ಗ್ಯಾನವಾಪಿ ವಿವಾದ ಪ್ರಕರಣದಲ್ಲಿ ಇದೀಗ ಮಸೀದಿ ಸಮಿತಿಗೆ ಸಣ್ಣ ರಿಲೀಫ್ ಸಿಕ್ಕಿದೆ. ವಾರಣಾಸಿ ಕೋರ್ಟ್ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಗ್ಯಾನವಾಪಿ ಮಸೀದಿ ಸರ್ವೆಗೆ ಸುಪ್ರೀಂ ಕೋರ್ಟ್ ಎರಡು ದಿನಗಳ ಕಾಲ ತಡೆ ನೀಡಿದೆ.

ನವದೆಹಲಿ(ಜು.24) : ಗ್ಯಾನವಾಪಿ ಮಸೀದಿ ಸರ್ವೆಗೆ ವಿಚಾರದಲ್ಲಿ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಇದೀಗ ಮುಸ್ಲಿಮ್ ಸಮಿತಿಗೆ ರಿಲೀಫ್ ಸಿಕ್ಕಿದೆ. ವಾರಣಾಸಿ ಕೋರ್ಟ್ ನೀಡಿದ್ದ ಸರ್ವೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಎರಡು ದಿನಗಳ ಕಾಲ ಸರ್ವೆ ನಡೆಸದಂತೆ ಪುರಾತತ್ವ ಇಲಾಖೆಗೆ ಸೂಚನೆ ನೀಡಿದೆ. ಇಷ್ಟೇ ಅಲ್ಲ ಮುಸ್ಲಿಮ್ ಸಮಿತಿಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಎರಡು ದಿನಗಳ‌ಕಾಲಾವಕಾಶ ನೀಡಿದೆ. 

ಗ್ಯಾನವಾಪಿ ಮಸೀದಿಯ ಜಿಪಿಆರ್‌ (ಗ್ರೌಂಡ್‌ ಪೆನೆಟೆರೇಟಿಂಗ್‌ ರಾಡಾರ್‌) ಸರ್ವೇ ನಡೆಸಲು ವಾರಾಣಾಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿತ್ತು. ಈ ಸಮೀಕ್ಷೆಯ ಮೂಲಕ ಈ ಮೊದಲು ಇದರ ನಿರ್ಮಾಣ ವಿನ್ಯಾಸ ಏನಿತ್ತು. ಅದನ್ನು ಮರು ನಿರ್ಮಾಣ ಮಾಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಆದರೆ ಈ ಸಮೀಕ್ಷೆಯಲ್ಲಿ ಹಿಂದೂಗಳು ಶಿವಲಿಂಗ ಎಂದು ವಾದಿಸುತ್ತಿರುವ ಪ್ರದೇಶವನ್ನು ಕೈಬಿಡುವಂತೆಯೂ ಕೋರ್ಚ್‌ ಸೂಚಿಸಿತ್ತು. ಇದರಂತೆ ಪುರಾತತ್ವ ಇಲಾಖೆ ಸಮೀಕ್ಷೆಗೆ ಇಂದು ಭಾರಿ ಭದ್ರತೆಯೊಂದಿಗೆ ಗ್ಯಾನವಾಪಿ ಮಸೀದಿಗೆ ಆಗಮಿಸಿತ್ತು. ಆದರೆ ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಮುಸ್ಲಿಮ್ ಸಮಿತಿ ಸರ್ವೆಗೆ ತಡೆಕೋರಲು ಮನವಿ ಮಾಡಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 2 ದಿನಗಳ ಕಾಲ ಸರ್ವೆಗೆ ತಡೆ ನೀಡಿದೆ.

ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?

ಸರ್ವೆಗೆ ತಡೆ ನೀಡಲು ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಮಸೀದಿ ಮುಸ್ಲಿಮ್ ಆಡಳಿತ ಮಂಡಳಿಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಾರಣಾಸಿ ಕೋರ್ಟ್ ನೀಡಿದ್ದ ಸರ್ವೆ ಆದೇಶವನ್ನು ಪ್ರಶ್ನಿಸಲು ಅವಕಾಶ ನೀಡಿದೆ. ಗ್ಯಾನವಾಪಿ ಮಸೀದಿ ಸರ್ವೆ ಪ್ರಕರಣದ ಕುರಿತು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಮುಸ್ಲಿಮ್ ಸಮಿತಿಗೆ ಸೂಚಿಸಿದೆ. ಇತ್ತ ಸರ್ವೆ ಕಾರ್ಯವನ್ನು ಬುಧವಾರ ಸಂಜೆ 5 ಗಂಟೆವರೆಗೆ ನಿರ್ಬಂಧಿಸಿದೆ. ಇತ್ತ ಮುಸ್ಲಿಮ್ ಸಮಿತಿ ಅರಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಒಂದು ವಾರ ಕಾಲವಕಾಶ ನೀಡಲಾಗಿದೆ.

