ತಮಿಳುನಾಡು ಮಾಜಿ ಸಿಎಂ ಒ.ಪನ್ನೀರ್‌ಸೆಲ್ವಂ ತಮ್ಮ ಮಗನ ಜೊತೆ ಡಿಎಂಕೆ ಸೇರಿದ್ದಾರೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸಾಮಿ ವಿರುದ್ಧದ ಹೋರಾಟಕ್ಕೆ ಡಿಎಂಕೆ ಪಕ್ಷವೇ ಸರಿ ಎಂದು ಒಪಿಎಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಚೆನ್ನೈ: ಎಐಎಡಿಎಂಕೆ ಪಕ್ಷವನ್ನು ಒಡೆಯಲು ಯತ್ನಿಸುತ್ತಿರುವವರ ವಿರುದ್ಧ 'ಧರ್ಮಯುದ್ಧ' ಆರಂಭಿಸಿದ್ದ ಒ.ಪನ್ನೀರ್‌ಸೆಲ್ವಂ (ಒಪಿಎಸ್), ಕೊನೆಗೂ ತಮ್ಮ ಬದ್ಧವೈರಿ ಪಾಳಯ ಸೇರಿಕೊಂಡಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ 'ಎಐಎಡಿಎಂಕೆ ಕೇಡರ್ ರೈಟ್ಸ್ ರಿಟ್ರೀವಲ್ ಕಳಗಂ' ನಾಯಕರಾದ ಒಪಿಎಸ್, ಇದೀಗ ಡಿಎಂಕೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಗನ ಜತೆ ಡಿಎಂಕೆ ಸೇರಿದ ಒಪಿಎಸ್‌

ಒಪಿಎಸ್ ಜೊತೆಗೆ ಅವರ ಮಗ ಹಾಗೂ ಮಾಜಿ ಸಂಸದ ರವೀಂದ್ರನಾಥ್ ಮತ್ತು ಉಸಿಲಾಂಪಟ್ಟಿ ಶಾಸಕ ಅಯ್ಯಪ್ಪನ್ ಕೂಡ ಡಿಎಂಕೆ ಸೇರಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ಮೂವರನ್ನೂ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು. ಎಡಪ್ಪಾಡಿ ಕೆ. ಪಳನಿಸಾಮಿ ವಿರುದ್ಧದ ತನ್ನ ರಾಜಕೀಯ ಸಮರಕ್ಕೆ ಡಿಎಂಕೆಯೇ ಸರಿಯಾದ ವೇದಿಕೆ ಎಂಬುದು ಒಪಿಎಸ್ ಅವರ ಹೊಸ ನಿಲುವು.

ಅಚ್ಚರಿ ಎಂದರೆ, ಜಯಲಲಿತಾ ಅವರ ಫೋಟೋ ಹಾಕಿದ್ದ ಕಾರಿನಲ್ಲೇ ಒಪಿಎಸ್, ಸ್ಟಾಲಿನ್ ಅವರನ್ನು ಭೇಟಿಯಾಗಿ ಪಕ್ಷದ ಸದಸ್ಯತ್ವ ಪಡೆಯಲು ಬಂದಿದ್ದರು. ಬಹಳ ಸಮಯದಿಂದ ಒಪಿಎಸ್, ಎಐಎಡಿಎಂಕೆ ಪಕ್ಷದಿಂದ ಹೊರಗುಳಿದಿದ್ದರು. ಮಧ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಸೇರಿದ್ದರೂ, ನಂತರ ಅದರಿಂದಲೂ ಹೊರಬಂದಿದ್ದರು. ತಮಿಳುನಾಡಿನಲ್ಲಿ ಎಐಎಡಿಎಂಕೆ, ಬಿಜೆಪಿಯ ಕೈಗೊಂಬೆಯಾಗಿದೆ ಎಂಬ ಆರೋಪಗಳಿದ್ದವು. ಕೊನೆಗೆ ಬಿಜೆಪಿ ಕೂಡ ಕೈಬಿಟ್ಟ ನಂತರ, ಒಪಿಎಸ್ ಈಗ ಡಿಎಂಕೆ ಬಾಗಿಲು ತಟ್ಟಿದ್ದಾರೆ.

ಆದರೆ, ರಾಜಕೀಯ ವಲಯದಲ್ಲಿ ಥೇಣಿ ಜಿಲ್ಲೆಯನ್ನು ಹೊರತುಪಡಿಸಿ ಒಪಿಎಸ್‌ಗೆ ಬೇರೆಲ್ಲೂ ಪ್ರಭಾವವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಪಕ್ಷದಿಂದ ಉಚ್ಚಾಟನೆಯಾದ ನಂತರ, ಎಐಎಡಿಎಂಕೆ ಪಕ್ಷಕ್ಕೆ ಮರಳಲು ಒಪಿಎಸ್ ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದರೆ, ಅವರ ಎಲ್ಲಾ ಪ್ರಯತ್ನಗಳಿಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸಾಮಿ ತಡೆಯೊಡ್ಡಿದ್ದರು.

ಒ.ಪನ್ನೀರ್‌ಸೆಲ್ವಂ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವುದಿಲ್ಲ ಎಂಬುದು ಪಳನಿಸಾಮಿ ಅವರ ಖಡಕ್ ನಿಲುವಾಗಿತ್ತು. "ಪಕ್ಷದ ಪ್ರಧಾನ ಕಚೇರಿ ಮೇಲೆ ದಾಳಿ ಮಾಡಿಸಿದ್ದು, ಪಕ್ಷವನ್ನು ಶತ್ರುಗಳ ಮುಂದೆ ಅಡವಿಟ್ಟಿದ್ದೇ ಪನ್ನೀರ್‌ಸೆಲ್ವಂ. ಅವರನ್ನು ಉಚ್ಚಾಟಿಸಿದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ," ಎಂದು ಎಡಪ್ಪಾಡಿ ಸ್ಪಷ್ಟಪಡಿಸಿದ್ದರು.