ಸಂಸದರ ನಿಧಿ ಬಳಸಿ ಮನೆ ಕಟ್ಟಿದೆ ಮಗನಿಗೆ ಮದ್ವೆ ಮಾಡಿದೆ ಎಂದ ಸಂಸದ: ವೀಡಿಯೋ ವೈರಲ್
BJP MP from Telangana ತಾನು ಸಂಸದರ ನಿಧಿ ಬಳಸಿ ಮನೆ ಕಟ್ಟಿದೆ, ಬಳಿಕ ಮಗನಿಗೆ ಮದುವೆ ಮಾಡಿಸಿದ್ದೆ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹೊಸ ವಿವಾದ ಸೃಷ್ಟಿಸಿದೆ.
ತೆಲಂಗಾಣ: ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳಿಗೆ ಸರ್ಕಾರದ ವತಿಯಿಂದ ಸಂಬಳ ಮಾತ್ರವಲ್ಲದೇ ಇಂತಿಷ್ಟು ಮೊತ್ತದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗುತ್ತದೆ. ಆ ಹಣವನ್ನು ಬಳಸಿಕೊಂಡು ಸಂಸದರು ತಮ್ಮ ಕ್ಷೇತ್ರದ ಯೋಜನೆಗಳಿಗೆ ಹಣ ನೀಡಿ ಅಭಿವೃದ್ಧಿ ಮಾಡಬಹುದು, ಸಾರ್ವಜನಿಕ ಶಾಲೆ ಕಾಲೇಜು ಆಸ್ಪತ್ರೆಗಳ ಅಭಿವೃದ್ಧಿಗೂ ಆ ಹಣವನ್ನು ಬಳಸಬಹುದು. ಆದರೆ ತೆಲಂಗಾಣದ ಬಿಜೆಪಿ ಸಂಸದರೊಬ್ಬರು ತಾನು ಸಂಸದರ ನಿಧಿ ಬಳಸಿ ಮನೆ ಕಟ್ಟಿದೆ, ಬಳಿಕ ಮಗನಿಗೆ ಮದುವೆ ಮಾಡಿಸಿದ್ದೆ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೇ ಹೊಸ ವಿವಾದ ಸೃಷ್ಟಿಸಿದೆ. ತೆಲಂಗಾಣದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಮಾಜಕ್ಕೆ ಬಳಸಬೇಕಿದ್ದ ನಿಧಿಯನ್ನು ಸ್ವ ಅಭಿವೃದ್ಧಿಗೆ ಬಳಸಿರುವುದಕ್ಕೆ ಸಂಸದರ ವಿರುದ್ಧ ಕೆಂಡಮಂಡಲರಾಗಿದ್ದಾರೆ.
ಅಂದಹಾಗೆ ಈ ರೀತಿ ಹೇಳಿಕೆ ನೀಡಿ ವಿವಾದಾಕ್ಕೀಡಾಗಿರುವ ಸಂಸದರ ಹೆಸರು ಸೋಯಂ ಬಾಪುರಾವ್, ತೆಲಂಗಾಣದ ಅದಿಲಾಬಾದ್ನ ಸಂಸದರಾಗಿರುವ ಇವರು, ಯಾವುದೇ ಮುಜುಗರವೂ ಇಲ್ಲದೇ ತಾನು ಸಂಸತ್ ಸದಸ್ಯರ ಸ್ಥಳೀಯಾಭಿವೃದ್ಧಿ ನಿಧಿ (MPLAD) ಯನ್ನು ಬಳಸಿ ಮನೆಯನ್ನು ಕಟ್ಟಿಸಿಕೊಂಡು ಮಗನಿಗೆ ಮದುವೆ ಮಾಡಿದೆ ಎಂದು ಹೇಳಿದ್ದಾರೆ.
ಸಂಸದರ ನಿಧಿ ಬಳಕೆ: ಈ ಬಾರಿಯೂ ಪ್ರತಾಪ್ ಸಿಂಹ ಫಸ್ಟ್, ಸಂಸದ ಬಚ್ಚೇಗೌಡ ದ್ವಿತೀಯ
ಬಿಜೆಪಿ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಸಂಸದರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ವೀಡಿಯೋ ಈಗ ತೆಲಂಗಾಣ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಬರೀ ಇಷ್ಟೇ ಅಲ್ಲದೇ ಈ ಸಂಸದ ಸೋಯಂ ಬಾಪು (Soyam Bapurao), ಸಂಸದರ ನಿಧಿಯನ್ನು ಸ್ವಂತಕ್ಕೆ ಬಳಸಿರುವುದರಲ್ಲಿ ತಪ್ಪೇನು ಇಲ್ಲ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ತಾನು ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಈ ಹಣವನ್ನು ಬಳಸಿಕೊಂಡಿಲ್ಲ ಎಂದು ಪ್ರಮಾಣಿಕವಾಗಿ ಒಪ್ಪಿಕೊಂಡಿರುವ ಅವರು ಇತರ ಕೆಲವು ಸಂಸದರಂತೆ ಹಣವನ್ನು ದುರುಪಯೋಗಪಡಿಸಿಕೊಂಡಿಲ್ಲಎಂದೂ ಕೂಡ ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆ ಆಗಿದೆ.
ನಾನು ಸಂಸದರ ನಿಧಿ (MP Fund) ಬಳಸಿ ಮನೆ ಕಟ್ಟಿಸಿಕೊಂಡೆ ಏಕೆಂದರೆ ಸ್ವಂತ ಮನೆ ಇಲ್ಲದಿದ್ದರೆ ನಿಮಗ್ಯಾರೂ ಗೌರವ ಕೊಡುವುದಿಲ್ಲ, ನಂತರ ನನ್ನ ಮಗನಿಗೆ ಸಂಸದರ ನಿಧಿ ಬಳಸಿ ಮದ್ವೆ ಮಾಡಿದೆ. ನಿಧಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಲ್ಲ ಎಂಬುದು ನಿಜವೇ ಆದರೂ ನಾನು ಬೇರೆಯವರಂತೆ ಹಣ ದುರ್ಬಳಕೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ತಾನು ಹೇಳುವಂತೆ ಯಾವ ಲೋಕಸಭಾ ಸದಸ್ಯನೂ ಹೇಳುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ದಿವಾಳಿಯ ಅಂಚಿನಲ್ಲಿದ್ದರೂ, ಸಂಸದರ ನಿಧಿಯನ್ನು ಏರಿಸಿದ ಪಾಕಿಸ್ತಾನ ಸರ್ಕಾರ!
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ವಿರೋಧಿ ಬಣಕ್ಕೆ ಹೊಸ ಅಸ್ತ್ರ ಸಿಕ್ಕಿದ್ದು, ಈ ಸಂಸದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆ ದೊಡ್ಡ ವಿವಾದಕ್ಕೀಡಾಗುತ್ತಿದ್ದಂತೆ ತಾನು ಸಂಸದರ ಹಣ ದುರ್ಬಳಕೆ ಮಾಡಿಲ್ಲ ಎಂದು ಸೋಯಂ ಬಾಪುರಾವ್ ಹೇಳಿದ್ದಾರೆ. ಅಲ್ಲದೇ ಅಂತರಿಕ ಸಭೆಯಲ್ಲಿ ಮಾತನಾಡಿದ ವಿಚಾರ ಸಾರ್ವಜನಿಕವಾಗಬಾರದು. ಈ ವೀಡಿಯೋ ಸೋರಿಕೆಯಾಗುವುದರ ಹಿಂದೆ ಬಿಜೆಪಿ ನಾಯಕರಾದ ರಮೇಶ್ ರಾಥೋಡ್ (Ramesh Rathod) ಹಾಗೂ ಪಾಯಲ್ ಶಂಕರ್ (Payala Shankar) ಇದ್ದಾರೆ. ಅವರಿಗೆ ತನ್ನ ಜನಪ್ರಿಯತೆ ನೋಡಲಾಗದೇ ಈ ಕೃತ್ಯವೆಸಗಿದ್ದಾರೆ ಎಂದು ಸಂಸದರು ದೂರಿದ್ದಾರೆ.