ಹೈದರಾಬಾದ್ನ ಪಬ್ ಒಂದರಲ್ಲಿ ವ್ಯಾಲೆಟ್ ಪಾರ್ಕಿಂಗ್ಗೆ ನೀಡಿದ್ದ ಬಿಎಂಡಬ್ಲ್ಯು ಕಾರು ಕಳುವಾದ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವಾಹನದ ಕಳ್ಳತನಕ್ಕೆ ಪಬ್ ಆಡಳಿತ ಮಂಡಳಿಯೇ ಜವಾಬ್ದಾರಿ ಎಂದು ಸ್ಪಷ್ಟಪಡಿಸಿ, 'ಸೇವೆಯಲ್ಲಿನ ನ್ಯೂನತೆ' ಎಂದು ಪರಿಗಣಿಸಿ ಮಾಲೀಕರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
ಹೈದರಾಬಾದ್: ಸಾಮಾನ್ಯವಾಗಿ ಹೋಟೆಲ್, ಪಬ್ ಅಥವಾ ಮಾಲ್ಗಳಿಗೆ ಹೋದಾಗ ಅಲ್ಲಿನ ಸಿಬ್ಬಂದಿಗೆ ನಮ್ಮ ವಾಹನದ ಕೀ ನೀಡಿ ವ್ಯಾಲೆಟ್ ಪಾರ್ಕಿಂಗ್ ಮಾಡಲು ಕೊಡುತ್ತೇವೆ. ಒಂದು ವೇಳೆ ಆ ವಾಹನಕ್ಕೆ ಏನಾದರೂ ಹಾನಿಯಾದರೆ ಅಥವಾ ಕಳವಾದರೆ ಯಾರು ಜವಾಬ್ದಾರರು? ಈ ಬಗ್ಗೆ ಹೈದರಾಬಾದ್ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗ-3 (Hyderabad District Consumer Disputes Redressal Commission-3) ಮಹತ್ವದ ತೀರ್ಪೊಂದನ್ನು ನೀಡಿದೆ.
ವ್ಯಾಲೆಟ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿದಾಗ, ವಾಹನಕ್ಕೆ ಯಾವುದೇ ಹಾನಿಯಾದರೂ ಅಥವಾ ಕಳವಾದರೂ ಅದರ ಸಂಪೂರ್ಣ ಜವಾಬ್ದಾರಿ ಆ ಸಂಸ್ಥೆಯ ಆಡಳಿತ ಮಂಡಳಿಯದ್ದೇ ಆಗಿರುತ್ತದೆ ಎಂದು ಕಮಿಷನ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಬಿಎಂಡಬ್ಲ್ಯು (BMW) ಕಾರು ಕಳ್ಳತನವಾಗಿದ್ದ ಪ್ರಕರಣದಲ್ಲಿ ಪಬ್ ಮಾಲೀಕರಿಗೆ ಭಾರಿ ದಂಡ ವಿಧಿಸಿದೆ.
ಏನಿದು ಘಟನೆ?
