ಭಾರತ-ಪಾಕ್ ಗಡಿಯಲ್ಲಿ ನಿರ್ಮಾಣವಾಗಲಿದೆ ಛತ್ರಪತಿ ಶಿವಾಜಿ ಪ್ರತಿಮೆ!
ಹಿಂದು ಹೃದಯಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಎಲ್ಓಸಿಯಲ್ಲಿ ಸ್ಥಾಪನೆ ಮಾಡುವ ನಿರ್ಧಾರ ಮಾಡಲಾಗಿದೆ. ಕಾಶ್ಮೀರದ ಕಿರಣ್ ಹಾಗೂ ತಂಗ್ಧರ್-ತಿಟ್ವಾಲ್ ಪ್ರದೇಶಗಳಲ್ಲಿ ಶಿವಾಜಿಯ ಪ್ರತಿಮೆ ನೆಲೆಯೂರಲಿದ್ದು, ಅದಕ್ಕೆ ಶಿವಾಜಿಯ ಹುಟ್ಟೂರಿನಿಂದ ಮಣ್ಣನ್ನು ತರಲಾಗುತ್ತದೆ.
ನವದೆಹಲಿ (ಫೆ.16): ಭಾರತ ಹಾಗೂ ಪಾಕಿಸ್ತಾನದ ನಡುವಿನ ಎಲ್ಓಸಿಯಲ್ಲಿ ಛತ್ರಪತಿ ಶಿವಾಜಿಯ ಭವ್ಯ ಪ್ರತಿಮೆಯನ್ನು ಸ್ಥಾಪನೆ ಮಾಡುವುದಾಗಿ 'ಅಮೀ ಪುಣೇಕರ್' (ನಾವು ಪುಣೆಯವರು) ಎನ್ಜಿಓ ಘೋಷಣೆ ಮಾಡಿದೆ. 2023ರ ಫೆಬ್ರವರಿ 14 ರಂದು ಎನ್ಜಿಓ ಈ ಪ್ರಕಟಣೆಯನ್ನು ನೀಡಿದ್ದು ಎಲ್ಓಸಿಯ ಎರಡು ಕಡೆ ಶಿವಾಜಿಯ ಪ್ರತಿಮೆಯನ್ನು ನಿರ್ಮಾಣ ಮಾಡುವುದಾಗಿ ಹೇಳಿದೆ. ಶತ್ರುಗಳ ವಿರುದ್ಧ ಹೋರಾಡುವ ಸೈನಿಕರು ಪ್ರತಿನಿತ್ಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ನೋಡುವ ಮೂಲಕ ಅವರ ಆದರ್ಶ ಮತ್ತು ನೈತಿಕ ಮೌಲ್ಯಗಳಿಂದ ಪ್ರೇರಣೆ ಪಡೆಯುತ್ತಾರೆ ಮತ್ತು ಅವರು ಹಿಂದೂ ರಾಜನ ಶೌರ್ಯವನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಶತ್ರುಗಳ ವಿರುದ್ಧ. ಹೋರಾಡುವ ಶಕ್ತಿಯನ್ನು ಪಡೆಯುತ್ತಾರೆ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಪ್ರತಿಮೆಯನ್ನು ಎಲ್ಓಸಿಯಲ್ಲಿ ಅಮೀ ಪುಣೇಕರ್ ಎನ್ಜಿಒ ಕಡೆಯಿಂದಲೇ ನಿರ್ಮಾಣ ಮಾಡಲಾಗುತ್ತದೆ. ವರದಿಗಳ ಪ್ರಕಾರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಕಾಶ್ಮೀರದಲ್ಲಿ ಬರುವ ಗಡಿ ನಿಯಂತ್ರಣ ರೇಖೆಯ ಕಿರಣ್ ಮತ್ತು ತಂಗ್ಧರ್-ತಿಟ್ವಾಲ್ ಕಣಿವೆಗಳಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದೆ.
ಕಾಶ್ಮೀರದ ಕುಪ್ವಾರ ಜಿಲ್ಲಾಧಿಕಾರಿ ಡಾ.ಸಾಗರ್ ದತ್ತಾತ್ರೇಯ ದೋಯ್ಪೋಡೆ ಅವರ ಅನುಮತಿ ಮೇರೆಗೆ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಛತ್ರಪತಿ ಶಿವಾಜಿ ಮಹಾರಾಜ್ ಅಟಕೆಪರ್ ಸ್ಮಾರಕ ಸಮಿತಿಯ ಮುಖ್ಯಸ್ಥ ಅಭಯರಾಜ್ ಶಿರೋಳೆ ಮತ್ತು ನಾವು ಪುಣೇಕರ್ ಎನ್ಜಿಒ ಅಧ್ಯಕ್ಷ ಹೇಮಂತ್ ಜಾಧವ್ ಯೋಜನೆಯನ್ನು ರೂಪಿಸಿದ್ದಾರೆ.
