ರೆಫ್ರಿಜರೇಟರ್  ಅಥವಾ ಫ್ರಿಡ್ಜ್‌ ಸ್ಫೋಟಗೊಂಡ ನಂತರ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ ಘಟನೆ ನೆರೆಯ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈ: ರೆಫ್ರಿಜರೇಟರ್ ಅಥವಾ ಫ್ರಿಡ್ಜ್‌ ಸ್ಫೋಟಗೊಂಡ ನಂತರ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ ಘಟನೆ ನೆರೆಯ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಗುಡುವಾಂಚೇರಿಯಲ್ಲಿ ಇಂದು ಮುಂಜಾನೆ ಈ ದುರಂತ ಸಂಭವಿಸಿದೆ. ಫ್ರಿಡ್ಜ್‌ ಸ್ಫೋಟದ ನಂತರ ಮನೆಪೂರ್ತಿ ಹೊಗೆ ಆವರಿಸಿದ್ದು, ಇದರಿಂದ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ. ಸ್ಫೋಟದ ನಂತರ ಮನೆಯವರ ಬೊಬ್ಬೆ ಕೇಳಿ ನೆರೆಹೊರೆಯ ಮನೆಯವರು ಬಂದು ಬಾಗಿಲು ಒಡೆದು ಇವರನ್ನು ರಕ್ಷಿಸುವ ವೇಳೆಗಾಗಲೇ ಮೂರು ಜನ ಉಸಿರುಚೆಲ್ಲಿದ್ದರು. ನಂತರ ಪಕ್ಕದ ಮನೆಯವರು ಪೊಲೀಸರು, ಅಗ್ನಿಶಾಮಕ ಹಾಗೂ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ಮೃತರನ್ನು 63 ವರ್ಷ ಪ್ರಾಯದ ವಿ ಗಿರಿಜಾ (V Girija), ಅವರ ಸಹೋದರಿ 55 ವರ್ಷದ ಎಸ್ ರಾಧಾ (S Radha) ಮತ್ತು ಅವರ ಸಹೋದರ 48 ವರ್ಷ ಪ್ರಾಯದ ಎಸ್ ರಾಜ್ ಕುಮಾರ್ (S Raj Kumar) ಎಂದು ಗುರುತಿಸಲಾಗಿದೆ. ಈ ದುರಂತದಲ್ಲಿ ಮೃತ ರಾಜ್‌ಕುಮಾರ್ ಅವರ ಪತ್ನಿ 40 ವರ್ಷದ ಭಾರ್ಗವಿ ಹಾಗೂ ಈ ದಂಪತಿಯ ಮಗಳು 7 ವರ್ಷದ ಆರಾಧನಾ ಕೂಡ ಅಸ್ವಸ್ಥರಾಗಿದ್ದು, ಅವರನ್ನು ಚಿಕಿತ್ಸೆಗಾಗಿ (treatment) ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ (Chengalpattu government hospital) ದಾಖಲಿಸಲಾಗಿದೆ. ಗಿರಿಜಾ ಅವರ ಪತಿ ವೆಂಕಟರಮಣ (65) ಅವರು ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಈ ದಂಪತಿ ಚೆಂಗಲ್ಪಟ್ಟು ಜಿಲ್ಲೆಯ ಗುಡುವಂಚೇರಿಯ (Guduvanchery ) ಕೋತಂಡರಾಮನ್ (Kothandaraman) ನಗರದ ಜಯಲಕ್ಷ್ಮಿ ಸ್ಟ್ರೀಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು.

ಫ್ರಿಡ್ಜ್‌ ಇಲ್ಲದ ಹೊಟೇಲ್‌, ಅಡುಗೆಗೆ ದೇಸಿ ತುಪ್ಪ ಬಳಕೆ..ಫುಡ್ ಸಖತ್ ಟೇಸ್ಟ್‌

ಪತಿಯ ಮರಣದ ನಂತರ ಗಿರಿಜಾ ತನ್ನ ಮಗನ ಜೊತೆ ದುಬೈಗೆ ಹೋಗಿದ್ದರು. ಈ ವೇಳೆ ಈ ಮನೆ ಖಾಲಿ ಇತ್ತು. ನವೆಂಬರ್ 2 ರಂದು ಭಾರತಕ್ಕೆ ಮರಳಿದ ಅವರು ಮತ್ತೆ ಇಲ್ಲಿಗೆ ಬಂದು ತಂಗಿದ್ದರು. ಅಲ್ಲದೇ ಒಂದು ದಿನದ ನಂತರ ಅವರ ಸಂಬಂಧಿಗಳು ಕೂಡ ಆಗಮಿಸಿದ್ದರು. ಗಿರಿಜಾ ಪತಿ ವೆಂಕಟರಾಮನ್ ಅವರ ಮೊದಲ ವರ್ಷದ ಪುಣ್ಯತಿಥಿ ಆಚರಣೆಗಳನ್ನು ಮಾಡಲು ಅವರೆಲ್ಲಾ ಆಗಮಿಸಿದ್ದು, ಇಂದು ಸಂಜೆ ವಾಪಸ್ ತೆರಳುವವರಿದ್ದರು. ಆದರೆ ಅಷ್ಟರಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ರೆಫ್ರಿಜರೇಟರ್‌ನಲ್ಲಿನ ಏರ್ ಕಂಪ್ರೆಸರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಅಥವಾ ಫ್ರಿಡ್ಜ್‌ನಲ್ಲಿನ ವೈರ್‌ನಲ್ಲಾದ ತೊಂದರೆಯಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು ನಾವು ಶಂಕಿಸಿದ್ದೇವೆ. ಸ್ಫೋಟದ ನಂತರ ಇಡೀ ಮನೆಯನ್ನು ಹೊಗೆ ಆವರಿಸಿದ್ದು, ಪರಿಣಾಮ ಉಸಿರುಕಟ್ಟಿ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ತಮಿಳುನಾಡಿನಲ್ಲಿ ಕಾರು ಸ್ಫೋಟಕ್ಕೆ ಬಲಿಯಾದವ ಆತ್ಮಾಹುತಿ ಬಾಂಬರ್

ಅಸ್ವಸ್ಥರಾಗಿರುವ ಭಾರ್ಗವಿ ಮತ್ತು ಆರಾಧನಾ ಬೆಡ್‌ರೂಮ್‌ನಲ್ಲಿ (bedroom) ಮಲಗಿದ್ದರೆ, ಮೂವರು ಒಡಹುಟ್ಟಿದವರು ಲಿವಿಂಗ್ ರೂಮಿನಲ್ಲಿ ಮಲಗಿದ್ದರು. ಹೊಗೆಯಿಂದ ಅವರು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಸಹಾಯಕ್ಕಾಗಿ ಅವರು ಬೊಬ್ಬೆ ಹೊಡೆದ ನಂತರ ನೆರೆಹೊರೆಯ ಮನೆಯವರು ಬಂದು ಬಾಗಿಲು ಒಡೆದಿದ್ದಾರೆ. ಭಾರ್ಗವಿ ಮತ್ತು ಆರಾಧನಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕ್ರೋಮ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಗಿರಿಜಾ, ರಾಧಾ ಮತ್ತು ರಾಜ್ ಕುಮಾರ್ ಅವರು ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಅವರ ಮೃತದೇಹಗಳನ್ನು ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಡುವಂಚೇರಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.