ನಿವಾಸದ ಬಾಡಿಗೆ ಪಾವತಿಸದ ಕಾಂಗ್ರೆಸ್ ನಾಯಕಿ Sonia Gandhi!
ಬಾಡಿಗೆ ಪಾವತಿ ಮಾಡದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು
ಆರ್ ಟಿಐ ಮಾಹಿತಿಯಲ್ಲಿ ಬಹಿರಂಗ
ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯ 12.69 ಲಕ್ಷ ರೂಪಾಯಿ ಬಾಕಿ
ನವದೆಹಲಿ (ಫೆ. 10): ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ (Congress interim President) ಸೋನಿಯಾ ಗಾಂಧಿ (Sonia Gandhi) ಅವರ ಅಧಿಕೃತ ನಿವಾಸ ಸೇರಿದಂತೆ ಕಾಂಗ್ರೆಸ್ ನಾಯಕರು ಉಳಿದುಕೊಂಡಿರುವ ಹಲವು ನಿವಾಸಗಳ ಬಾಡಿಗೆಯನ್ನು ಪಾವತಿ ಮಾಡಲಾಗಿಲ್ಲ ಎನ್ನುವುದು ಆರ್ ಟಿಐ (RTI) ಮಾಹಿತಿಯಿಂದ ಬಹಿರಂಗವಾಗಿದೆ. ಸಾಮಾಜಿಕ ಕಾರ್ಯಕರ್ತ ಸುಜಿತ್ ಪಟೇಲ್ (Sujit Pate) ಸಲ್ಲಿಸಿದ ಆರ್ಟಿಐ ಅರ್ಜಿಗೆ ಉತ್ತರವಾಗಿ ದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ನಾಯಕರ ಹಲವಾರು ಆಸ್ತಿಗಳ ಬಾಡಿಗೆ ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನೀಡಿರುವ ಆರ್ಟಿಐ ಉತ್ತರದಲ್ಲಿ ಅಕ್ಬರ್ ರಸ್ತೆಯಲ್ಲಿರುವ (Akbar Road) ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯು 12,69,902 ರೂಪಾಯಿ ಬಾಡಿಗೆ ಬಾಕಿಯನ್ನು ಉಳಿಸಿಕೊಂಡಿದೆ. 2012ರ ಡಿಸೆಂಬರ್ ನಲ್ಲಿ ಕೊನೆಯ ಬಾರಿಗೆ ಈ ಕಟ್ಟಡದ ಬಾಡಿಗೆ ಪಾವತಿ ಮಾಡಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಅದೇ ರೀತಿ, 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದ 4610 ರೂಪಾಯಿ ಬಾಡಿಗೆಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ. 2020ರ ಸೆಪ್ಟೆಂಬರ್ ನಲ್ಲಿ ಕೊನೆಯ ಬಾರಿಗೆ ಇವರ ಮನೆಯ ಬಾಡಿಗೆ ಪಾವತಿ ಮಾಡಲಾಗಿದೆ.
ಸೋನಿಯಾ ಗಾಂಧಿಯವರ ಆಪ್ತ ಕಾರ್ಯದರ್ಶಿ ವಿನ್ಸೆಂಟ್ ಜಾರ್ಜ್ ಅವರು ಉಳಿದುಕೊಂಡಿರುವ ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಬಂಗಲೆಯು ₹ 5,07,911 ಬಾಡಿಗೆ ಬಾಕಿ ಇರಿಸಿಕೊಂಡಿದೆ. 2013ರ ಆಗಸ್ಟ್ ನಲ್ಲಿ ಈ ಬಂಗಲೆಗೆ ಕೊನೆಯ ಬಾರಿಗೆ ಬಾಡಿಗೆ ಪಾವತಿ ಮಾಡಲಾಗಿದೆ.
ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಿಗೆ ವಾಸ್ತವ್ಯಕ್ಕೆ ಅವಕಾಶ ನೀಡುವ ವಸತಿ ನಿಯಮಗಳ ಪ್ರಕಾರ ಪ್ರತಿಯೊಂದು ಪಕ್ಷಕ್ಕೂ ಸ್ವಂತ ಕಚೇರಿ ನಿರ್ಮಿಸಲು ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದ್ದು, ನಂತರ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕಾಗುತ್ತದೆ. 2010ರ ಜೂನ್ನಲ್ಲಿ 9-ಎ ರೋಸ್ ಅವೆನ್ಯೂದಲ್ಲಿ ಪಕ್ಷದ ಕಚೇರಿ ನಿರ್ಮಿಸಲು ಕಾಂಗ್ರೆಸ್ಗೆ ಭೂಮಿ ಮಂಜೂರು ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷವು 2013 ರ ವೇಳೆಗೆ ಅಕ್ಬರ್ ರಸ್ತೆಯ ಕಚೇರಿ ಮತ್ತು ಒಂದೆರಡು ಬಂಗಲೆಗಳನ್ನು ಖಾಲಿ ಮಾಡಬೇಕಾಗಿತ್ತು, ಆದರೆ ಹಳೆಯ ಪಕ್ಷವು ಇಲ್ಲಿಯವರೆಗೆ ಹಲವಾರು ಕಾರಣಗಳನ್ನು ನೀಡಿ ಇದೇ ಕಚೇರಿಯಲ್ಲಿ ಉಳಿದುಕೊಂಡಿದೆ. ಜುಲೈ 2020 ರಲ್ಲಿ, ಸರ್ಕಾರವು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಲೋಧಿ ರಸ್ತೆಯ ನಿವಾಸವನ್ನು ಒಂದು ತಿಂಗಳ ಅವಧಿಯಲ್ಲಿ ಖಾಲಿ ಮಾಡುವಂತೆ ನೋಟಿಸ್ ಕಳುಹಿಸಿತ್ತು.
Hijab Row: ಮಧ್ಯ ಪ್ರವೇಶಿಸಲು ನಕಾರ, ಕರ್ನಾಟಕ ಹೈಕೋರ್ಟ್ ಮೊದಲು ವಿಚಾರಣೆ ನಡೆಸಲಿ: ಸುಪ್ರೀಂ
ಈ ವಿಚಾರದಲ್ಲಿ ಸೋನಿಯಾ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿಯ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು, ಕಾಂಗ್ರೆಸ್ ಗೆ ಈಗ ಹಗರಣಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕಾಗಿಯೇ ಬಾಡಿಗೆ ಪಾವತಿ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. "ಚುನಾವಣೆಯಲ್ಲಿ ಸೋತ ನಂತರ ಸೋನಿಯಾ ಗಾಂಧಿ ಅವರಿಗೆ ತಮ್ಮ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಈಗ ಹಗರಣಗಳನ್ನು ಮಾಡಲು ಸಾಧ್ಯವಿಲ್ಲ ಆದರೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾನು ಅವರಿಗೆ ಮಾನವೀಯವಾಗಿ ಸಹಾಯ ಮಾಡಲು ಬಯಸುತ್ತೇನೆ. ನಾನು #SoniaGandhiReliefFund ಎಂಬ ಅಭಿಯಾನವನ್ನು ಪ್ರಾರಂಭಿಸುತ್ತೇನೆ ಮತ್ತು ₹ 10 ಕಳುಹಿಸಿದ್ದೇನೆ. ಆಕೆಯ ಖಾತೆಗೆ ಹಣ ಹಾಕುವ ಮೂಲಕ ಸಹಾಯ ಮಾಡುವಂತೆ ನಾನು ಎಲ್ಲರನ್ನೂ ವಿನಂತಿಸುತ್ತೇನೆ" ಎಂದು ಅವರು ಟ್ವೀಟ್ನಲ್ಲಿ ವ್ಯಂಗ್ಯವಾಡಿದ್ದಾರೆ. ಬಗ್ಗಾ ಅವರು ಕಾಂಗ್ರೆಸ್ ಹಂಗಾಮಿ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಿದ ಹಣದ ಸ್ಕ್ರೀನ್ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ.