IAS Prathap Murugan: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ 1,200 ಬತ್ತಿಹೋದ ಬೋರ್‌ವೆಲ್‌ಗಳನ್ನು ಮಳೆನೀರು ಕೊಯ್ಲು ಘಟಕಗಳಾಗಿ ಮಾರ್ಪಡಿಸಿ, ಅಂತರ್ಜಲ ಮಟ್ಟವನ್ನು 5 ರಿಂದ 10 ಅಡಿ ಹೆಚ್ಚಿಸಿದ ಐಎಎಸ್ ಅಧಿಕಾರಿ ಪ್ರತಾಪ್ ಮುರುಗನ್ ಅವರ ಸಾರ್ಥಕ ಪ್ರಯತ್ನಕ್ಕೆ ನಟ ಆರ್. ಮಾಧವನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಟ ಆರ್. ಮಾಧವನ್ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಂದರವಾದ ಪೋಸ್ಟ್‌ ಶೇರ್ ಮಾಡುವ ಮೂಲಕ ನಮ್ಮ ದಿನವನ್ನು ಉತ್ಸಾಹಭರಿತಗೊಳಿಸಲು ಎಂದಿಗೂ ಮರೆಯುವುದಿಲ್ಲ. ನಿರ್ದೇಶಕ ಆದಿತ್ಯ ಧರ್ ಅವರ ಬ್ಲಾಕ್‌ಬಸ್ಟರ್ ಚಿತ್ರ ಧುರಂಧರ್ 2 (Dhurandhar 2) ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಈ ನಟ, ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ಸ್ವಾರಸ್ಯಕರ ಮಾನವೀಯ ಕಥೆಗಳು, ಪ್ರಾಣಿಗಳ ವಿಡಿಯೋಗಳು ಮತ್ತು ಪ್ರೇರಣಾದಾಯಿಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇದು ಸಿನಿಮಾಗಳನ್ನು ಹೊರತುಪಡಿಸಿ ಮ್ಯಾಡಿ ರಿಯಲ್ ಲೈಫ್ ಸಾಧಕರು ಮತ್ತು ಅರ್ಥಪೂರ್ಣ ಕೆಲಸಗಳನ್ನು ಕೊಂಡಾಡುವಲ್ಲಿಯೂ ತೀವ್ರ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ.

ಇತ್ತೀಚೆಗೆ, ಮಾಧವನ್ ಅವರು ತಮಿಳುನಾಡಿನ ಐಎಎಸ್ ಅಧಿಕಾರಿಯೊಬ್ಬರ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ. ಆ ಅಧಿಕಾರಿಯು 1,200 ಕೈಬಿಟ್ಟ/ಬಳಕೆಯಿಲ್ಲದ ಬೋರ್‌ವೆಲ್‌ಗಳನ್ನು ಮಳೆನೀರು ಕೊಯ್ಲು (Rainwater Harvesting) ಘಟಕಗಳಾಗಿ ಪರಿವರ್ತಿಸಿದ್ದರು. ಇದರಿಂದ ಹಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ 5 ರಿಂದ 10 ಅಡಿಗಳಷ್ಟು ಹೆಚ್ಚಾಗಿದ್ದು, ಬಾವಿಗಳಿಗೆ ಜೀವ ಬಂದಿದೆ ಹಾಗೂ ಸ್ಥಳೀಯ ರೈತ ಸಮುದಾಯಕ್ಕೆ ನೆರವಾಗಿದೆ.

ಜಲ ಸಂರಕ್ಷಕನಾದ ರೈತನ ಮಗ

ಐಎಎಸ್ ಅಧಿಕಾರಿ ಪ್ರತಾಪ್ ಮುರುಗನ್ ಅವರು ವಿರುದುನಗರದ ಕೃಷಿ ಕುಟುಂಬವೊಂದರಲ್ಲಿ ಜನಿಸಿದವರು, ಹೀಗಾಗಿ ಅವರಿಗೆ ಜಲ ಸಂರಕ್ಷಣೆಯ ಮಹತ್ವ ಚೆನ್ನಾಗಿ ತಿಳಿದಿತ್ತು. 'ದಿ ಬೆಟರ್ ಇಂಡಿಯಾ' ವರದಿಯ ಪ್ರಕಾರ, ಅವರ ಮನೆಯ ಪ್ರತಿಯೊಬ್ಬರೂ ನೀರನ್ನು ಅತ್ಯಂತ ಜಾಗರೂಕತೆಯಿಂದ ಅಳೆದು ತೂಗಿ ಬಳಸುತ್ತಿದ್ದರು. ಬಾಲ್ಯದಲ್ಲಿ, ಸಮಾಜಕ್ಕೆ ಸೇವೆ ಸಲ್ಲಿಸುವ ಕನಸಿನೊಂದಿಗೆ ಅವರು ಕಿಲೋಮೀಟರ್‌ಗಟ್ಟಲೆ ಸೈಕಲ್ ತುಳಿದು ಶಾಲೆಗೆ ಹೋಗುತ್ತಿದ್ದರು. ತಮ್ಮ ಈ ಕನಸು ಶೀಘ್ರದಲ್ಲೇ ನನಸಾಗುತ್ತದೆ ಎಂಬುದು ಆಗ ಅವರಿಗೆ ತಿಳಿದಿರಲಿಲ್ಲ.

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ, ಪ್ರತಾಪ್ ಮುರುಗನ್ ಅವರು ಗ್ರಾಮಗಳಲ್ಲಿ ಬೋರ್‌ವೆಲ್‌ಗಳು ವಿಫಲವಾಗುತ್ತಿರುವುದನ್ನು ಗಮನಿಸಿದರು. ರೈತರು ನೀರಿಗಾಗಿ ಇನ್ನಷ್ಟು ಆಳಕ್ಕೆ ಕೊರೆಯುತ್ತಿದ್ದರು ಆದರೆ ಅದು ವ್ಯರ್ಥವಾಗುತ್ತಿತ್ತು. ಆದರೆ, ಪ್ರತಿ ಮುಂಗಾರಿನಲ್ಲೂ ಒಣನೆಲ ನೀರನ್ನು ಹೀರಿಕೊಳ್ಳುವ ಮುನ್ನವೇ ಸಾವಿರಾರು ಲೀಟರ್ ಮಳೆನೀರು ಚರಂಡಿ ಮತ್ತು ಕಾಲುವೆಗಳ ಮೂಲಕ ಹರಿದುಹೋಗುತ್ತಿತ್ತು. ಆಗಲೇ ಅವರಿಗೆ ಒಂದು ಆಲೋಚನೆ ಹೊಳೆದದ್ದು.

ಅಂತರ್ಜಲ ಮರುಪೂರಣ ವ್ಯವಸ್ಥೆ

ತಿರುವಳ್ಳೂರಿನಾದ್ಯಂತ ನೀರಿಲ್ಲದೆ ಬರಿದಾದ ಸಾವಿರಾರು ಬೋರ್‌ವೆಲ್‌ಗಳನ್ನು ಮುಚ್ಚಲಾಗಿದೆ ಅಥವಾ ಹಾಗೆಯೇ ಮರೆತು ಬಿಡಲಾಗಿದೆ ಎಂಬುದನ್ನು ಪ್ರತಾಪ್ ಮುರುಗನ್ ಗ್ರಹಿಸಿದರು. ಅದೇ ಬೋರ್‌ವೆಲ್‌ಗಳನ್ನು ಬಳಸಿ ಮಳೆ ನೀರನ್ನು ಮತ್ತೆ ಭೂಗರ್ಭಕ್ಕೆ ಕಳುಹಿಸುವುದು ಅವರ ತಂತ್ರವಾಗಿತ್ತು. ಪ್ರತಾಪ್ ಅವರ ನೇತೃತ್ವದಲ್ಲಿ, ಜಿಲ್ಲೆಯು 1,200 ಕ್ಕೂ ಹೆಚ್ಚು ಬಳಕೆಯಿಲ್ಲದ ಬೋರ್‌ವೆಲ್‌ಗಳನ್ನು ವಿಶಾಲವಾದ ಅಂತರ್ಜಲ ಮರುಪೂರಣ (Groundwater Recharge) ವ್ಯವಸ್ಥೆಗೆ ಜೋಡಿಸುವ ಮೂಲಕ ಮಳೆನೀರು ಕೊಯ್ಲು ಘಟಕಗಳಾಗಿ ಮರುಬಳಕೆ ಮಾಡಿತು.

