ದಾಗ ಈ ಅವಘಡ ಸಂಭವಿಸಿದೆ.
ವಾರಾಣಾಸಿ: ಜೋಡಿಯ ರೀಲ್ಸ್ ಹುಚ್ಚಿಗೆ ಅಮಾಯಕ ಜೀವವೊಂದು ಬಲಿಯಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಲಿಸುತ್ತಿದ್ದ ಬೈಕ್ ಮೇಲೆ ರೀಲ್ಸ್ ಮಾಡ್ತಿದ್ದಾಗ ಈ ಅವಘಡ ಸಂಭವಿಸಿದೆ. ಬೈಕ್ ಮೇಲೆ ಜೋಡಿಯ ಕಂಟ್ರೋಲ್ ತಪ್ಪಿ ಬೈಕ್ ಫ್ಲೈಒವರ್ ಕೆಳಗೆ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದು, ಈ ದುರಂತದಲ್ಲಿ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ನಂಬರ್ ಪ್ಲೇಟ್ ಇಲ್ಲದ ಬೈಕ್ ಸ್ಥಳದಲ್ಲೇ ಬಿಟ್ಟು ಈ ರೀಲ್ಸ್ ಸ್ಟಂಟ್ ಮಾಸ್ಟರ್ಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಉತ್ತರಪ್ರದೇಶದ (Uttar Pradesh) ವಾರಣಾಸಿಯ (Varanasi) ಗಂಜಾರಿ ಪ್ರದೇಶದ ಶಿವಪುರ ಫ್ಲೈಒವರ್ (Shivapur Flyover) ಬಳಿ ಈ ದುರಂತ ಸಂಭವಿಸಿದೆ. ಜೋಡಿಯೊಂದು ಫ್ಲೈಓವರ್ ಮೇಲೆ ನ್ಯೂ ಬ್ರಾಂಡ್ ಬೈಕ್ ಮೇಲೆ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಆದರೆ ಈ ವೇಳೆ ಬೈಕ್ ಕಂಟ್ರೋಲ್ ತಪ್ಪಿದ್ದು, ಫ್ಲೈಒವರ್ನಿಂದ ಕೆಳಗೆ ಮಗುಚಿದೆ. ಇದೇ ವೇಳೆ ಫ್ಲೈಒವರ್ ಕೆಳಗಿನ ಅಂಡರ್ಪಾಸ್ನಲ್ಲಿ ಕಾರೊಂದು ಬರುತ್ತಿದ್ದು, ಕಾರಿನ ಮೇಲೆ ಈ ಬೈಕ್ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರಲ್ಲಿ ಓರ್ವರು ಪ್ರಾಣ ಬಿಟ್ಟಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಆದರೆ ಈ ಕಿತಾಪತಿ ಮಾಡಿದ ಜೋಡಿ ಯಾವುದೇ ಹಾನಿ ಇಲ್ಲದೇ ಪಾರಾಗಿದ್ದು, ಸ್ಥಳದಲ್ಲೇ ನಂಬರ್ ಪ್ಲೇಟ್ ಇಲ್ಲದ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಊಹಿಸಿದ ಪ್ರಕಾರ, ಬೈಕ್ ವಿಭಾಜಕಕ್ಕೆ ಡಿಕ್ಕಿ ಹೊಡೆದು ಮೇಲೆ ಹಾರಿದ್ದು, ನಂತರ ಕೆಳಗೆ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯನ್ನು ಸರ್ವೇಶ್ ಶಂಕರ್ ಎಂದು ಗುರುತಿಸಲಾಗಿದ್ದು, ಅವರು ರೈಲ್ವೆಯ ಇಂಜಿನಿಯರ್ (Railway engineer) ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಅವರ ಸ್ನೇಹಿತ ಆದಿತ್ಯ ವರ್ಮಾ ಅವರಿಗೆ ಗಾಯಗಳಾಗಿದ್ದು, ಅವರಿಗೆ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಲೇಜು ಆವರಣದಲ್ಲಿ ಪ್ರಾಂಶುಪಾಲರ ಹೆಂಡತಿಯ ರೀಲ್ಸ್ ಹುಚ್ಚು: ಸಾಮಾಜಿಕ ಜಾಲತಾಣದಲ್ಲಿ ತರಾಟೆ
ಘಟನೆಯ ಬಳಿಕ ಪರಾರಿಯಾಗಿರುವ ಸೋಶಿಯಲ್ ಮೀಡಿಯಾ ಸ್ಟಂಟ್ಮನ್ಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಿವಪುರ ಠಾಣೆ ಇನ್ಸ್ಪೆಕ್ಟರ್ ಬಾಜಿನಾಥ್ ಹೇಳುವ ಪ್ರಕಾರ, ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯಂತೆ ಈ ಜೋಡಿ ಸೋಶಿಯಲ್ ಮೀಡಿಯಾಗಾಗಿ ರೀಲ್ಸ್ ಮಾಡುತ್ತಿದ್ದರು, ಹುಡುಗ ಬೈಕ್ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಇಬ್ಬರೂ ಫ್ಲೈಓವರ್ ಮೇಲೆ ಬಿದ್ದರೆ ಅವರ ಬೈಕ್ ಕಳೆಗೆ ಬಿತ್ತು ಎಂದು ತಿಳಿದು ಬಂದಿದೆ.
ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡುವವರೇ ಇಲ್ನೋಡಿ: ನದಿಯಲ್ಲಿ ಮುಳುಗಿ ಬಲಿಯಾದ 3 ಬಾಲಕರು
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ದುರಂತದಲ್ಲಿ ಮೃತಪಟ್ಟ ಸರ್ವೇಶ್ (Sarvesh) ಅವರು ಚೋಲಪುರದ ಗಂಜಾರಿ ನಿವಾಸಿಯಾಗಿದ್ದು, ಪ್ರಯಾಗ್ರಾಜ್ನ ಪೂರ್ವ ಕೇಂದ್ರ ರೈಲ್ವೆಯ ಇಲೆಕ್ಟ್ರಿಸಿಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ರಜೆಯಲ್ಲಿ ಊರಿಗೆ ಬಂದಿದ್ದ ಅವರು ಗೆಳೆಯನೊಂದಿಗೆ ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿದೆ.