ಕೆಎಸ್‌ಆರ್‌ಟಿಸಿ 295 ಕೋಟಿ ನಷ್ಟದಲ್ಲಿದ್ದು, ಟಿಕೆಟ್ ದರ ಏರಿಕೆ ಮಾಡಿದೆ. ಶಕ್ತಿ ಯೋಜನೆ ಹಾಗೂ ಸುಪ್ರೀಂ ಕೋರ್ಟ್‌ನಿಂದ ಖಾಸಗಿ ಬಸ್‌ಗಳಿಗೆ ಎಲ್ಲಾ ಮಾರ್ಗಗಳಲ್ಲಿ ಸಂಚರಿಸಲು ಅವಕಾಶ ದೊರೆತಿದೆ. ಇದು ಕೆಎಸ್‌ಆರ್‌ಟಿಸಿಗೆ ಹೊಸ ಸ್ಪರ್ಧೆ ಒಡ್ಡಿದ್ದು, ಪ್ರಯಾಣಿಕರನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಇದಾಗಲೇ ಗ್ಯಾರೆಂಟಿಯ ಸುಳಿಯಲ್ಲಿ ಸಿಲುಕಿ ಕೆಎಸ್​ಆರ್​ಟಿಸಿಗೆ ಭಾರಿ ನಷ್ಟ ಉಂಟಾಗಿರುವ ವಿಷಯ ಇದಾಗಲೇ ಬೆಳಕಿಗೆ ಬಂದಿದೆ. ಕಳೆದ ಡಿಸೆಂಬರ್​ನಲ್ಲಿ ಕೆಎಸ್​ಆರ್​ಟಿಸಿ 295 ಕೋಟಿ ನಷ್ಟ ಆಗಿದೆ ಎಂದು ತೋರಿಸಿದೆ. ಅದೇ ಇನ್ನೊಂದೆಡೆ, ಇದಾಗಲೇ ಚಾಲಕರು ಮತ್ತು ನಿರ್ವಾಹಕರು ಸಂಬಳ ಹೆಚ್ಚಳಕ್ಕೆ ಪ್ರತಿಭಟನೆಯನ್ನೂ ಮಾಡಿಯಾಗಿದೆ. ಇವೆಲ್ಲ ಹೊಡೆತಕ್ಕೆ ಸಿಕ್ಕಿ ಬಸ್ಸಿನ ಟಿಕೆಟ್​ ದರವನ್ನು ದಿಢೀರ್​ನೆ ಏರಿಸಿ, ನಷ್ಟವನ್ನು ತುಂಬಿಸಿಕೊಳ್ಳುವ ಪ್ರಯತ್ನದಲ್ಲಿದೆ ಕೆಎಸ್​​ಆರ್​ಟಿಸಿ. ಒಂದೆಡೆ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟು, ದೂರದ ಊರುಗಳಿಗೆ ಹೋಗುವ ರಾಜಹಂಸ, ಸ್ಲೀಪರ್​ ಕೋಚ್​ ಬಸ್​​ಗಳಿಗೆ ಒಂದೂವರೆ ಪಟ್ಟು ರೇಟ್​ ಆಗಿದೆ. ಕೆಲವು ಊರುಗಳಿಗೆ ಇದ್ದ ರಾಜಹಂಸ ಬಸ್​ ಅನ್ನು ರದ್ದು ಮಾಡಿ, ಸ್ಲೀಪರ್​ ಕೋಚ್​ ಹಾಕುವ ಮೂಲಕ, ಈ ಹೆಚ್ಚುವರಿ ಹಣ ತೆರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Add Asianetnews Kannada as a Preferred SourcegooglePreferred

ಇದಾಗಲೇ, ಕೆಎಸ್​ಆರ್​ಟಿಸಿ ಬಸ್​ ದರಕ್ಕೆ ಪೈಪೋಟಿ ನೀಡುತ್ತಿರುವ ಕೆಲವು ಖಾಸಗಿ ಬಸ್​ಗಳು, ಅದಕ್ಕಿಂತ ಕಡಿಮೆ ದರವನ್ನು ಇಟ್ಟು, ಪ್ರಯಾಣಿಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ಇವೆಲ್ಲವುಗಳ ನಡುವೆಯೇ, ಕೆಎಸ್​ಆರ್​ಟಿಸಿಗೆ ಬಿಗ್​ ಶಾಕ್​ ಒಂದನ್ನು ಸುಪ್ರೀಂಕೋರ್ಟ್​ ನೀಡಿದೆ. 2003ರಲ್ಲಿ ಎಸ್​.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾರಿಗೆ ಬಸ್​ಗೆ ಸಂಬಂಧಿಸಿದಂತೆ ಇದ್ದ ಕಾಯ್ದೆಗೆ ಸುಪ್ರೀಂಕೋರ್ಟ್​ ಅಸ್ತು ಎಂದಿದೆ. ಈ ಮೂಲಕ KSRTCಯ ಏಕಸ್ವಾಮ್ಯವನ್ನು ತೆಗೆದುಹಾಕಿದೆ.

ಗೃಹ ಸಾಲ ಇದ್ಯಾ? ಪಡೆಯೋ ಪ್ಲ್ಯಾನ್​ ಮಾಡಿದ್ದೀರಾ? RBI ಹೊಸ ರೂಲ್ಸ್​ನಿಂದ EMI ಎಷ್ಟು ಕಡಿಮೆ ಆಗತ್ತೆ ನೋಡಿ!

