ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಆರೋಗ್ಯ ಹದಗೆಟ್ಟು ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ. ಉಸಿರಾಟ ಸಮಸ್ಯೆ, ಕೆಮ್ಮು ಸೇರಿದಂತೆ ಅಸ್ವಸ್ಥತೆಯಿಂದ ಬಳಲಿರುವ ಅಣ್ಣಾಮಲೈಗೆ ವಿಶ್ರಾಂತಿಗೆ ಸೂಚಿಸಲಾಗಿದೆ. ಹೀಗಾಗಿ ಎನ್ ಮಣ್ಣ್, ಎನ್ ಮಕ್ಕಳ್ ಪಾದಯಾತ್ರೆ ಮುಂದೂಡಲಾಗಿದೆ. 

ಚೆನ್ನೈ(ಅ.04) ತಮಿಳುನಾಡಿನಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿರುವ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಈಗಾಗಲೇ ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ. ಎನ್ ಮಣ್ಣ್, ಎನ್ ಮಕ್ಕಳ್ ಎಂಬ ಪಾದಯಾತ್ರೆ ಈಗಾಗಲೇ ಮೂರು ಚರಣಗಳನ್ನು ಪೂರೈಸಿದೆ. ಸರಿಸುಮಾರು 5 ತಿಂಗಳ ಬೃಹತ್ ಪಾದಯಾತ್ರೆ ತಮಿಳುನಾಡಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹಾದುಹೋಗಲಿದೆ. ಪಾದಯಾತ್ರೆ, ಪಕ್ಷ ಸಂಘಟನೆ, ದೆಹಲಿ ಭೇಟಿ ಸೇರಿದಂತೆ ಸತತ ಕಾರ್ಯಕ್ರಮಗಳಿಂದ ಬ್ಯೂಸಿಯಾಗಿರುವ ಕೆ ಅಣ್ಣಾಮಲೈ ಆರೋಗ್ಯ ಹದಗೆಟ್ಟಿದೆ. ಕೆಮ್ಮು, ಗಂಟಲು ನೋವು, ಉಸಿರಾಟದ ಸಮಸ್ಯೆಯಿಂದ ಅಣ್ಣಾಮಲೈ ಚೆನ್ನೈನ ಗ್ಲೆನೆಗೆಲ್ ಗ್ಲೋಬಲ್ ಸಿಟಿ ಹೆಲ್ತ್ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅಣ್ಣಾಮಲೈಗೆ ವೈದ್ಯರು ವಿಶ್ರಾಂತಿ ಸೂಚಿರುವ ಕಾರಣ, ಇದೀಗ ಮುಂದಿನ ಚರಣದ ಪಾದಯಾತ್ರೆಯನ್ನು ಮುಂದೂಡಲಾಗಿದೆ.

Add Asianetnews Kannada as a Preferred SourcegooglePreferred

ಗಂಟಲು ನೋವು, ಶೀತ, ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲಿದ ಅಣ್ಣಾಮಲೈಗೆ ನುರಿತ ತಜ್ಞರ ತಂಡ ಚಿಕಿತ್ಸೆ ನೀಡಿದೆ. ಸಿಟಿ ಸ್ಕಾನ್ ಸೇರಿದಂತೆ ಇತರ ಪರೀಕ್ಷೆಗಳನ್ನು ನಡೆಸಲಾಗಿತ್ತು. ಎರಡ ಶ್ವಾಸಕೋಶದಲ್ಲಿ ಕೆಲ ಆರೋಗ್ಯ ಸಮಸ್ಯೆಗಳಿರುವುದು ಪತ್ತೆಯಾಗಿದೆ. ಈ ಕುರಿತು ಚಿಕಿತ್ಸೆ ನೀಡಲಾಗಿದೆ. ಇದೀಗ ಅಣ್ಣಾಮಲೈಗೆ ಮನೆಗೆ ಹಿಂತಿರುಗಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ.

ಅಣ್ಣಾಮಲೈಯಿಂದ ಪಕ್ಷಕ್ಕೆ ಅವಮಾನ, ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಮೈತ್ರಿ ಮುರಿದ ಎಐಎಡಿಎಂಕೆ!

