ಕೇಂದ್ರ ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ಪ್ರತಿಷ್ಠಿತ ಯುವ ಪುರಸ್ಕಾರ ಹಾಗೂ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರಕಟಿಸಿದ್ದು, ಮೂವರು ಕನ್ನಡಿಗರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ನವದೆಹಲಿ (ಜೂ.19): ಕೇಂದ್ರ ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ಪ್ರತಿಷ್ಠಿತ ಯುವ ಪುರಸ್ಕಾರ ಹಾಗೂ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರಕಟಿಸಿದ್ದು, ಮೂವರು ಕನ್ನಡಿಗರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕನ್ನಡಿಗ ಆರ್. ದಿಲೀಪ್ ಕುಮಾರ್ ಅವರ ವಿಮರ್ಶಾ ಸಂಕಲನ ‘ಪಚ್ಚೆಯ ಜಗುಲಿ’ಗೆ ಯುವ ಪುರಸ್ಕಾರ ಲಭಿಸಿದೆ. ದೇಶದ ವಿವಿಧ ಭಾಷೆಗಳ ಒಟ್ಟು 23 ಲೇಖಕರು ಯುವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಕನ್ನಡಿಗರಾದ ಕೆ.ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್’ ಸಣ್ಣಕಥೆಗಳ ಸಂಕಲನಕ್ಕೆ ‘ಕನ್ನಡ’ ವಿಭಾಗದಲ್ಲಿ ಹಾಗೂ ನಿತಿನ್ ಕುಶಾಲಪ್ಪ ಎಂ.ಪಿ. ಅವರ ‘ದಕ್ಷಿಣ್ ಸೌಥ್ ಇಂಡಿಯನ್ ಫೇಬಲ್ಸ್ ರೀಟೋಲ್ಡ್’ ಕಥಾಸಂಕಲನಕ್ಕೆ ‘ಇಂಗ್ಲಿಷ್’ ವಿಭಾಗದಲ್ಲಿ ಬಾಲ ಸಾಹಿತ್ಯ ಪುರಸ್ಕಾರ ದೊರಕಿದೆ. ಪ್ರಶಸ್ತಿ ಪುರಸ್ಕೃತರು ತಲಾ ₹50 ಸಾವಿರ ನಗದು ಹಾಗೂ ಫಲಕಗಳನ್ನು ಪಡೆಯಲಿದ್ದಾರೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ವಿಚಾರಗಳು ವಿಶ್ವಮಟ್ಟದಲ್ಲಿ ಚರ್ಚೆ: ಕೇಂದ್ರ ಸಾಹಿತ್ಯ ಅಕಾಡಮಿಯಲ್ಲಿ ಚರ್ಚಿಸಿ ತೀರ್ಮಾನಿಸುವ ವಿಚಾರಗಳು ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತವೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ.ಚಂದ್ರಶೇಖರ ಕಂಬಾರ ಹೇಳಿದರು. ಪಟ್ಟಣದ ಕಸಾಪ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕುಮಾರ್ ಹಳೇಬೀಡು ಅವರ ‘ಬಾ ಮರಳಿ’ ಕೃತಿ ಲೋಕಾರ್ಪಣೆ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯ ಹೊ.ನ.ನೀಲಕಂಠೇಗೌಡರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯನಾಗಿ 20 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಹೊ.ನ.ನೀಲಕಂಠೇಗೌಡರು ಈಗ ಅಕಾಡೆಮಿ ಸದಸ್ಯನಾಗಿ ನೇಮಕಗೊಂಡಿರುವುದು ಬಹಳ ಸಂತೋಷ. ಈ ಹುದ್ದೆಯಿಂದ ನಿಮಗೆ ದೊಡ್ಡ ಜವಾಬ್ದಾರಿ ಬಂದಿದ್ದು ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದರು. ಕೇಂದ್ರ ಸಾಹಿತ್ಯ ಅಕಾಡಮಿಯಲ್ಲಿ ಚರ್ಚೆಯಾಗಿ ತೀರ್ಮಾನಗೊಳ್ಳುವಂತಹ ವಿಷಯ, ವಿಚಾರಗಳನ್ನು ಪ್ರಪಂಚದ ಎಲ್ಲಾ ಅಕಾಡಮಿಗಳು ಗಮನಿಸುತ್ತವೆ. ಜತೆಗೆ ಚರ್ಚಿಸುತ್ತವೆ. ಹಾಗಾಗಿ ಇಲ್ಲಿ ಸದಸ್ಯರಾದವರಿಗೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಜತೆಗೆ ತಾವು ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕಾಗಿರುತ್ತೆ ಎಂದು ಎಚ್ಚರಿಸಿದರು.

ಅಭಿನಂದನೆ ಸ್ವೀಕರಿಸಿದ ಹೊ.ನ.ನೀಲಕಂಠೇಗೌಡ ಮಾತನಾಡಿ, ನಾನು ಕನ್ನಡದ ಕೆಲಸ ಮಾಡಲು ಸಾಹಿತಿ ಡಾ. ಚಂದ್ರಶೇಖರ್‌ ಕಂಬಾರ ಅವರು ನನಗೆ ಶಕ್ತಿಯಾಗಿ ನಿಂತಿದ್ದಾರೆ. ಕಂಬಾರರು ನಮ್ಮೆಲ್ಲರ ಹೆಮ್ಮೆಯ ಕವಿಯಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಲ್ಲಿ ಕುವೆಂಪು ಅವರನ್ನು ಹೊರತು ಪಡಿಸಿದರೆ ಚಂದ್ರಶೇಖರ ಕಂಬಾರ ಅವರಿಗೆ ಹೆಚ್ಚಾಗಿ ಪುರಸ್ಕಾರ ಲಭಿಸಿವೆ. ಪ್ರಪಂಚದ ನಾನಾ ಭಾಗದಲ್ಲಿ ಭಾರತದ ಎಲ್ಲಾ ರಾಜ್ಯಗಳಿಂದಲೂ ಪುರಸ್ಕಾರ ಸ್ವೀಕರಿಸಿದ್ದಾರೆ ಎಂದು ಬಣ್ಣಿಸಿದರು.