ಬಹುತೇಕ ಪೋಷಕರು ಸಾಲ ಸೋಲ ಮಾಡಿಯಾದರೂ ಸರಿ ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಸಿಗುವ ಶಿಕ್ಷಣ ಚೆನ್ನಾಗಿರಬೇಕು ಎಂಬ ಆಸೆಯಿಂದ ಮಕ್ಕಳನ್ನು ಲಕ್ಷ ಲಕ್ಷ ರೂಪಾಯಿ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಇಲ್ಲೊಬ್ಬರು ಐಎಎಸ್ ಅಧಿಕಾರಿ ಮಗಳನ್ನು ಅಂಗನವಾಡಿಗೆ ಸೇರಿಸಿ ಗಮನ ಸೆಳೆದಿದ್ದಾರೆ.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಬಾಲ್ಯದ ಶಿಕ್ಷಣವು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಇಂದು ಬಹುತೇಕ ಪೋಷಕರು ಸಾಲ ಸೋಲ ಮಾಡಿಯಾದರೂ ಸರಿ ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಸಿಗುವ ಶಿಕ್ಷಣ ಚೆನ್ನಾಗಿರಬೇಕು ಎಂಬ ಆಸೆಯಿಂದ ಮಕ್ಕಳನ್ನು ಲಕ್ಷ ಲಕ್ಷ ರೂಪಾಯಿ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಯೂ ಈ ರೀತಿ ಆಗುವುದಕ್ಕೆ ಮತ್ತೊಂದು ಕಾರಣ. ಆದರೆ ಇಲ್ಲೊಂದು ಕಡೆ ಸ್ವತಃ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಮೂರು ವರ್ಷದ ಮಗಳನ್ನು ಜನ ಸಾಮಾನ್ಯರಂತೆ ಸರ್ಕಾರಿ ಅಂಗನವಾಡಿಗೆ ಸೇರಿಸಿದ್ದು, ಇವರ ಈ ಕ್ರಮ ಈಗ ವ್ಯಾಪಕ ಚರ್ಚೆಯ ಜೊತೆಗೆ ಶ್ಲಾಘನೆಗೆ ಪಾತ್ರವಾಗಿದೆ.
ಮಗಳನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿ
ಹೌದು ಉತ್ತರ ಪ್ರದೇಶದ ಐಎಎಸ್ಅಧಿಕಾರಿಯಾಗಿರುವ ಪುಲ್ಕಿತ್ ಗಾರ್ಗ್ ಎಂಬುವವರೇ ಈಗ ತಮ್ಮ ಪುಟ್ಟ ಮಗಳನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿ ಸುದ್ದಿಯಾದವರು. ಚಿತ್ರಕೂಟದ ಜಿಲ್ಲಾಧಿಕಾರಿಯಾಗಿರುವ ಅವರು ಮಕ್ಕಳು ಕಲಿಕೆ, ಪೋಷಣೆ, ಸುರಕ್ಷತೆ ಮತ್ತು ಮೌಲ್ಯಗಳನ್ನು ಇಲ್ಲಿನ ಶಿಕ್ಷಣದಿಂದ ಪಡೆಯುತ್ತಾರೆ ಎಂದು ಹೇಳುವ ಮೂಲಕ ಜನರು ಸಾರ್ವಜನಿಕ ಶಾಲೆಗಳನ್ನು ನಂಬಬೇಕೆಂದು ಮನವಿ ಮಾಡಿದ್ದಾರೆ. ಕಾರ್ವಿಯ ನಯಾ ಬಜಾರ್ ಪ್ರದೇಶದಲ್ಲಿರುವ ಸರ್ಕಾರಿ ಸಂಯೋಜಿತ ಶಾಲೆಗೆ ಹೊಂದಿಕೊಂಡ ಅಂಗನವಾಡಿಯಲ್ಲಿ ಪುಲ್ಕಿತ್ ಗಾರ್ಗ್ ಅವರು ತಮ್ಮ ಮಗಳು ಸಿಯಾಳನ್ನು ಆಟದ ಗುಂಪಿಗೆ ಸೇರಿಸಿದರು. ವರದಿಗಳ ಪ್ರಕಾರ, ಅವರು ಸುಮಾರು ನಾಲ್ಕು ದಿನಗಳ ಹಿಂದೆ ಶಾಲೆಗೆ ಭೇಟಿ ನೀಡಿ ಅಂಗನವಾಡಿ ಪ್ರವೇಶಕ್ಕೆ ಬೇಕಾದ ಪ್ರವೇಶದ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ್ದರು ಎಂದು ವರದಿಯಾಗಿದೆ.
ನಾನು ಸರ್ಕಾರಿ ಶಾಲೆಯಲ್ಲಿ ಮಗಳನ್ನು ಓದಿಸಬಹುದಾದರೆ ನೀವೇಕೆ ಓದಿಸಬಾರದು?