ಅಣ್ಣಾಮಲೈ ಆರೋಗ್ಯದ ಕುರಿತು ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 39 ವರ್ಷದ ಅಣ್ಣಾಮಲೈ, 3ನೇ ಅಕ್ಟೋಬರ್ ಸಂಜನೆ ಗ್ಲೋಬಲ್ ಸಿಟಿ ಹೆಲ್ತ್ ಆಸ್ಪತ್ರೆ ದಾಖಲಾಗಿದ್ದಾರೆ. ಕೆಲ ಆರೋಗ್ಯ ಸಮಸ್ಯೆ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೀತ, ಕೆಮ್ಮು, ಉಸಿರಾಟದ ಸಮಸ್ಯೆ ಸೇರಿದಂತೆ ಇತರ ಕೆಲ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ತಕ್ಷಣವೇ ಅಣ್ಣಾಮಲೈ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸಿಟಿ ಸ್ಕಾನ್ ಸೇರಿದಂತೆ ಇತರ ಕೆಲ ಪರೀಕ್ಷೆಗಳನ್ನು ನಡೆಸಲಾಗಿದೆ. ಎಡ ಶ್ವಾಸಕೋಶದಲ್ಲಿ ಇನ್‌ಫೆಕ್ಷನ್ ಆಗಿರುವುದು ಗಮನಕ್ಕೆ ಬಂದಿದೆ. ಅಣ್ಣಾಮಲೈ ಆರೋಗ್ಯ ಚೇತರಿಕೆಗೆ ಸೂಕ್ತ ವೈದ್ಯಕೀಯ ಔಷಧಗಳನ್ನು ನೀಡಲಾಗಿದೆ. 5 ದಿನಗಳ ಕಾಲ ಔಷಧ ಸೇವಿಸಲು ಸೂಚಿಸಲಾಗಿದೆ. ಬಳಿಕ ಅಣ್ಣಾಮಲೈಗೆ ಮನೆಯಲ್ಲಿ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. 5 ದಿನಗಳ ಬಳಿಕ ಮತ್ತೆ ಆಸ್ಪತ್ರೆಗೆ ಆಗಮಿಸಿ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ಕನಿಷ್ಠ 2 ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಲಾಗಿದೆ ಎಂದು ಗ್ಲೋಬಲ್ ಹೆಲ್ತ್ ಆಸ್ಪತ್ರೆ ಆಡಳಿತ ಮಂಡಳಿ ಹೆಲ್ತ್ ಬುಲೆಟ್‌ನಲ್ಲಿ ಹೇಳಿದೆ.

ರಾಹುಲ್‌ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ ಉದಯನಿಧಿ ದಕ್ಷಿಣ ಭಾರತದ ಪಪ್ಪು: ಅಣ್ಣಾಮಲೈ ವ್ಯಂಗ್ಯ

ಕನಿಷ್ಠ 2 ವಾರಗಳ ಕಾಲ ಅಣ್ಣಾಮಲೈ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರ ಹಾಗೂ 39 ಲೋಕಸಭಾ ಕ್ಷೇತ್ರಗಳಲ್ಲಿ ಹಾದು ಹೋಗಲಿದೆ. ಈಗಾಗಲೇ ಪ್ರಮುಖ ಮೂರು ಚರಣದ ಪಾದಯಾತ್ರೆ ಮುಗಿಸಿದ್ದಾರೆ. ನಿಗಧಿತ ಪ್ರಕಾರ 2024ರ ಜನವರಿ 11ರಂದು ಪಾದಯಾತ್ರೆ ಅಂತ್ಯಗೊಳ್ಳಬೇಕಿತ್ತು. ಆದರೆ ಇದೀಗ 2 ವಾರಗಳ ಕಾಲ ವಿಶ್ರಾಂತಿ ಸೂಚಿಸಿರುವ ಕಾರಣ ಈ ಪಾದಯಾತ್ರೆ ಅಂತ್ಯಗೊಳ್ಳುವ ದಿನಾಂಕ ಬದಲಾವಣೆಯಾಗಲಿದೆ.

ಸರಿಸುಮಾರು 6 ತಿಂಗಳ ಕಾಲ ನಡೆಯಲಿರುವ ಈ ಪಾದಯಾತ್ರೆಯಲ್ಲಿ ಅಣ್ಣಾಮಲೈ ಬರೋಬ್ಬರಿ 1,770 ಕಿಲೋಮೀಟರ್ ಪಾದಯಾತ್ರೆ ಮೂಲಕ ಸಾಗಲಿದ್ದಾರೆ. ಇನ್ನು ಕೆಲ ಗ್ರಾಮೀಣ ಪ್ರದೇಶಗಳಿಗೆ ವಾಹನದ ಮೂಲಕ ತೆರಳಲಿದ್ದಾರೆ.