ವಾರಣಾಸಿ ಕೋರ್ಟ್ ಆದೇಶದ ಬಳಿಕ ಇಂದು ಪುರಾತತ್ವ ಇಲಾಖೆಯ 30 ಅಧಿಕಾರಿಗಳ ತಂಡ ಗ್ಯಾನವಾಪಿ ಮಸೀದಿಗೆ ಆಗಮಿಸಿ ಸರ್ವೆ ಕಾರ್ಯ ಆರಂಭಿಸಿತ್ತು. ಭಾರಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಇತ್ತ ಮುಸ್ಲಿಮ್ ಸಮಿತಿ ಸಮೀಕ್ಷೆಯನ್ನು ಬಹಿಷ್ಕರಿಸಿತ್ತು. 

'ನನಗೆ ಕಿರುಕುಳ ನೀಡ್ತಿದ್ದಾರೆ..' ಜ್ಞಾನವಾಪಿ ಪ್ರಕರಣದಿಂದ ಹಿಂದೆ ಸರಿಯಲು ಮುಂದಾದ ಹಿಂದೂ ಅರ್ಜಿದಾರರು!

ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಗ್ಯಾನವಾಪಿ ಮಸೀದಿಯಲ್ಲಿ ಪುರಾತನ ಹಿಂದೂ ದೇವಾಲಯದ ಚಿಹ್ನೆಗಳಿವೆ ಎಂದು ವಾದಿಸಿ ನಾಲ್ವರು ಮಹಿಳಾ ಆರಾಧಕರು ಈ ವರ್ಷ ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರು. ತಮಗೆ ಹಿಂದೂ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಸ್ಥಳದಲ್ಲಿ ಸ್ವಯಂಭೂ ಜ್ಯೋತಿರ್ಲಿಂಗವು ಅನಾದಿ ಕಾಲದಿಂದ ಅಸ್ತಿತ್ವದಲ್ಲಿದೆ ಎಂದು ಅರ್ಜಿಯಲ್ಲಿ ಹೇಳಿದ್ದರು. ಆದರೆ ಕ್ರಿ.ಶ.1017ರ ನಂತರ ಮೊಹಮ್ಮದ್‌ ಘಜ್ನಿ ದಾಳಿ ಆರಂಭಿಸಿದ ನಂತರ ಅನೇಕ ಹಿಂದೂ ದ್ವೇಷಿ ಮುಸ್ಲಿಂ ಅರಸರು ಅದನ್ನು ಧ್ವಂಸಗೊಳಿಸಿದ್ದರು ಎಂದಿದ್ದರು.

‘ಇನ್ನು ಅತ್ಯಂತ ಮತಾಂಧ ಮತ್ತು ಕ್ರೂರ ಮೊಘಲ… ಚಕ್ರವರ್ತಿಗಳಲ್ಲಿ ಒಬ್ಬನಾದ ಔರಂಗಜೇಬ್‌ 1669ರಲ್ಲಿ ‘ಆದಿ ವಿಶ್ವೇಶ್ವರ ದೇವಾಲಯ’ವನ್ನು ಕೆಡವಲು ಫರ್ಮಾನು ಹೊರಡಿಸಿದ್ದ ಮತ್ತು ಆತನ ಆಜ್ಞೆ ಮೇರೆಗೆ ಆತನ ಸೈನಿಕರು ದೇವಾಲಯ ಬೀಳಿಸಿದ್ದರು. ಅದೇ ಸ್ಥಳದಲ್ಲಿ ಈಗಿನ ಗ್ಯಾನವಾಪಿ ಮಸೀದಿ ನಿರ್ಮಿಸಲಾಗಿತ್ತು’ ಎಂದು ಹೇಳಿದ್ದರು. ಬಳಿಕ ಹಿಂದೂ ದಾವೇದಾರ ವಿಷ್ಣುಶಂಕರ ಜೈನ್‌ ಅವರು, ಇದನ್ನೇ ಆಧಾರವಾಗಿ ಇರಿಸಿಕೊಂಡು ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಕಟ್ಟಡದ ಹಿನ್ನೆಲೆ ಗೊತ್ತಾಗುತ್ತದೆ ಎಂದು ಕೋರ್ಚ್‌ ಮೊರೆ ಹೋಗಿದ್ದರು.