ಈ ಬಗ್ಗೆ ಹಿಂದಿ ಮಾಧ್ಯಮವಾದ ದೈನಿಕ್ ಭಾಸ್ಕರ್ ಜೊತೆ ಮಾತನಾಡಿದ ಪುಲ್ಕಿತ್ ಗಾರ್ಗ್, ಸರ್ಕಾರಿ ಶಿಕ್ಷಣದ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ. ಪರಿಸ್ಥಿತಿ ಈಗ ಮೊದಲಿನಂತೆ ಇಲ್ಲ. ಶಿಕ್ಷಣದ ಗುಣಮಟ್ಟ ನಿರಂತರವಾಗಿ ಸುಧಾರಿಸಿದೆ ಮತ್ತು ಸಂಪನ್ಮೂಲಗಳ ಕೊರತೆಯಿಲ್ಲ. ಒಬ್ಬ ಐಎಎಸ್ ಅಧಿಕಾರಿ ತನ್ನ ಮಗುವಿಗೆ ಸರ್ಕಾರಿ ಸಂಸ್ಥೆಯಲ್ಲಿ ಶಿಕ್ಷಣ ನೀಡಲು ಸಾಧ್ಯವಾದರೆ ಸಾಮಾನ್ಯ ಪೋಷಕರು ಏಕೆ ಹಿಂಜರಿಯಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ವಿಶೇಷವಾಗಿ ಮೂಲ ಸೌಕರ್ಯ, ಕಲಿಕಾ ಸಾಮಗ್ರಿಗಳು ಮತ್ತು ಒಟ್ಟಾರೆ ಪರಿಸರದ ಸ್ಥಿತಿ ಬದಲಾಗಿವೆ. ಮಗುವಿನ ಆರಂಭಿಕ ವರ್ಷಗಳಲ್ಲಿ, ಪೋಷಣೆ, ಆರೋಗ್ಯ, ಮೌಲ್ಯಗಳು ಮತ್ತು ಸುರಕ್ಷಿತ ವಾತಾವರಣವು ಬಹಳ ಮುಖ್ಯ. ಅಂಗನವಾಡಿ ಕೇಂದ್ರಗಳು ಮಕ್ಕಳು ಕಲಿಯಲು ಮತ್ತು ಬೆಳೆಯಲು ಸಹಾಯ ಮಾಡುವುದರ ಜೊತೆಗೆ ಈ ಅಗತ್ಯ ವಸ್ತುಗಳನ್ನು ಒದಗಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಪಂಚಾಯತ್ ಚುನಾವಣೆಗೆ ನಿಲ್ಲುವುದಕ್ಕಾಗಿ ಮಗಳನ್ನೇ ಕೊಂದ ತಂದೆ
ಪೋಷಕರು, ಗ್ರಾಮಸ್ಥರು ಮತ್ತು ಅಧಿಕಾರಿಗಳು ಸಾಮಾಜಿಕ ಪಕ್ಷಪಾತಗಳನ್ನು ಮೀರಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕೆಂದು ಅವರು ಒತ್ತಾಯಿಸಿದರು. ಇಲ್ಲಿ ಮಕ್ಕಳು ಮೌಲ್ಯಗಳು, ಸುರಕ್ಷತೆ ಮತ್ತು ಕಾಳಜಿಯೊಂದಿಗೆ ಶಿಕ್ಷಣವನ್ನು ಪಡೆಯುತ್ತಾರೆ. ಜನರು ಅದರಲ್ಲಿ ನಂಬಿಕೆ ಇಟ್ಟಾಗ ಮಾತ್ರ ವ್ಯವಸ್ಥೆಯು ಬಲಗೊಳ್ಳುತ್ತದೆ. ಅಂಗನವಾಡಿಗೆ ಸೇರಿದಾಗಿನಿಂದ, ಸಿಯಾ ತರಗತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾಳೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊದಲ್ಲಿ ಐಎಎಸ್ ಅಧಿಕಾರಿ ಪುತ್ರಿ ಅಂಗನವಾಡಿಯಲ್ಲಿ ಎಲ್ಲಾ ಮಕ್ಕಳೊಂದಿಗೆ ಬೆರೆತು ಚಟುವಟಿಕೆಯಲ್ಲಿ ಭಾಗಿಯಾಗಿರುವುದನ್ನು ಗಮನಿಸಬಹುದಾಗಿದೆ.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ತಮ್ಮ ಎರಡು ಕೃತಕ ಕಾಲು ತೆಗೆದು ತೋರಿಸಿ ಕಮ್ಯುನಿಷ್ಟರ ಕ್ರೌರ್ಯ ಬಿಚ್ಚಿಟ್ಟ ಕೇರಳದ ಬಿಜೆಪಿ ಸಂಸದ
ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಧಿಕಾರಿಯವರ ಈ ಕ್ರಾಂತಿಕಾರಿ ನಡೆಗೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅವರು ವಾರಣಾಸಿ ಅಭಿವೃದ್ಧಿ ಪ್ರಾಧಿಕಾರದ (ವಿಡಿಎ) ಉಪಾಧ್ಯಕ್ಷರಾಗಿದ್ದರು, ಅವರು ತುಂಬಾ ಶ್ರಮಕ್ಕೆ ಹೆಸರಾದವರು ಹಾಗೂ ತಮ್ಮ ಕೆಲಸಕ್ಕೆ ಸಮರ್ಪಿತರಾಗಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ ಇದರಿಂದ ಇತರರು ಕೂಡ ಸರ್ಕಾರಿ ಶಾಲೆಯತ್ತ ಮುಖ ಮಾಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ, ಎಲ್ಲಾ ಸರ್ಕಾರಿ ಉದ್ಯೋಗಸ್ಥರಿಗೆ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುವುದನ್ನು ಕಡ್ಡಾಯ ಮಾಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.


