ಪಹಲ್ಗಾಂ ಉಗ್ರದಾಳಿಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಜಲಗಾಂವ್‌ನ ಸಾಮೂಹಿಕ ವಿವಾಹದಲ್ಲಿ ವರರು ಪಾಕಿಸ್ತಾನದ ಧ್ವಜವನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು. ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮೌನಾಚರಣೆ ನಡೆಸಲಾಯಿತು. ದಾಳಿಯಲ್ಲಿ ೨೬ ಜನರು ಸಾವನ್ನಪ್ಪಿದ್ದರು. ಎನ್‌ಐಎ ತನಿಖೆ ಆರಂಭಿಸಿದೆ.

ಮುಂಬೈ: ಪಹಲ್ಗಾಂ ಉಗ್ರರ ದಾಳಿಯನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿವೆ. ಕೆಲವರು ರಾತ್ರಿ ಮೇಣದ ಬತ್ತಿ ಹಿಡಿದು ಪ್ರತಿಭಟಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಲಾಯ್ತು. ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿಯೂ ಪಹಲ್ಗಾಂ ದಾಳಿಯನ್ನು ಖಂಡಿಸಲಾಯ್ತು. ಮೊದಲು ಶ್ರದ್ದಾಂಜಲಿ ಸಲ್ಲಿಸಲಾಯ್ತು, ನಂತರ ವರರು ಪಾಕಿಸ್ತಾನದ ಧ್ವಜವನ್ನ ಹರಿಯುವ ಮೂಲಕ ಆಕ್ರೋಶ ಹೊರಹಾಕಿದರು. ಈ ಸಾಮೂಹಿಕ ವಿವಾಹವನ್ನು ಜಲಗಾಂವ್‌ ನಗರದ ಶಿಜ್ಗರ್ ಮುಸ್ಲಿಂ ಸಮಾಜ ಫೌಂಡೇಶನ್ ಸುಪ್ರೀಮ್ ಕಾಲೋನಿ ಆಯೋಜಿಸಿತ್ತು.

Add Asianetnews Kannada as a Preferred SourcegooglePreferred

ಈ ಸಾಮೂಹಿಕ ವಿವಾಹದಲ್ಲಿ ಜಲಗಾಂವ್‌ ಜಿಲ್ಲಾ ಮುಸ್ಲಿಂ ಮನಿಹಾರ್ ಬಾತೃತ್ವ ಸಂಘದ ಅಧ್ಯಕ್ಷ ಫಾರೂಖ್ ಶೇಖ್ ಜನರ ಮುಂದೆ ಮೂರು ಪ್ರಸ್ತಾಪಗಳನ್ನು ಇರಿಸಿದ್ದರು. ಈ ಮೂರು ಪ್ರಸ್ತಾಪಗಳಿಗೆ ಒಮ್ಮತದಿಂದ ಒಪ್ಪಿಗೆ ನೀಡಲಾಯ್ತು. ಸಾಮೂಹಿಕ ವಿವಾಹ ನಡೆಯುವ ಸ್ಥಳಕ್ಕೆ ಎಲ್ಲಾ ಜೋಡಿಗಳನ್ನು ಕರೆಸಲಾಯ್ತು. ಖಾಜಿಯವರು ನಿಖಾ ನೆರವೇರಿಸುವ ಮೊದಲು ವರರನ್ನು ವೇದಿಕೆ ಮೇಲೆ ಕರೆಸಲಾಯ್ತು. ನಂತರ ಎಲ್ಲರ ಕೈಗೆ ಪಾಕಿಸ್ತಾನದ ಧ್ವಜ ಮುದ್ರಿತ ಪೇಪರ್ ನೀಡಲಾಯ್ತು. ಈ ಪೇಪರ್ ಹರಿಯುವ ಮೂಲಕ ಪಹಲ್ಗಾಮ್‌ನಲ್ಲಿ ಹತರಾದ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ನಂತರ ಮೌನಾಚರಣೆಯನ್ನು ಸಲ್ಲಿಸಲಾಯ್ತು. ಆ ಬಳಿಕ ನಿಖಾ ನೆರವೇರಿಸಲಾಯ್ತು. 

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಒಟ್ಟು 26 ಜನರು ಮೃತರಾಗಿದ್ರು. ಈ ದಾಳಿಯನ್ನು ಜಲಗಾಂವ್‌ನಲ್ಲಿ ನಡೆಸ ಸಾಮೂಹಿಕ ವಿವಾಹದಲ್ಲಿ ಒಕ್ಕೊಲಿರಿನಿಂದ ಖಂಡಿಸಲಾಯ್ತು. ಮದುವೆಗೆ ಆಗಮಿಸಿದ ಅತಿಥಿಗಳು ಸಹ ಪಾಕಿಸ್ತಾನದ ಧ್ವಜ ಮುದ್ರಿತ ಕಾಗದ ಮತ್ತು ಉಗ್ರಗಾಮಿಗಳ ರೇಖಾಚಿತ್ರ ಹರಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. 

