ರಷ್ಯಾದಿಂದ ಭಾರತ ಖರೀದಿಸಿರುವ ಐದು ಎಸ್-400 ಕ್ಷಿಪಣಿ ವ್ಯವಸ್ಥೆಗಳ ಪೈಕಿ ನಾಲ್ಕನೆಯದು ಶೀಘ್ರದಲ್ಲೇ ಬರಲಿದೆ. ಈ ಹಿಂದೆ 'ಆಪರೇಷನ್ ಸಿಂದೂರ'ದ ಯಶಸ್ಸಿಗೆ ಕಾರಣವಾಗಿದ್ದ ಈ ವ್ಯವಸ್ಥೆಯು, ಭಾರತದ ವಾಯುರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ.
ನವದೆಹಲಿ: ರಷ್ಯಾದಿಂದ ಭಾರತ ಖರೀದಿಸಿರುವ 5 ಎಸ್-400 ಕ್ಷಿಪಣಿ ದಾಳಿ, ತಡೆ ವ್ಯವಸ್ಥೆಯ ಪೈಕಿ 4ನೇಯದ್ದು ಶೀಘ್ರವೇ ಭಾರತವನ್ನು ತಲುಪಲಿದೆ. ಇದು ಭಾರತದ ವಾಯುರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆ ಇದೆ. ಪಹಲ್ಗಾಂನಲ್ಲಿ ಪಾಕ್ ಉಗ್ರರು ನಡೆಸಿದ್ದ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ್ದ ಆಪರೇಷನ್ ಸಿಂದೂರ ದಾಳಿ ಗೆಲ್ಲಲು ಇದೇ ವ್ಯವಸ್ಥೆ ನೆರವಾಗಿತ್ತು.
5 ಎಸ್-400 ಕ್ಷಿಪಣಿ ವ್ಯವಸ್ಥೆ
2018ರಲ್ಲಿ ಭಾರತ, ರಷ್ಯಾದಿಂದ ಅಂದಾಜು 35000 ಕೋಟಿ ರು. ವೆಚ್ಚದಲ್ಲಿ 5 ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ ಮೂರು ಈಗಾಗಲೇ ಭಾರತವನ್ನು ತಲುಪಿ ವಿವಿಧ ಸ್ಥಳಗಳಲ್ಲಿ ನಿಯೋಜನೆಗೊಂಡಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ಇನ್ನೊಂದು ವ್ಯವಸ್ಥೆಯನ್ನು ಈಗಾಗಲೇ ಭಾರತದತ್ತ ರವಾನಿಸಲಾಗಿದ್ದು, ಅದು ಮೇ ತಿಂಗಳ ಮೊದಲ ಅಥವಾ ಎರಡನೇ ವಾರ ತಲುಪುವ ನಿರೀಕ್ಷೆ ಇದೆ.
ಮೂಲಗಳ ಪ್ರಕಾರ ಇದನ್ನು ರಾಜಸ್ಥಾನ ಗಡಿಯಲ್ಲಿ ನಿಯೋಜಿಸುವ ಸಾಧ್ಯತೆ ಇದೆ. 5ನೇ ವ್ಯವಸ್ಥೆ ನವೆಂಬರ್ನಲ್ಲಿ ಭಾರತ ತಲುಪುವ ನಿರೀಕ್ಷೆ ಇದೆ. ಈ ಹಿಂದೆ ಮಾಡಿಕೊಂಡಿದ್ದ 5ರ ಜೊತೆಗೆ ಮತ್ತೂ 5 ಎಸ್-400 ಖರೀದಿಗೆ ಭಾರತ ಕಳೆದ ತಿಂಗಳಷ್ಟೇ ನಿರ್ದರಿಸಿತ್ತು
ಇದನ್ನೂ ಓದಿ: ಚೀನಾ, ರಷ್ಯಾದಿಂದ ಹೈಪರ್ಸಾನಿಕ್ ಮಿಸೈಲ್ ದಾಳಿ ನಡೆದರೆ ತಡೆಯೋ ಶಕ್ತಿ ನಮಗಿಲ್ಲ; ಬಯಲಾಯ್ತು ಅಮೆರಿಕ ಸೇನೆಯ ಅಸಹಾಯಕ ಮಾತು!
ಎಸ್ 400 ಮಹತ್ವ
ಇದು ವಿಶ್ವದ ಅತ್ಯಾಧುನಿಕ ಕ್ಷಿಪಣಿ ದಾಳಿ ಮತ್ತು ತಡೆ ವ್ಯವಸ್ಥೆ. ಏಕಕಾಲಕ್ಕೆ 300 ಕ್ಷಿಪಣಿ, ಡ್ರೋನ್ಗಳ ದಾಳಿಯನ್ನು 300-400 ಕಿ.ಮೀ ದೂರದಲ್ಲೇ ಪತ್ತೆ ಮಾಡಿ ಅದನ್ನು ಹೊಡೆದುರುಳಿಸಬಲ್ಲದು.


