ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಉದ್ಯೋಗ ಮೇಳವೊಂದಕ್ಕೆ ಚಾಲನೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್‌, ಈ ವೇಳೆ ರಾಜ್ಯದ ಪ್ರತಿ ಕುಟುಂಬದ ಕನಿಷ್ಠ ಒಬ್ಬರಿಗಾದರೂ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. 

ಉತ್ತರ ಪ್ರದೇಶ ಸರ್ಕಾರ ರಾಜ್ಯದ ಪ್ರತಿ ಕುಟುಂಬದ ಕನಿಷ್ಠ ಒಬ್ಬರಿಗೆ ಉದ್ಯೋಗ ನೀಡಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಬುಧವಾರ ಹೇಳಿದ್ದಾರೆ. ಈ ಸಂಬಂಧ ಸರ್ಕಾರ ಕೌಶಲ್ಯ ಮ್ಯಾಪಿಂಗ್ ಪ್ರಯೋಗವನ್ನು ಪ್ರಾರಂಭಿಸಲಿದೆ ಎಂದೂ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಯುಪಿ ಸಿಎಂ ಹೇಳಿದರು. 

ಕೌಶಲ್ಯ ಮ್ಯಾಪಿಂಗ್ ಅವಧಿಯಲ್ಲಿ ಕನಿಷ್ಠ ಒಬ್ಬರೂ ಉದ್ಯೋಗದಲ್ಲಿಲ್ಲದ ಕುಟುಂಬಗಳ ಡೇಟಾವನ್ನು ತಯಾರಿಸಲಾಗುವುದು. ಅಂತಹ ಕುಟುಂಬಗಳ ಸದಸ್ಯರನ್ನು ವಿಶೇಷ ಕಾರ್ಯಕ್ರಮದಡಿ ಸಂಪರ್ಕಿಸಲಾಗುತ್ತದೆ. ಹಾಗೂ ಇದರಿಂದ ಕನಿಷ್ಠ ಕುಟುಂಬದ ಒಬ್ಬರು ಸದಸ್ಯರಿಗೆ ಉದ್ಯೋಗ ದೊರೆಯಲಿದೆ ಎಂದು ಗೋರಖ್‌ಪುರದಲ್ಲಿ ನಡೆದ ಉದ್ಯೋಗ ಮೇಳವೊಂದರಲ್ಲಿ ಉತ್ತರ ಪ್ರದೇಶ ಸಿಎಂ ಹೇಳಿದ್ದಾರೆ. "ಅವಶ್ಯಕತೆಗೆ ಅನುಗುಣವಾಗಿ, ಜನರಿಗೆ ತರಬೇತಿ ನೀಡಲಾಗುತ್ತದೆ ಮತ್ತು ಅವರಿಗೆ ಉದ್ಯೋಗ ಅಥವಾ ಸ್ವಯಂ ಉದ್ಯೋ ನೀಡಲಾಗುವುದು. ಇದರಿಂದ ಉತ್ತರ ಪ್ರದೇಶ ರಾಜ್ಯದ ಯಾವುದೇ ಕುಟುಂಬವು ಉದ್ಯೋಗದಿಂದ ವಂಚಿತವಾಗುವುದಿಲ್ಲ" ಎಂದು ಅವರು ಹೇಳಿದರು.

ಯೋಗಿ ಸರ್ಕಾರಕ್ಕೆ 600 ಕೋಟಿ ಮೌಲ್ಯದ ಆಸ್ತಿ ದಾನ ಮಾಡಿದ ವೈದ್ಯ..!

ಇನ್ನು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬಿಜೆಪಿಯ ಡಬ್ಬಲ್‌ ಎಂಜಿನ್‌ ಸರ್ಕಾರ ಕೌಶಲ್ಯ ಭಾರತ (Skill India) ಹಾಗೂ ಸ್ಟಾರ್ಟಪ್‌ ಇಂಡಿಯಾ (Startup India) ನಂತಹ ಹಲವು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಈ ಮೂಲಕ ಕಾರ್ಮಿಕರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಗುರುತಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳಿದ್ದಾರೆ. ಅಲ್ಲದೆ, ಕಳೆದ 5 ವರ್ಷಗಳಲ್ಲಿ ರಾಜ್ಯ ಸರ್ಕಾರ 5 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಹಾಗೂ 60 ಲಕ್ಷ ಕುಶಲಕರ್ಮಿಗಳಿಗೆ ಸಾಲ ನೀಡಿದೆ ಎಂದೂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. 2015 - 16 ರಲ್ಲಿ ರಾಜ್ಯ ಸರ್ಕಾರದ ನಿರುದ್ಯೋಗ ಪ್ರಮಾಣ ಶೇ. 18ಕ್ಕಿಂತ ಹೆಚ್ಚಿತ್ತು. ಈಗ ಆ ಪ್ರಮಾಣ ಶೇ. 16 ರಷ್ಟು ಕುಸಿದಿದ್ದು, ಉತ್ತರ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ. 2.7 ರಷ್ಟಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. 

ಇನ್ನು, ಭಾರತವನ್ನು 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನಾಗಿಸುವ ಪ್ರಧಾನಿ ಮೋದಿಯವರ ಇಚ್ಛೆಯಂತೆ ಉತ್ತರ ಪ್ರದೇಶ ಸಹ 1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗುವತ್ತ ಹೆಜ್ಜೆ ಇಡಲಿದೆ ಎಂದೂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. 2016 ರಲ್ಲಿ ಉತ್ತರ ಪ್ರದೇಶದ ಆರ್ಥಿಕತೆ ದೇಶದಲ್ಲಿ 6ನೇ ಸ್ಥಾನದಲ್ಲಿತ್ತು, ಈಗ ಎರಡನೇ ಸ್ಥಾನಕ್ಕೆ ಜಿಗಿದಿದೆ. ಕಳೆದ 5 ವರ್ಷಗಳಲ್ಲಿ ನಮ್ಮ ತಲಾ ಆದಾಯ ಮತ್ತು ಜಿಡಿಪಿ ದ್ವಿಗುಣಗೊಂಡಿದೆ. ಯುವಕರು, ಕುಶಲಕರ್ಮಿಗಳು ಮತ್ತು ಕಾರ್ಮಿಕರು ಸ್ವಾವಲಂಬನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಗೋರಖ್‌ಪುರದಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಗೋರಖ್‌ಪುರದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಬಳಿಕ ಈ ಹೇಳಿಕೆಗಳನ್ನಾಡಿದ್ದಾರೆ. ಈ ಉದ್ಯೋಗ ಮೇಳದಲ್ಲಿ 10,000 ಯುವಕರಿಗೆ ಉದ್ಯೋಗ ನೀಡುವ ಗುರಿಯನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದೆ. ಅಲ್ಲದೆ, 122 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನೂ ಮುಖ್ಯಮಂತ್ರಿ ನೆರವೇರಿಸಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಪ್ರತಿ ತಿಂಗಳು 1 ಕೋಟಿ ದೇಣಿಗೆ, ಈವರೆಗೂ 5500 ಕೋಟಿ ಸಂಗ್ರಹ!

ಮದನ್ ಮೋಹನ್ ಮಾಳವೀಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಈ ಉದ್ಯೋಗ ಮೇಳ ನಡೆಯುತ್ತಿದ್ದು, ಓಲಾ, ಪೇಟಿಎಂ ಮತ್ತು ಸುಮಾರು 90 ಇತರ ಸೇರಿದಂತೆ ಹಲವಾರು ಪ್ರಸಿದ್ಧ ಕಂಪನಿಗಳ ಪ್ರತಿನಿಧಿಗಳು ಅಲ್ಲಿ ಉಪಸ್ಥಿತರಿರುತ್ತಾರೆ. ಬೆಳಗ್ಗೆ 11 ಗಂಟೆಗೆ ಕೆಲವು ಆಕಾಂಕ್ಷಿಗಳಿಗೆ ಸೇರ್ಪಡೆ ಪತ್ರವನ್ನು ಸಿಎಂ ಹಸ್ತಾಂತರಿಸುವ ನಿರೀಕ್ಷೆ ಇದೆ'' ಎಂದು ಹೇಳಿದರು.
122.29 ಕೋಟಿ ವೆಚ್ಚದ ನಗರಾಭಿವೃದ್ಧಿ ಯೋಜನೆಗಳಿಗೆ ಉತ್ತರ ಪ್ರದೇಶ ಸಿಎಂ ಉದ್ಘಾಟನೆ ಮಾಡಿದ್ದು, ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲದೆ, ತ್ಯಾಜ್ಯ ಸಂಗ್ರಹ ವಾಹನಗಳ ಚಾಲಕರಿಗೆ ಉದ್ಯೋಗ ಪ್ರಮಾಣಪತ್ರವನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ.