ಇಸ್ರೇಲ್ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಇಸ್ರೇಲ್ನ ಕಾನ್ಸುಲ್ ಜನರಲ್ ಯಾನಿವ್ ರೆವಾಕ್ ಘೋಷಿಸಿದ್ದಾರೆ. ಭಾರತ ಮತ್ತು ಯಹೂದಿ ಜನಾಂಗದ ಐತಿಹಾಸಿಕ ಹೋರಾಟಗಳ ನಡುವೆ ಸಾಮ್ಯತೆ ಇದೆ, ಈ ಹೆಜ್ಜೆ ಉಭಯ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲಿದೆಯೇ?
ಛತ್ರಪತಿ ಶಿವಾಜಿ (shivaji maharaj statue) ಪಟ್ಟಾಭಿಷೇಕ ದಿನದಂದೇ (ಶನಿವಾರ) ಮುಂಬೈನಲ್ಲಿರುವ ಇಸ್ರೇಲ್ನ ಕಾನ್ಸುಲ್ ಜನರಲ್ ಯಾನಿವ್ ರೆವಾಕ್ ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ಶಿವಾಜಿ ಮಹಾರಾಜರ ಪ್ರತಿಮೆಯೊಂದನ್ನು ನಿರ್ಮಿಸಿ, ಅದನ್ನು ಇಸ್ರೇಲ್ನಲ್ಲಿ ಸ್ಥಾಪಿಸಲು ಅನುಮತಿ ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಹಂಚಿಕೊಂಡ ಇತಿಹಾಸವೇ ಸ್ಫೂರ್ತಿ
ANI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರೆವಾಕ್, ಭಾರತ ಮತ್ತು ಇಸ್ರೇಲ್ ನಡುವಿನ ಸಾಮ್ಯತೆಗಳ ಬಗ್ಗೆ ತಿಳಿದುಕೊಂಡ ನಂತರ ತಮಗೆ ಈ ಯೋಚನೆ ಬಂತು ಎಂದು ಹೇಳಿದ್ದಾರೆ. ಮೊದಲಿಗೆ, ಇಂದು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿನ. ಈ ವಿಶೇಷ ದಿನದಂದು ನಾನು ಭಾರತದ ಜನರಿಗೆ ಶುಭಾಶಯ ಕೋರುತ್ತೇನೆ. ಕೆಲವು ತಿಂಗಳ ಹಿಂದೆ ನಾನು ಭಾರತಕ್ಕೆ ಬಂದಾಗ, ಭಾರತ ಮತ್ತು ಇಸ್ರೇಲ್ ನಡುವೆ ಇರುವ ಸಾಮ್ಯತೆಗಳ ಬಗ್ಗೆ ತಿಳಿದುಕೊಂಡೆ ಎಂದು ಅವರು ವಿವರಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿ ಬಳಿಕ ಇಸ್ರೇಲ್-ಭಾರತ ಸಂಬಂಧ
ಪ್ರಧಾನಿ ಮೋದಿ ಅವರ ಜೆರುಸಲೇಂ ಭೇಟಿಯ ನಂತರ, ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಲಾಯಿತು ಎಂದು ರೆವಾಕ್ ಹೇಳಿದ್ದಾರೆ. 'ಭಾರತ-ಇಸ್ರೇಲ್ ಎರಡೂ ದೇಶಗಳು ತಮ್ಮ ನೆಲಕ್ಕಾಗಿ ಹೋರಾಡಬೇಕಾಯಿತು. ಯಹೂದಿಗಳು ಕೂಡ ದಶಕಗಳ ಕಾಲ ತಮ್ಮ ಭೂಮಿಗಾಗಿ ಹೋರಾಡಿದ್ದಾರೆ. ಹಾಗಾಗಿಯೇ, ಭಾರತಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಪ್ರಭಾವ ಮತ್ತು ಮಹತ್ವ ಏನೆಂದು ನಮಗೆ ಚೆನ್ನಾಗಿ ಅರ್ಥವಾಗುತ್ತದೆ. ಭಾರತದಲ್ಲಿ ದೊಡ್ಡ ಯೋಜನೆ ಮಾಡುವುದಕ್ಕಿಂತ, ಭಾರತೀಯರಿಗೆ ಒಂದು ಸದ್ಭಾವನೆಯ ಸಂಕೇತವಾಗಿ ಏನಾದರೂ ಮಾಡಬೇಕೆಂದು ನಾವು ನಿರ್ಧರಿಸಿದೆವು ಎಂದು ಅವರು ಹೇಳಿದ್ದಾರೆ.
ಜನರನ್ನು ಬೆಸೆಯುವ ಯೋಜನೆ
ಈ ಯೋಜನೆಯು ಭಾರತೀಯರನ್ನು ಇಸ್ರೇಲಿಗರೊಂದಿಗೆ ಬೆಸೆಯಲಿದೆ ಎಂದು ರೆವಾಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ಶಿವಾಜಿ ಮಹಾರಾಜರ ಒಂದು ದೊಡ್ಡ ಪ್ರತಿಮೆಯನ್ನು ನಿರ್ಮಿಸಿ ಇಸ್ರೇಲ್ಗೆ ಕಳುಹಿಸುವುದು ನಮ್ಮ ಆಲೋಚನೆ. ಇದು ಕೇವಲ ಒಂದು ಸಾಮಾನ್ಯ ಯೋಜನೆಯಾಗದೆ, ದೀರ್ಘಕಾಲ ಉಳಿಯುವಂತಹದ್ದಾಗಿರಲಿದೆ. ಈ ಯೋಜನೆಯ ಮೂಲಕ ಭಾರತದ ಜನರು ಇಸ್ರೇಲ್ ಜನರೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ. ಇದಕ್ಕಾಗಿಯೇ ನಾನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಕಚೇರಿಗೆ ಬಂದು, ಅವರ ಸಲಹೆ ಕೇಳಿದೆ. ಅವರು ತಕ್ಷಣವೇ ತಮ್ಮ ಒಪ್ಪಿಗೆ ಸೂಚಿಸಿ, ನಮಗೆ ಬೇಕಾದ ಎಲ್ಲ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ' ಎಂದು ರೆವಾಕ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ
ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಫಡ್ನವಿಸ್ ಭರವಸೆ ನೀಡಿದ್ದಾರೆ. ಈ ಬಗ್ಗೆ ಜೂನ್ 6, 2026 ರಂದು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಅವರು, 'ಇದು ಒಂದು ದೊಡ್ಡ ಸುದ್ದಿ! #ShivRajyabhishek ದಿನದ ಈ ಶುಭ ಸಂದರ್ಭದಲ್ಲಿ, ಇಸ್ರೇಲ್ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆ ಸ್ಥಾಪಿಸುವ ಐತಿಹಾಸಿಕ ಘೋಷಣೆ ಮಾಡಿದ್ದಕ್ಕಾಗಿ ಇಸ್ರೇಲ್ನ ಕಾನ್ಸುಲ್ ಜನರಲ್ ಯಾನಿವ್ ರೆವಾಕ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಐತಿಹಾಸಿಕ ಯೋಜನೆಗೆ ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಜೈ ಭವಾನಿ, ಜೈ ಶಿವಾಜಿ! ಎಂದು ಬರೆದುಕೊಂಡಿದ್ದಾರೆ. (ANI)