ಗಂಡಿಪೇಟೆ ಮಂಡಲದ ಮಂಚಿ ರೇವುಲ ನಿವಾಸಿ, ಉದ್ಯಮಿ ವಿ. ರಾಜಶೇಖರ್ ರೆಡ್ಡಿ ಎಂಬುವವರಿಗೆ ಸೇರಿದ ಬಿಎಂಡಬ್ಲ್ಯು ಎಕ್ಸ್5 (BMW X5) ಕಾರನ್ನು ಅವರ ಮಗ ರೇವಂತ್, 2022ರ ಮೇ 7ರಂದು ತನ್ನ ಸ್ನೇಹಿತರೊಂದಿಗೆ ನಾನಕ್ರಾಮ್ಗುಡಾದಲ್ಲಿರುವ ‘ಜೀರೋ 40 ಬ್ರೂಯಿಂಗ್’ (Zero 40 Brewing) ಪಬ್ಗೆ ಕೊಂಡೊಯ್ದಿದ್ದರು. ಪಬ್ ತಲುಪಿದ ನಂತರ ಅಲ್ಲಿನ ಸಿಬ್ಬಂದಿಗೆ ಕಾರಿನ ಕೀ ನೀಡಿ ವ್ಯಾಲೆಟ್ ಪಾರ್ಕಿಂಗ್ ಟ್ಯಾಗ್ ಪಡೆದುಕೊಂಡಿದ್ದರು. ಆದರೆ, ಪಾರ್ಟಿ ಮುಗಿಸಿ ಹೊರಬರುವಷ್ಟರಲ್ಲಿ ಕಾರು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸುದೀರ್ಘ ಶೋಧದ ನಂತರ, ಪೊಲೀಸರು 2023ರ ಆಗಸ್ಟ್ 21 ರಂದು ಕಾರನ್ನು ಪತ್ತೆ ಹಚ್ಚಿ ಮಾಲೀಕರಿಗೆ ಒಪ್ಪಿಸಿದ್ದರು. ಕಾರು ಸಿಕ್ಕ ನಂತರ ಮಾಲೀಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಿಪೇರಿ ಮಾಡಿಸಿದ್ದರು.
ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ ಮಾಲೀಕರು
ಕಾರು ಕಳುವಾದ ಸಮಯದಲ್ಲಿ ತೀವ್ರ ಮಾನಸಿಕ ವೇದನೆ ಅನುಭವಿಸಿದ್ದಾಗಿ ಮತ್ತು ಪಬ್ ಆಡಳಿತ ಮಂಡಳಿ ಬೇಜವಾಬ್ದಾರಿತನ ತೋರಿದ್ದಾಗಿ ಉದ್ಯಮಿ ರಾಜಶೇಖರ್ ರೆಡ್ಡಿ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು. ಆದರೆ, ಕಳ್ಳತನಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಪಬ್ ಮಾಲೀಕರು ವಾದಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಎಂ. ರಾಮಗೋಪಾಲ್ ರೆಡ್ಡಿ, ಸದಸ್ಯರಾದ ಜೆ. ಶ್ಯಾಮಲಾ ಮತ್ತು ಡಿ. ಮಾಧವಿಲತಾ ಅವರ ಪೀಠವು, ಇದು 'ಸೇವೆಯಲ್ಲಿನ ನ್ಯೂನತೆ' (Deficiency in Service) ಎಂದು ತೀರ್ಪು ನೀಡಿದೆ. ಪಬ್ನ ಮಾತೃ ಸಂಸ್ಥೆಗಳಾದ ‘ಬಾಂಬೆ ಡಕ್ ಡೈನಿಂಗ್ ಕಂಪನಿ’ ಮತ್ತು ‘ರೆವಲ್ಯೂಷನ್ ಕ್ರಾಫ್ಟ್ ಬ್ರೂಸ್’ ಆಡಳಿತ ಮಂಡಳಿಗೆ ದಂಡ ವಿಧಿಸಿದೆ.
ನ್ಯಾಯಾಲಯ ನೀಡಿದ ಆದೇಶವೇನು?
ಕಾರು ರಿಪೇರಿಗಾಗಿ ತಗುಲಿದ ವೆಚ್ಚ ರೂ. 2,08,937 ಅನ್ನು ಶೇ. 9ರಷ್ಟು ಬಡ್ಡಿಯೊಂದಿಗೆ ಗ್ರಾಹಕನಿಗೆ ಪಾವತಿಸಬೇಕು. ಗ್ರಾಹಕನಿಗಾದ ಅಸೌಕರ್ಯ ಮತ್ತು ಮಾನಸಿಕ ವೇದನೆಗೆ ಪರಿಹಾರವಾಗಿ ರೂ. 50,000 ನೀಡಬೇಕು. ಪ್ರಕರಣದ ಕಾನೂನು ಹೋರಾಟದ ಖರ್ಚಿಗಾಗಿ ರೂ. 10,000 ಪಾವತಿಸಬೇಕು ಎಂದು ಪಬ್ ಮಾಲೀಕರಿಗೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