5 ರಿಂದ 10 ಅಡಿಗಳಷ್ಟು ಹೆಚ್ಚಾಯಿತು ಅಂತರ್ಜಲ ಮಟ್ಟ

ಮಳೆನೀರು ಚರಂಡಿ ಮತ್ತು ಕಾಲುವೆಗಳ ಮೂಲಕ ಹರಿದು ಪೋಲಾಗಲು ಬಿಡುವ ಬದಲು, ನೀರನ್ನು ಈ ಬಳಕೆಯಿಲ್ಲದ ಬೋರ್‌ವೆಲ್‌ಗಳಿಗೆ ಹರಿಸಲಾಯಿತು. ಇದರಿಂದ ನೀರು ಭೂಮಿಯ ಆಳಕ್ಕೆ ಇಳಿದು, ಬರಿದಾಗಿದ್ದ ಅಂತರ್ಜಲದ ಸ್ತರಗಳನ್ನು ಮತ್ತೆ ತುಂಬಲು ಸಾಧ್ಯವಾಯಿತು. ಈ ಯೋಜನೆಯ ವಿಶೇಷತೆಯೆಂದರೆ ಅದರ ಸರಳತೆ. ದುಬಾರಿ ಯಂತ್ರೋಪಕರಣಗಳನ್ನು ನೆಚ್ಚಿಕೊಳ್ಳುವ ಬದಲು ಅಥವಾ ಬೃಹತ್ ಆಣೆಕಟ್ಟು ಯೋಜನೆಗಳನ್ನು ಪ್ರಾರಂಭಿಸುವ ಬದಲು, ಆಡಳಿತವು ಸ್ಥಳೀಯ ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಜೊತೆಗೆ ಲಭ್ಯವಿದ್ದ ಮೂಲಸೌಕರ್ಯವನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡಿತು.

ಮೊದಲ ಮುಂಗಾರಿನ ತಕ್ಷಣವೇ ಇದರ ಪ್ರಭಾವ ಸ್ಪಷ್ಟವಾಗಿ ಕಂಡುಬಂತು. ವರದಿಗಳ ಪ್ರಕಾರ, ತಿರುವಳ್ಳೂರಿನ ಹಲವು ಭಾಗಗಳಲ್ಲಿ ಅಂತರ್ಜಲ ಮಟ್ಟ 5 ರಿಂದ 10 ಅಡಿಗಳಷ್ಟು ಹೆಚ್ಚಾಯಿತು. ವರ್ಷಗಟ್ಟಲೆ ಒಣಗಿದ್ದ ಬಾವಿಗಳು ಮತ್ತೆ ನೀರನ್ನು ಸಂಗ್ರಹಿಸಲು ಪ್ರಾರಂಭಿಸಿದವು, ನೀರು ಪೂರೈಸುವ ಟ್ಯಾಂಕರ್‌ಗಳ ಮೇಲೆ ಅವಲಂಬಿತವಾಗಿದ್ದ ಹಳ್ಳಿಗಳಲ್ಲಿ ಕೈಪಂಪ್‌ಗಳು (Hand pumps) ಕೆಲಸ ಮಾಡಲು ಪ್ರಾರಂಭಿಸಿದವು. ಮತ್ತು ಪದೇ ಪದೇ ಬರಗಾಲವನ್ನು ಎದುರಿಸಿದ್ದ ಅನೇಕ ರೈತರು ತಮ್ಮ ಹೊಲಗಳಿಗೆ ನೀರು ಹಿಂತಿರುಗುವುದನ್ನು ಕಣ್ಣಾರೆ ಕಂಡರು.

View post on Instagram