ಟಾಟಾ ಟ್ರಸ್ಟ್‌ನ ಮಾಜಿ ಟ್ರಸ್ಟಿ ಮೆಹ್ಲಿ ಮಿಸ್ತ್ರಿ, 'ಬಾಯಿ ಹೀರಾಬಾಯಿ' ಸಂಸ್ಥೆಗೆ ಪಾರ್ಸಿಗಳಲ್ಲದವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿದ್ದಾರೆ. 1923ರ ಟ್ರಸ್ಟ್ ಒಪ್ಪಂದದ ಉಲ್ಲಂಘನೆ ಎಂದು ಆರೋಪಿಸಿರುವ ಅವರು, ಇದು ಕಾನೂನುಬಾಹಿರವೆಂದು ಮಹಾರಾಷ್ಟ್ರ ಚಾರಿಟಿ ಕಮಿಷನರ್ ಬಳಿ ದೂರು ದಾಖಲಿಸಿದ್ದಾರೆ. 

ಮುಂಬೈ (ಏ.4): ಟಾಟಾ ಸಮೂಹದ ಆಡಳಿತ ಚುಕ್ಕಾಣಿ ಹಿಡಿದಿರುವ 'ಟಾಟಾ ಟ್ರಸ್ಟ್'ನಲ್ಲಿ ಈಗ ಜಾತಿ ಮತ್ತು ಧರ್ಮದ ಆಧಾರಿತ ಅರ್ಹತೆಯ ಸಂಘರ್ಷ ಶುರುವಾಗಿದೆ. ಟಾಟಾ ಟ್ರಸ್ಟ್‌ನ ಮಾಜಿ ಟ್ರಸ್ಟಿ ಮೆಹ್ಲಿ ಮಿಸ್ತ್ರಿ ಅವರು ಮಹಾರಾಷ್ಟ್ರ ಚಾರಿಟಿ ಕಮಿಷನರ್ ಮೊರೆ ಹೋಗಿದ್ದು, ಟ್ರಸ್ಟ್‌ನ ನಿಯಮಗಳನ್ನು ಗಾಳಿಗೆ ತೂರಿ ನೇಮಕಾತಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸರ್ ರತನ್ ಟಾಟಾ ಟ್ರಸ್ಟ್‌ನ ಅಂಗಸಂಸ್ಥೆಯಾದ 'ಬಾಯಿ ಹೀರಾಬಾಯಿ ಜಮ್‌ಸೆಟ್ಜಿ ಟಾಟಾ ನವಸಾರಿ ಚಾರಿಟಬಲ್ ಇನ್‌ಸ್ಟಿಟ್ಯೂಷನ್'ಗೆ ಸಂಬಂಧಿಸಿದಂತೆ ಈ ವಿವಾದ ಉಂಟಾಗಿದೆ. ಡಿಸೆಂಬರ್ 1923ರ ಟ್ರಸ್ಟ್ ಒಪ್ಪಂದದ (Trust Deed) ಪ್ರಕಾರ, ಈ ಸಂಸ್ಥೆಯ ಎಲ್ಲಾ ಟ್ರಸ್ಟಿಗಳು ಕಡ್ಡಾಯವಾಗಿ 'ಪಾರ್ಸಿ ಜೊರಾಸ್ಟ್ರಿಯನ್' ಸಮುದಾಯಕ್ಕೆ ಸೇರಿದವರಾಗಿರಬೇಕು.

ಆದರೆ, ಈ ನಿಯಮವನ್ನು ಉಲ್ಲಂಘಿಸಿ ಪಾರ್ಸಿಗಳಲ್ಲದ ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾನೂನುಬಾಹಿರ ಎಂದು ಮೆಹ್ಲಿ ಮಿಸ್ತ್ರಿ ವಾದಿಸಿದ್ದಾರೆ. ಈ ಅರ್ಜಿಯಲ್ಲಿ ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಸೇರಿದಂತೆ ಇತರ ಟ್ರಸ್ಟಿಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.

ಆರೋಪಗಳೇನು?

