ತಂಜಾವೂರು ಜಿಲ್ಲೆಯ ಪಟ್ಟುಕೊಟ್ಟೈನಲ್ಲಿರುವ ಸರ್ಕಾರಿ ಆದಿ ದ್ರಾವಿಡ ಬಾಲಕಿಯರ ಹಾಸ್ಟೆಲ್‌ನಲ್ಲಿ ಉಪಾಹಾರ ಸೇವಿಸಿದ ಬಳಿಕ ಸುಮಾರು 30 ವಿದ್ಯಾರ್ಥಿನಿಯರು ಅಸ್ವಸ್ಥರಾದರು. ಫುಡ್‌ ಪಾಯಿಸನ್ ಆಗಿ ಈ ಘಟನೆ ನಡೆದಿದ್ದು, ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  

ತಮಿಳುನಾಡು: ತಂಜಾವೂರು ಜಿಲ್ಲೆಯ ಪಟ್ಟುಕೊಟ್ಟೈನಲ್ಲಿ ಇರುವ ಸರ್ಕಾರಿ ಆದಿ ದ್ರಾವಿಡ ಬಾಲಕಿಯರ ಹಾಸ್ಟೆಲ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಉಪಾಹಾರ ಸೇವಿಸಿದ ಬಳಿಕ ಸುಮಾರು 30 ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ನಡೆದಿದೆ. ಫುಡ್‌ ಪಾಯಿಸನ್ ಆಗಿ ಈ ಘಟನೆ ನಡೆದಿದ್ದು, ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Add Asianetnews Kannada as a Preferred SourcegooglePreferred

ಪೊಲೀಸರ ಮಾಹಿತಿಯ ಪ್ರಕಾರ, ಈ ಹಾಸ್ಟೆಲ್ ಕಳೆದ ಮೂರು ವರ್ಷಗಳಿಂದ ಖಾಸಗಿ ಮದುವೆ ಮಂಟಪದಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯ ವಿದ್ಯಾರ್ಥಿನಿಯರು ಪಟ್ಟುಕೊಟ್ಟೈನಲ್ಲಿರುವ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಶುಕ್ರವಾರ ಬೆಳಿಗ್ಗೆ ಉಪಾಹಾರಕ್ಕೆ ಪುಳಿಯೊಗರೆ ಮತ್ತು ಆಲೂಗಡ್ಡೆ ಫ್ರೈ ವಿತರಿಸಲಾಗಿತ್ತು. ಉಪಾಹಾರ ಸೇವಿಸಿದ ನಂತರ ವಿದ್ಯಾರ್ಥಿನಿಯರು ಎಂದಿನಂತೆ ಶಾಲೆಗೆ ಹಾಜರಾದರು. ಆದರೆ ಬೆಳಿಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಆರು ವಿದ್ಯಾರ್ಥಿನಿಯರು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡರು. ಕೆಲವರು ಮೂರ್ಛೆಹೋದರು. ಇದನ್ನು ಗಮನಿಸಿದ ಶಿಕ್ಷಕರು ತಕ್ಷಣ ಅವರನ್ನು ಪಟ್ಟುಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಆಹಾರದಲ್ಲಿ ಸಮಸ್ಯೆಯಾಗಿದೆ ಎಂಬುದು ಕಂಡುಬಂದಿದೆ.

ಶೀಘ್ರದಲ್ಲೇ ಉಳಿದ 22 ವಿದ್ಯಾರ್ಥಿನಿಯರು ಸಹ ವಾಂತಿ, ತಲೆ ತಿರುಗುವಿಕೆ ಮತ್ತು ಹೊಟ್ಟೆನೋವು ಸೇರಿದಂತೆ ಕೆಲವು ಲಕ್ಷಣಗಳನ್ನು ತೋರಿದ ಹಿನ್ನೆಲೆ, ಅವರನ್ನು ಕೂಡ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ತಪಾಸಣೆಯಲ್ಲಿ ಇದು ಆಹಾರ ವಿಷಯುಕ್ತವಾಗಿ ಸಂಭವಿಸಿದೆ ಎಂಬುದು ದೃಢಪಟ್ಟಿದೆ. ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದು, ಸಂಜೆ ಹೊತ್ತಿಗೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಘಟನೆ ಕುರಿತು ತನಿಖೆ ಆರಂಭವಾಗಿದ್ದು, ಪಟ್ಟುಕೊಟ್ಟೈ ಉಪ ವಿಭಾಗಾಧಿಕಾರಿ (ಆರ್‌ಡಿಒ) ಶಂಕರ್, ತಹಶೀಲ್ದಾರ್ ಧರ್ಮೇಂದ್ರ ಮತ್ತು ಡಿಎಸ್‌ಪಿ ರವಿಚಂದ್ರನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸ್ಥಿತಿಗತಿಯನ್ನಿರೀಕ್ಷಿಸಿದರು. ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ತಕ್ಷಣವೇ ಹಾಸ್ಟೆಲ್‌ನಲ್ಲಿ ಉಪಯೋಗಿಸಲಾದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಕಳುಹಿಸಿದ್ದಾರೆ.