ಕಾರ್ಯಕರ್ತರ ಮೇಲೆಯೇ ಕಲ್ಲೆಸೆದ ತಮಿಳುನಾಡಿನ ಸಚಿವ: ವಿಡಿಯೋ ವೈರಲ್
ಇಲ್ಲೊಂದು ಕಡೆ ಸ್ವತಃ ಸಚಿವರೇ ಕಾರ್ಯಕರ್ತರತ್ತ ಕಲ್ಲು ತೂರಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಚೆನ್ನೈ: ಕಾರ್ಯಕರ್ತರು ಯಾವುದೇ ರಾಜಕೀಯ ಪಕ್ಷದ ಪ್ರಮುಖ ಆಸ್ತಿ. ಚುನಾವಣೆ ಇರಲಿ ಇಲ್ಲದಿರಲಿ ಊರೂರು ಗಲ್ಲಿ ಗಲ್ಲಿ ಮನೆ ಮನೆಗೆ ತೆರಳಿ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ಪರ ಪಕ್ಷದ ನಿಲವುಗಳ ಪರ ಆಗಾಗ ಪ್ರಚಾರ ಮಾಡುತ್ತಲೇ ಇರುತ್ತಾರೆ. ಪಕ್ಷದ ನಾಯಕರ ಸೋಲು ಗೆಲುವಿನ ಹಿಂದೆ ಸಾಮಾನ್ಯ ಕಾರ್ಯಕರ್ತನ ಬೆವರ ಹನಿ ಇದೆ. ಪಕ್ಷಕ್ಕಾಗಿ ನಿಸ್ವಾರ್ಥವಾಗಿ ದುಡಿಯುವ ತಳಮಟ್ಟದ ಕಾರ್ಯಕರ್ತರನ್ನು ಯಾವ ಪಕ್ಷಗಳು ಕಡೆಗಣನೆ ಮಾಡುವುದಿಲ್ಲ. ಕಡೆಗಣನೆ ಮಾಡಿದ ಸಂದರ್ಭದಲ್ಲೆಲ್ಲಾ ಸೋಲಿನ ರುಚಿಯನ್ನು ಯಾವುದೇ ಪಕ್ಷವಾಗಲಿ ನೋಡಿದೆ ನೋಡುತ್ತಿರುತ್ತದೆ. ಇದಕ್ಕೆ ಹಲವು ಉದಾಹರಣೆಗಳಿವೆ. ಆದರೆ ಇಲ್ಲೊಂದು ಕಡೆ ಸ್ವತಃ ಸಚಿವರೇ ಕಾರ್ಯಕರ್ತರತ್ತ ಕಲ್ಲು ತೂರಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಯ (DMK party) ನಾಯಕ ಹಾಗೂ ತಮಿಳುನಾಡಿನ ಹಾಲು ಹಾಗೂ ಡೈರಿ ಅಭಿವೃದ್ಧಿ (Milk and Dairy Development) ಸಚಿವ ಎಸ್ಎಂ ನಸರ್ (SM Nasar) ಎಂಬುವವರೇ ಹೀಗೆ ಕಾರ್ಯಕರ್ತರ ಮೇಲೆ ಕಲ್ಲೆಸೆದವರು. ಸಚಿವರಿಗೆ ಚೇರು ನೀಡಲು ವಿಳಂಬ ಮಾಡಿದ ಕಾರಣಕ್ಕೆ ಸಿಟ್ಟಿಗೆದ್ದು ಸಚಿವರು ನೆಲದಿಂದ ಕಲ್ಲು ಹೆಕ್ಕಿ ಕಾರ್ಯಕರ್ತರತ್ತ (party worker) ಎಸೆದಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದ್ದು, ಘಟನೆಯ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ ಪಕ್ಷದ ಕಾರ್ಯಕರ್ತರ ಬಗ್ಗೆ ಕಿರಿಕಿರಿಗೊಂಡ ಸಚಿವರು ಕಲ್ಲೆತ್ತಿ ಎಸೆದಿದ್ದಾರೆ. ಅಲ್ಲದೇ ಚೇರು ನೀಡಲು ತುಂಬಾ ವಿಳಂಬ ಮಾಡಿದ್ದಕ್ಕೆ ಕಾರ್ಯಕರ್ತರಿಗೆ ಬಯ್ಯುತ್ತಿರುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವೇಳೆ ಸಚಿವರ ಹಿಂದೆ ನಿಂತಿರುವ ಕೆಲವರು ನಗುತ್ತಿರುವುದು ಕಾಣಿಸುತ್ತಿದೆ.
ಮಹಿಳಾ ಕಾನ್ಸ್ಟೇಬಲ್ಗೆ ಡಿಎಂಕೆ ಕಾರ್ಯಕರ್ತರ ಕಿರುಕುಳ: ಡಿಎಂಕೆ ಸಭೆಯಲ್ಲಿ ಗದ್ದಲ; ಅಣ್ಣಾಮಲೈ ಟೀಕೆ
ಆದರೆ ಬಿಜೆಪಿ ಸಚಿವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ. ಡಿಎಂಕೆ ಸಚಿವರು ಕಾರ್ಯಕರ್ತರಿಗೆ ಅಗೌರವ ತೋರಿದೆ ಎಂದು ಬಿಜೆಪಿ ದೂರಿದೆ. ತಮಿಳುನಾಡು (Tamil Nadu) ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಈ ಬಗ್ಗೆ ಟ್ವಿಟ್ ಮಾಡಿದ್ದು ಭಾರತದ ಇತಿಹಾಸದಲ್ಲಿ ಯಾರಾದರೂ ಸಚಿವರು ಜನರತ್ತ ಕಲ್ಲೆಸೆದಿದ್ದನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದ ಅವರು, ಕಲ್ಲೆಸೆದ ಸಚಿವರನ್ನು ಟ್ಯಾಗ್ ಮಾಡಿಕೊಂಡು ಅವಧಿ ನಸರ್ ಜನರ ಮೇಲೆ ಆಕ್ರೋಶದಿಂದ ಕಲ್ಲೆಸೆದಿದ್ದಾರೆ. ಇವರಿಗೆ ಶಿಶ್ತು, ಸಂಶಯಮ ಎಂಬುದಿಲ್ಲ, ಕಾರ್ಯಕರ್ತರನ್ನು ಕೂಲಿಯಾಳುಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಇದು ಡಿಎಂಕೆ ನಿಮಗಾಗಿ ಎಂದು ಅಣ್ಣಾಮಲೈ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರು ಕೂಡ ಸಚಿವರ ಈ ಕೃತ್ಯವನ್ನು ಖಂಡಿಸಿದ್ದಾರೆ. ಸಚಿವರಿಗೆ ಹೋಲಿಸಿದರೆ ರೌಡಿಗಳೇ ಡೀಸೆಂಟ್ ಆಗಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಡಿಎಂಕೆ ಧ್ವಜ ತೆರವು ವೇಳೆ ವಿದ್ಯುತ್ ಸ್ಪರ್ಶ: ಕಾರ್ಯಕರ್ತ ಸಾವು