ತೆಲಂಗಾಣದ ಖಮ್ಮಂ ಜಿಲ್ಲೆಯ ಅಶ್ವರಾವ್‌ಪೇಟೆ ಪುರಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್‌ ಅಭ್ಯರ್ಥಿ ಎಂ. ಹರಿಬಾಬು, ತಾವು ಮತದಾರರಿಗೆ ಹಂಚಿದ್ದ ಪ್ರೆಶರ್ ಕುಕ್ಕರ್‌ ಮತ್ತು ಹಣವನ್ನು ವಾಪಸ್ ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಮತದಾರರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರು.

ಖಮ್ಮಂ (ಫೆ.15): ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳು ಹಣ, ಮದ್ಯ, ಕುಕ್ಕರ್‌, ಮಿಕ್ಸರ್‌ ಹಂಚುವುದು ಕೆಲವು ನಡೆ ಮಾಮೂಲಿ. ಅಂಥದ್ದರಲ್ಲಿ ತೆಲಂಗಾಣದ ಖಮ್ಮಂ ಜಿಲ್ಲೆಯ ಅಶ್ವರಾವ್‌ಪೇಟೆ ಪುರಸಭೆ ಚುನಾವಣೆ ವೇಳೆ ವಿಚಿತ್ರ ಘಟನೆಯೊಂದು ಸಂಭವಿಸಿದೆ. 

ಶುಕ್ರವಾರ ನಡೆದ ಮತ ಎಣಿಕೆ ವೇಳೆ ಸೋತ ಕಾಂಗ್ರೆಸ್‌ ಅಭ್ಯರ್ಥಿಯೊಬ್ಬರು, ಸೋಲಿನಿಂದ ರೋಸಿ ಹೋಗಿ ತಾವು ಮತದಾರರಿಗೆ ನೀಡಿದ್ದ ಪ್ರೆಶರ್‌ ಕುಕ್ಕರ್‌ ಹಾಗೂ ನಗದನ್ನು ವಾಪಸ್‌ ಕೇಳಿ ಮತದಾರರ ಆಕ್ರೋಶಕ್ಕೆ ಕಾರಣನಾಗಿದ್ದಾರೆ. ಅಭ್ಯರ್ಥಿ ಎಂ. ಹರಿಬಾಬು ಪ್ರಚಾರದ ಸಮಯದಲ್ಲಿ ಹಣ ಮತ್ತು ಪ್ರೆಶರ್ ಕುಕ್ಕರ್‌ಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ವಿತರಿಸಿದ್ದರು. ಆದರೆ ಗೆಲ್ಲಲು ವಿಫಲವಾದ ನಂತರ, ಅವರು ತಾವು ನೀಡಿದ್ದ ವಸ್ತುಗಳನ್ನು ಹಿಂತಿರುಗಿಸುವಂತೆ ಮತದಾರರಿಗೆ ಕೇಳಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ.

ಇದರಿಂದ ರೋಸಿ ಹೋದ ಮತದಾರರು, ‘ನಾವೇನೂ ನಿಮಗೆ ಕುಕ್ಕರ್, ಹಣ ಕೊಡು ಎಂದಿರಲಿಲ್ಲ. ಕೊಟ್ಟ ನಂತರ ಅವನ್ನು ವಾಪಸು ಕೇಳುವುದು ಸರಿಯೇ? ಈಗ ನಮ್ಮನ್ನು ಏಕೆ ಅವಮಾನಿಸಲಾಗುತ್ತಿದೆ? ಅಭ್ಯರ್ಥಿಯು ನಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ರಸ್ತೆಯ ಮಧ್ಯೆ ಅವನ್ನು ಇರಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಆಗ ಉದ್ವಿಗ್ನತೆ ಉಂಟಾಗಿ ಪೊಲೀಸರು ಮಧ್ಯಪ್ರವೇಶಿಸಿ ಮತದಾರರನ್ನು ಸಮಾಧಾನಪಡಿಸಿ ವಾಪಸು ಕಳಿಸಿದ್ದಾರೆ. ಕೆಲವು ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದು ನಂತರ ಬಿಟ್ಟು ಕಳಿಸಿದ್ದಾರೆ.

ಆದಾಗ್ಯೂ ಅಭ್ಯರ್ಥಿಯ ವಿರುದ್ಧ ಯಾರಾದರೂ ಆಮಿಷ ಒಡ್ಡಿದ ದೂರು ದಾಖಲಿಸಿದ್ದಾರೆಯೇ ಎಂಬುದು ದೃಢಪಡಿಸಿಲ್ಲ.

YouTube video player