ಹೇಮಂತ್ ಜಾಧವ್ ಈ ಕುರಿತಾಗಿ ವಿವರ ನೀಡಿದ್ದು ''ಮಾರ್ಚ್ ಅಂತ್ಯದೊಳಗೆ ಪ್ರತಿಮೆ ಸ್ಥಾಪನೆ ಕಾಮಗಾರಿಯ ಭೂಮಿಪೂಜೆ ನಡೆಯಲಿದೆ. ಶಿವಾಜಿ ಮಹಾರಾಜರ ಕಾಲಿನಿಂದ ಪಾವನವಾದ ರಾಯಗಡ, ತೋರಣ, ಶಿವನೇರಿ, ರಾಜ್ಗಡ ಮತ್ತು ಪ್ರತಾಪಗಡ ಕೋಟೆಗಳ ಮಣ್ಣು ಮತ್ತು ನೀರನ್ನು ಆಮ್ಹಿ ಪುಣೇಕರ್ ಎನ್ಜಿಒ ಭೂಮಿ ಪೂಜೆಗಾಗಿ ಕಾಶ್ಮೀರಕ್ಕೆ ಕೊಂಡೊಯ್ಯುತ್ತದೆ' ಎಂದಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ರಣತಂತ್ರ ಹಾಗೂ ಸಾಹಸದಿಂದ ಶತ್ರುಗಳನ್ನು ಓಡಿಸಿದರು. ಪ್ರಪಂಚದ ವಿವಿಧ ದೇಶಗಳು ಶಿವಾಜಿ ಮಹಾರಾಜರ ಗೆರಿಲ್ಲಾ ಯುದ್ಧ ತಂತ್ರಗಳನ್ನು ಅನುಸರಿಸುತ್ತವೆ. ಗಡಿಯಲ್ಲಿರುವ ಭಾರತೀಯ ಸೈನಿಕರಿಗೆ ಶಿವರಾಯರ ಆದರ್ಶಗಳು ಮತ್ತು ಪ್ರತಿಮೆಯ ಮೂಲಕ ಪ್ರೇರಣೆಯೊಂದಿಗೆ ಸ್ಫೂರ್ತಿ ನೀಡಲು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಭಾರತ-ಪಾಕಿಸ್ತಾನ ಗಡಿಯಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಅಭಯ್ ರಾಜ್ ಶಿರೋಳೆ ತಿಳಿಸಿದ್ದಾರೆ.
ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ವೇಳೆ ಅವಘಡ, ಸಂಸದೆ ಸುಪ್ರಿಯಾ ಸುಳೆ ಸೀರೆಗೆ ಹೊತ್ತಿಕೊಂಡ ಬೆಂಕಿ!
ಮರಾಠ ರೆಜಿಮೆಂಟ್ನಿಂದ ಎರಡು ಪ್ರತಿಮೆ: ಇನ್ನು ಜಮ್ಮು ಕಾಶ್ಮೀರದಲ್ಲಿ ಈಗಾಗಲೇ ಭಾರತೀಯ ಸೇನೆಯ ಅಧಿಕೃತ ಎರಡು ಶಿವಾಜಿ ಮಹಾರಾಜರ ಪ್ರತಿಮೆಗಳಿವೆ. 2022ರ ಜನವರಿಯಲ್ಲಿ ಸೇನೆಯ ಮರಾಠ ರೆಜಿಮೆಂಟ್ ಛತ್ರಪತಿ ಶಿವಾಜಿ ಮಹಾರಾಜರ ಎರಡು ಪ್ರತಿಮೆಗಳನ್ನು ಸ್ಥಾಪನೆ ಮಾಡಿದೆ.
ಶಿವಾಜಿ ಅವಹೇಳನ: ಮಹಾ ರಾಜ್ಯಪಾಲರ ವಜಾಗೆ ಸಿಎಂ ಶಿಂಧೆ ಬಣ ಆಗ್ರಹ
ಇದರಲ್ಲಿ ಒಂದು ಪ್ರತಿಮೆಯನ್ನು ಎಲ್ಓಸಿಯ ಬಳಿ ಇದ್ದು, ಸಮುದ್ರಮಟ್ಟಕ್ಕಿಂತ 14,800 ಅಡಿ ಎತ್ತರದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಎರಡು ಪ್ರತಿಂಎಗಳು ಇದಕ್ಕಿಂತ ಎತ್ತರದ ಪ್ರದೇಶದಲ್ಲಿ ಪುಣೆಯ ಎನ್ಜಿಓ ನಿರ್ಮಾಣ ಮಾಡಲಿದೆ.