ಅರ್ಹತೆ ಇಲ್ಲದ ವ್ಯಕ್ತಿಗಳು ಟ್ರಸ್ಟಿಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಟ್ರಸ್ಟ್ ಒಪ್ಪಂದದ "ಸ್ಪಷ್ಟ ಉಲ್ಲಂಘನೆ" ಎಂದು ಮಿಸ್ತ್ರಿ ದೂರಿದ್ದಾರೆ. ಅನರ್ಹ ವ್ಯಕ್ತಿಗಳ ಉಪಸ್ಥಿತಿಯಲ್ಲಿ ತೆಗೆದುಕೊಂಡ ಎಲ್ಲಾ ನಿರ್ಧಾರಗಳು, ವಿಶೇಷವಾಗಿ ಅಕ್ಟೋಬರ್ 2025ರಲ್ಲಿ ತಮ್ಮ ಮರುನೇಮಕಕ್ಕೆ ಸಂಬಂಧಿಸಿದ ನಿರ್ಧಾರಗಳು ಅಸಿಂಧು ಎಂದು ಅವರು ಪ್ರತಿಪಾದಿಸಿದ್ದಾರೆ. ಟ್ರಸ್ಟ್‌ನಲ್ಲಿ ದುರಾಡಳಿತ ಮತ್ತು ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ನಿಯಂತ್ರಕ ಸಂಸ್ಥೆಗಳು ತಕ್ಷಣ ಮಧ್ಯಪ್ರವೇಶಿಸಿ ಉತ್ತರದಾಯಿತ್ವವನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಳೆಯ ಹಗೆತನದ ಹಿನ್ನೆಲೆ

ಮೆಹ್ಲಿ ಮಿಸ್ತ್ರಿ ಅವರು ಅಕ್ಟೋಬರ್ 2025ರಲ್ಲಿ ತಮ್ಮ ಅವಧಿ ಮುಗಿದ ನಂತರ ಟ್ರಸ್ಟ್‌ನಿಂದ ಹೊರಬಂದಿದ್ದರು. ಟಾಟಾ ಸನ್ಸ್ ಮಂಡಳಿಯಲ್ಲಿ ಮಾಹಿತಿ ಹಂಚಿಕೆ ಮತ್ತು ಆಡಳಿತದ ವಿಚಾರವಾಗಿ ಇತರೆ ಟ್ರಸ್ಟಿಗಳೊಂದಿಗೆ, ವಿಶೇಷವಾಗಿ ವಿಜಯ್ ಸಿಂಗ್ ಅವರೊಂದಿಗೆ ಮಿಸ್ತ್ರಿ ಅವರಿಗೆ ಭಿನ್ನಾಭಿಪ್ರಾಯವಿತ್ತು. ವಿಜಯ್ ಸಿಂಗ್ ಅವರನ್ನು ಟಾಟಾ ಸನ್ಸ್ ಮಂಡಳಿಯಿಂದ ತೆಗೆದುಹಾಕಲು ಮಿಸ್ತ್ರಿ ಪ್ರಯತ್ನಿಸಿದ್ದರು. ಇದರ ಬೆನ್ನಲ್ಲೇ ತಮ್ಮ ಮರುನೇಮಕವನ್ನು ತಡೆಹಿಡಿಯಲಾಗಿದ್ದು, ಇದು "ಸೇಡಿನ ಕ್ರಮ" ಎಂದು ಮಿಸ್ತ್ರಿ ಬಣ್ಣಿಸಿದ್ದಾರೆ.

ಏಕೆ ಈ ವಿವಾದ ಮುಖ್ಯ?

ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಒಟ್ಟಾಗಿ ಟಾಟಾ ಸಮೂಹದ ಮಾತೃಸಂಸ್ಥೆಯಾದ 'ಟಾಟಾ ಸನ್ಸ್'ನಲ್ಲಿ ಬಹುಪಾಲು ಪಾಲನ್ನು ಹೊಂದಿವೆ. ಹಾಗಾಗಿ, ಈ ಟ್ರಸ್ಟ್‌ಗಳಲ್ಲಿ ನಡೆಯುವ ಯಾವುದೇ ಕಾನೂನು ಸಂಘರ್ಷವು ಇಡೀ ಟಾಟಾ ಸಾಮ್ರಾಜ್ಯದ ಆಡಳಿತದ ಮೇಲೆ ಪ್ರಭಾವ ಬೀರುತ್ತದೆ. ಈಗ ಮಹಾರಾಷ್ಟ್ರ ಚಾರಿಟಿ ಕಮಿಷನರ್ ಈ ನೇಮಕಾತಿಗಳು 1923ರ ಟ್ರಸ್ಟ್ ಒಪ್ಪಂದಕ್ಕೆ ಅನುಗುಣವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಿದ್ದಾರೆ.