ಇದನ್ನೂ ಓದಿ: ಪಹಲ್ಗಾಮ್ ದಾಳಿಯ ನಂತರವೂ ಮತ್ತೆ ಕಾಶ್ಮೀರದತ್ತ ಮುಖ ಮಾಡ್ತಿರುವ ಪ್ರವಾಸಿಗರು

ಪಾಕ್‌ನಿಂದ 22 ಗಂಟೆ ನಡೆದು ಬಂದಿದ್ದ ಉಗ್ರರು!
ಪಹಲ್ಗಾಂನಲ್ಲಿ ಉಗ್ರರು ದಾಳಿ ನಡೆಸುವ ಮುನ್ನ ಸತತ 22 ತಾಸುಗಳ ಕಾಲ ನಡೆದುಕೊಂಡು ಬಂದಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ದಾಳಿಗೂ ಮುನ್ನ ಉಗ್ರರು ಕೋಕರ್‌ನಾಗ್‌ನಿಂದ 20-22 ತಾಸುಗಳ ಕಾಲ ಕೋಕರ್‌ನಾಗ್‌ನಿಂದ ದಟ್ಟ ಅರಣ್ಯದ ಮೂಲಕ ಬಂದಿದ್ದರು. ನಾಲ್ವರು ಈ ಮಾರ್ಗವಾಗಿ ಬಂದಿದ್ದು, ಅದರಲ್ಲಿ ಮೂರ್ವರು ಪಾಕಿಸ್ತಾನಿಯರು ಮತ್ತು ಓರ್ವ ಸ್ಥಳೀಯ ಉಗ್ರನಿದ್ದ ಎನ್ನಲಾಗಿದೆ. ದಾಳಿ ಮಾಡಿದ ಬಳಿಕ ಓರ್ವ ಸ್ಥಳೀಯ ಮತ್ತು ಓರ್ವ ಪ್ರವಾಸಿಗನ ಫೋನ್‌ಗಳನ್ನು ಉಗ್ರರು ವಶಪಡಿಸಿಕೊಂಡಿದ್ದರು. ವಿಧಿವಿಜ್ಞಾನ ಪರೀಕ್ಷೆ ವೇಳೆ ದಾಳಿಯಲ್ಲಿ ಉಗ್ರರು ಎಕೆ 47 ಮತ್ತು ಎಂ4 ರೈಫಲ್‌ಗಳನ್ನು ಬಳಸಿರುವುದು ಖಾತ್ರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ದಾಳಿಕೋರರ ಪತ್ತೆಗೆ ಕ್ರಮ
ಪಹಲ್ಗಾಂ ಉಗ್ರ ದಾಳಿಯ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನ್ನ ತೆಕ್ಕೆಗೆ ತೆಗದುಕೊಂಡಿದೆ.ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಎನ್‌ಐಎ, ‘ಈಗಾಗಲೇ ನಾವು ತನಿಖೆಯನ್ನು ಆರಂಭಿಸಿದ್ದೇವೆ. ಕಳೆದ ಮಂಗಳವಾರ ಬೈಸರನ್‌ನಲ್ಲಿ ಘಟನೆ ನಡೆದ ಹೊತ್ತಿನಲ್ಲಿದ್ದ ಅಲ್ಲಿ ಇದ್ದ ವ್ಯಕ್ತಿಗಳಿಂದ ಸಣ್ಣಸಣ್ಣ ಮಾಹಿತಿಯನ್ನು ಕಲೆ ಹಾಕುವ ಯತ್ನ ಮಾಡುತ್ತಿದ್ದೇವೆ. ಈ ಮೂಲಕ ದಾಳಿಕೋರರ ಪತ್ತೆಗೆ ಕ್ರಮ ಕೈಗೊಂಡಿದ್ದೇವೆ’ ಎಂದು ಹೇಳಿದೆ. ದಾಳಿಯ ಪ್ರತ್ಯಕ್ಷದರ್ಶಿಗಳನ್ನು ಪೊಲೀಸ್ ಮಹಾನಿರ್ದೇಶಕ (ಐಜಿಪಿ), ಉಪಪೊಲೀಸ್ ಮಹಾನಿರ್ದೇಶಕ (ಡಿಐಜಿಪಿ) ಮತ್ತು ಭಯೋತ್ಪಾದನಾ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ)ಯ ಮೇಲ್ವಿಚಾರಣೆಯಲ್ಲಿ ಎನ್‌ಐಎ ತಂಡಗಳು ವಿಚಾರಿಸುತ್ತಿವೆ. 

ಇದನ್ನೂ ಓದಿ: ಶತ್ರುವಿನ ಶತ್ರು ಮಿತ್ರ: ಅಫ್ಘಾನ್ ವಿದೇಶಾಂಗ ಸಚಿವರ ಭೇಟಿ ಮಾಡಿದ ಭಾರತೀಯ ರಾಯಭಾರಿ