ಇದರ ಬಗ್ಗೆ ಸುಲಭದಲ್ಲಿ ಹೇಳಬೇಕು ಎಂದಾದರೆ, ಇನ್ನು ಮುಂದೆ ಖಾಸಗಿ ಬಸ್​ಗಳು ಯಾವ ಊರುಗಳಿಗೆ, ಯಾವ ಪ್ರದೇಶಗಳಿಗೆ ಬೇಕಾದರೂ ಹೋಗಬಹುದಾಗಿದೆ. ಇಲ್ಲಿಯವರೆಗೆ ಇದ್ದ ನಿಯಮ ಏನೆಂದರೆ, ಖಾಸಗಿ ಬಸ್​ಗಳಿಗೆ ಎಲ್ಲಾ ರೂಟ್​ಗಳಲ್ಲಿ ಕೆಎಸ್​ಆರ್​ಟಿಸಿ ಅವಕಾಶ ನೀಡುತ್ತಿರಲಿಲ್ಲ. ಎಲ್ಲಿ ಜನಸಂಖ್ಯೆ ಕಡಿಮೆ ಇದೆ, ವರ್ಕ್​ಔಟ್​ ಆಗುವುದಿಲ್ಲ ಎನ್ನುವ ಕೆಲವು ಕಡೆಗಳಲ್ಲಿ ಖಾಸಗಿ ಬಸ್​ಗಳಿಗೆ ಸರ್ಕಾರ ಅನುಮತಿ ನೀಡುತ್ತಿತ್ತು. ಕೆಲವೇ ಕೆಲವು ಊರುಗಳಿಗೆ ಮಾತ್ರ ಖಾಸಗಿ ಮತ್ತು ಕೆಎಸ್​ಆರ್​ಟಿಸಿ ಬಸ್​ ಈಗ ಚಲಿಸುತ್ತಿವೆಯಾದರೂ, ಎಷ್ಟೋ ರೂಟ್​ಗಳಲ್ಲಿ ಜನರು ಸರ್ಕಾರಿ ಬಸ್​ಗೆ ಕಾದು ಕುಳಿತುಕೊಳ್ಳುವ ಅನಿವಾರ್ಯತೆ ಇದೆ. 

ಅದೂ ಈಗ ಶಕ್ತಿ ಯೋಜನೆಯಿಂದಾಗಿ ಕೆಲವು ರೂಟ್​ಗಳಲ್ಲಿ ಬಸ್​ ಸಂಚಾರವನ್ನೇ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಪಾಡು ಕೇಳುವುದೇ ಬೇಡ. ಇದೀಗ ಸುಪ್ರೀಂಕೋರ್ಟ್​ ತೀರ್ಪಿನ ಅನ್ವಯ ಎಲ್ಲದ್ದಕ್ಕೂ ಕಡಿವಾಣ ಬಿದ್ದಿದೆ. ಖಾಸಗಿ ಬಸ್​ಗಳ ಜೊತೆ ಕೆಎಸ್​ಆರ್​ಟಿಸಿ ದರ ಸೇರಿದಂತೆ ಎಲ್ಲವುಗಳಲ್ಲಿಯೂ ಕಾಂಪೀಟ್​ ಮಾಡಲೇಬೇಕಿದೆ. ಸುಪ್ರೀಂಕೋರ್ಟ್​ ಆದೇಶದ ಅನ್ವಯ ಇದೀಗ ಖಾಸಗಿ ಬಸ್​ಗಳು ಎಲ್ಲಾ ರೂಟ್​ಗಳಲ್ಲಿಯೂ ಸಂಚರಿಸಲು ಅನುಮತಿ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಜನರು ಖಾಸಗಿ ಬಸ್​ನತ್ತ ಮುಖ ಮಾಡುವ ಸಾಧ್ಯತೆ ಇದೆ. ಉಚಿತ ಪ್ರಯಾಣ ಬಯಸುವವರು ಕೆಎಸ್​ಆರ್​ಟಿಸಿ ಮೊರೆ ಹೋದರೆ, ಉಳಿದವರು ಖಾಸಗಿ ಬಸ್​ಗಳತ್ತ ಒಲವು ತೋರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇದು ಕೆಎಸ್​ಆರ್​ಟಿಸಿಗೆ ಬಿಗ್​ ಶಾಕ್​ ಆಗಿದೆ. ಅಷ್ಟೇ ಅಲ್ಲದೇ ರಾಜಹಂಸ, ಸ್ಲೀಪರ್​ ಕೋಚ್​ಗಳ ದರವನ್ನು ಕಂಡು ಇದಾಗಲೇ ಶಾಕ್​ಗೆ ಒಳಗಾಗಿರುವ ಪ್ರಯಾಣಿಕರನ್ನು ಗಮನದಲ್ಲಿ ಇಟ್ಟುಕೊಂಡು ಖಾಸಗಿ ಬಸ್​ಗಳು ಎಲ್ಲಾ ರೂಟ್​ಗಳಲ್ಲಿ ಕಡಿಮೆ ದರ ನಿಗದಿ ಮಾಡುವ ಸಾಧ್ಯತೆಯೂ ಇದೆ. 

ವಕ್ಫ್​ ಆಸ್ತಿ ಕಬಳಿಕೆ ಆರೋಪಕ್ಕೆ 'ಸುಪ್ರೀಂ' ಮಾಸ್ಟರ್​ಸ್ಟ್ರೋಕ್​? ಸ್ಥಿರಾಸ್ತಿ ಮಾಲೀಕತ್ವದ ಕುರಿತು ಮಹತ್ವದ ತೀರ್ಪು